Thursday, November 19, 2009

ಬದಲಾದದ್ದು ನಾವು, ಮಳೆರಾಯನಲ್ಲ



ಜಾಗತಿಕ ತಾಪಮಾನ ಹೆಚ್ಚಳದಿಂದ ವಾತಾವರಣದಲ್ಲಿ ಏರುಪೇರು ಉಂಟಾಗಿ ಮಳೆ, ಬಿಸಿಲುಗಳಲ್ಲಿ ವ್ಯತ್ಯಾಸ ಕಂಡು ಬರುತ್ತದೆ. ಅಕಾಲಿಕ ಮಳೆ, ಪ್ರವಾಹ, ಚಂಡಮಾರುತಗಳು ಉಂಟಾಗುತ್ತವೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಈ ಹೇಳಿಕೆಗಳಲ್ಲಿ ಸತ್ಯಾಂಶವಿರಬಹುದು. ಆದರೆ ತುಳುನಾಡಿನ ಬೆಳೆಗಳಿಗೆ ಸಂಬಂಧಪಟ್ಟಂತೆ ಇದು ಎಷ್ಟು ಸರಿ ಎಂಬುದು ಜಿಜ್ಞಾಸೆಯಾಗಿದೆ.
ಫಯಾನ್ ಚಂಡಮಾರುತದಿಂದ ತುಳುನಾಡಿನ ಭತ್ತದ ಬೆಳೆಗಳಿಗೆ ಅಪಾರ ಹಾನಿ ಉಂಟಾಯಿತು. ಕಟಾವು ಮಾಡಲ್ಪಟ್ಟ ಭತ್ತದಗಿಡಗಳ ಸೂಡಿಗಳು ನೆರೆನೀರಿನಲ್ಲಿ ತೇಲಾಡತೊಡಗಿದವು. ಇದು ಈ ಬಾರಿ ಮಾತ್ರ ಸಂಭವಿಸಿದ ಅನಾಹುತ ಎಂದು ನಾವು ತಿಳಿದುಕೊಳ್ಳಬೇಕಾಗಿಲ್ಲ. ವರ್ಷ ವರ್ಷವೂ ಈ ರೀತಿಯ ಬೆಳೆಹಾನಿ ಸಂಭವಿಸುತ್ತಲೇ ಇರುತ್ತದೆ. ನಾಟಿ ಸಂದರ್ಭದಲ್ಲಿ ಮಳೆ ನಾಪತ್ತೆಯಾಗಿ, ಕಣ್ಣಾಮುಚ್ಚಾಲೆಯಾಡುತ್ತಾ ರೈತರನ್ನು ಸತಾಯಿಸುವ ಮಳೆ ಕಟಾವು ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿ ಕಂಗಾಲಾಗುವಂತೆ ಮಾಡುತ್ತದೆ. ಈಚೇಚೆಗೆ ಅಪಾರ ಪ್ರಮಾಣದ ಬೆಳೆ ನಾಶವಾಗುತ್ತಿದೆ. ಹಾಗಾದರೆ ಅಕಾಲಿಕ ಮಳೆ ಈಗ ಮಾತ್ರ ಬರುತ್ತದೆಯೇ ಹಿಂದೆ ಬರುತ್ತಿರಲಿಲ್ಲವೇ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತದೆ.
ಈ ಬಗ್ಗೆ ತುಳುನಾಡಿನ ಕೆಲವು ಹಿರಿಯರಲ್ಲಿ ಮಾತನಾಡಿದರೆ ಮಳೆರಾಯ ಬದಲಾಗಿಲ್ಲ ನಾವು ಬದಲಾಗಿದ್ದೇವೆ ಎಂಬ ವಿಚಾರ ತಿಳಿದು ಬರುತ್ತದೆ. ತುಳುನಾಡಿನ ಹಿರಿಯರು ಹೇಳುವ ಪಗ್ಗು, ಬೇಶ. ಇತ್ಯಾದಿ ತಿಂಗಳುಗಳನ್ನು ಜನವರಿ, ಫೆಬ್ರವರಿ ಮುಂತಾದ ತಿಂಗಳುಗಳಿಗೆ ಅನ್ವಯಿಸಿ ನೋಡಿದರೆ ಫೆಬ್ರವರಿ, ಮಾಚರ್್ ತಿಂಗಳ ಸುಡಬಿಸಿಲ ಕಾಲದಲ್ಲಿಯೂ ಅಪಾರ ಮಳೆ ಬಿದ್ದ ವಿಚಾರ ಅವರ ಅನುಭವದ ಬುತ್ತಿಯಿಂದ ಬಿಚ್ಚಲ್ಪಡುತ್ತದೆ. ಈಗ ನಾವು ಇಂತಹ ಅಕಾಲಿಕ ಮಳೆಗಳು ಚಂಡಮಾರುತಗಳಿಂದಾಗಿ ಉಂಟಾಗುತ್ತಿವೆ ಎಂದು ಹೇಳುತ್ತಿದ್ದೇವೆ. ಫಯಾನ್ ಎಂಬಿತ್ಯಾದಿ ಹೆಸರುಗಳಿಂದ ಕರೆಯುತ್ತೇವೆ. ವಿಜ್ಞಾನ ಮುಂದುವರಿದಂತೆ ಪ್ರಕೃತಿಗೆ ಸಂಬಂಧಪಟ್ಟಂತೆ ಭೀತಿಗಳು ಸೃಷ್ಟಿಯಾಗುತ್ತಲೇ ಸಾಗಿದೆ.
ಹಿಂದಿನ ಕಾಲದ ತುಳುನಾಡಿನ ಕೃಷಿಕರು ಯಾವ ಚಂಡಮಾರುತ, ಪ್ರಕೃತಿ ವಿಕೋಪಗಳನ್ನೂ ಎದುರಿಸುವಂತಹಾ ತಾಖತ್ತು ಹೊಂದಿದ್ದರು. ಮೂರು ನಾಲ್ಕು ದಶಕಗಳ ಹಿಂದಿನ ಅವಿಭಕ್ತ ಕುಟುಂಬಗಳು ಕೃಷಿಕಾರ್ಯಗಳಿಗಾಗಿ ಯಾರನ್ನೂ ಅವಲಂಬಿಸುವ ಅಗತ್ಯವನ್ನು ಹೊಂದಿರಲಿಲ್ಲ. ಮಳೆ ಬಿದ್ದ ಕೂಡಲೇ ಮನೆಯ ಎಲ್ಲಾ ಸದಸ್ಯರು ಒಂದೊಂದು ಕೆಲಸವನ್ನು ಹಚ್ಚಿಕೊಳ್ಳುತ್ತಾ ಕೃಷಿಕಾರ್ಯಗಳಲ್ಲಿ ತೊಡಗುತ್ತಿದ್ದರು. ಮೊದಲ ಮಳೆಗೆ ನೇಜಿ ಹಾಕಿ, ಮಳೆ ಸರಾಗವಾಗಿ ಬೀಳತೊಡಗಿದಾಗ ಗದ್ದೆಗಳನ್ನು ಉತ್ತು ನೇಜಿ ನೆಟ್ಟು ಆದಷ್ಟು ಶೀಘ್ರ ಕೃಷಿ ಕಾರ್ಯ ಮುಗಿಸಿಬಿಡುತ್ತಿದ್ದರು. ಮಳೆ ಕೈಕೊಟ್ಟರೂ ಕೆರೆ, ಹಳ್ಳಗಳಿಂದ ಸಾಂಪ್ರದಾಯಿಕ ವಿಧಾನಗಳಿಂದ ನೀರು ಎತ್ತಿ ಬೆಳೆಗಳಿಗೆ ಉಣಿಸುತ್ತಿದ್ದರು. ಕಟಾವು ಸಂದರ್ಭದಲ್ಲಿ ಮಳೆ ಬರುವ ಸೂಚನೆ ಇದ್ದರೆ ಕಟಾವು ಕಾರ್ಯವನ್ನು ಮಾಡದೆ, ಮಳೆ ಬರುವುದಿಲ್ಲ ಎಂದು ಖಚಿತವಾದ ಕೂಡಲೇ ಎಲ್ಲರೂ ಗದ್ದೆಗಿಳಿದು ಕಟಾವು ಮಾಡಿ ರಾತ್ರಿ ಹಗಲು ಕೆಲಸ ಮಾಡಿ ಕ್ಷಣಮಾತ್ರದಲ್ಲಿ `ಒತ್ತರೆ' ಮಾಡುತ್ತಿದ್ದರು. ಮಳೆರಾಯನಿಗೆ ತೊಂದರೆ ನೀಡಲು ಯಾವುದೇ ಅವಕಾಶವನ್ನೂ ಮಾಡುತ್ತಿರಲಿಲ್ಲ. ಆತ ಅಂದು ಕೂಡಾ ತನ್ನಿಚ್ಛೆಯಂತೆ ಬಂದು ಹೋಗುತ್ತಿದ್ದ.
ಆದರೆ ಈಗ ತುಳುನಾಡಿನ ಕೃಷಿ ಪದ್ಧತಿಯೇ ಬದಲಾಗಿದೆ. ಒಂದು ಗದ್ದೆಯನ್ನು ನಾಟಿಕಾರ್ಯಕ್ಕೆ ಸಿದ್ಧಗೊಳಿಸಬೇಕಾಗಿದ್ದರೆ ಹಿಂದೆಲ್ಲಾ ಬೆಳ್ಳಿ ಮೂಡಿದಾಗಲೇ ಎದ್ದು ಗೊಬ್ಬರ ಹರಡಿ ಕೋಣಗಳನ್ನು ಕಟ್ಟಿ ಸೂರ್ಯ ಮೂಡುತ್ತಿದ್ದಂತೆ ಅರ್ಧ ಗದ್ದೆಯನ್ನು ಹಸನುಗೊಳಿಸಿ ನಾಟಿಕಾರ್ಯಕ್ಕೆ ಸಿದ್ದಗೊಳಿಸುವ ಕಾರ್ಯ ಮುಗಿಯುತ್ತಿತ್ತು. ಈಗ ಕೆಲಸದಾಳುಗಳು ಯಾವಾಗ ಬರುತ್ತಾರೋ ಎಂದು ಕಾದು ಕುಳಿತುಕೊಳ್ಳುವ ಪರಿಸ್ಥಿತಿ ಇದೆ. ಸಂಜೆ ಹೊತ್ತು ಮುಳುಗಿ ತಿಂಗಳ ಬೆಳಕಿನಲ್ಲೂ ನೇಜಿ ತೆಗೆಯುವ, ಧಾನ್ಯ ಹರಿಯುವ ಕೃಷಿಯ ಕಾರ್ಯಗಳು ನಡೆಯುತ್ತಿದ್ದವು. ಈಗ ಸಂಜೆ ಐದು ಐದೂವರೆಗೆ ಕೆಲಸದಾಳುಗಳು ಕೈಕಾಲು ತೊಳೆದುಕೊಂಡುಬಿಡುತ್ತಾರೆ. ಕೋಣಗಳು ನಾಪತ್ತೆಯಾಗಿ ಟಿಲ್ಲರ್ಗಳು ಪ್ರವೇಶವಾದ ನಂತರ ಗದ್ದೆಗಳನ್ನು ಉಳಲು ಊರಿನಲ್ಲಿ ಒಂದೆರಡು ಟಿಲ್ಲರ್ ಮಾಲಕರ, ನಡೆಸುವವರ ಪುರುಸೊತ್ತನ್ನು ಕಾಯುವ ಪರಿಸ್ಥಿತಿ ಬಂದಿದೆ. ನೀರಿರುವಾಗ ಗದ್ದೆ ಉಳಲು ಸಾಧ್ಯವಾಗುತ್ತಿಲ್ಲ. ನೀರಲ್ಲದೇ ಇರುವಾಗ ಟಿಲ್ಲರ್ ಬಂದು ಗದ್ದೆಯ ಬದಿಯಲ್ಲಿ ನಿಲ್ಲುತ್ತದೆ!
ಅದು ಹೇಗೋ ಮಾಡಿಕೊಂಡು ಗದ್ದೆಯ ನೆಟ್ಟು ಬೆಳೆ ಬೆಳೆದು ಕಟಾವು ಮಾಡಲೂ ಹೊರಗಿನ ಜನರನ್ನು ಕಾಯುವ ಪರಿಸ್ಥಿತಿ. ಕಟಾವು ಮಾಡಿದ ಪೈರನ್ನು ಅಂಗಳಕ್ಕೆ ತಂದು ಒತ್ತರೆ ಮಾಡಲೂ ಕೆಲಸದಾಳುಗಳು. ಈ ಸಂದರ್ಭದಲ್ಲಿ ಮೋಡಕವಿದರಂತೂ ಗಡಿಬಿಡಿಯೇ ಗಡಿಬಿಡಿ. ಮಳೆರಾಯನಿಗೊಂದಷ್ಟು ಶಾಪ ಹಾಕುತ್ತಾ ಕಟಾವು ಮಾಡಿದ ಪೈರು, ಅರ್ಧಕ್ಕೆ ನಿಂತ ಕಟಾವು ಮತ್ತಿತರ ಕಾರ್ಯವನ್ನು ಅಸಹಾಯಕತೆಯಿಂದ ನೋಡುವ ಪರಿಸ್ಥಿತಿ. ಭತ್ತದ ಗಿಡದ ಸೂಡಿಗಳು ನೆರೆಯಲ್ಲಿ ಕೊಚ್ಚಿಕೊಂಡು ಹೋದರೂ, ಭತ್ತ ನೀರಿನಲ್ಲಿ ಮುಳುಗಿ ಮೊಳಕೆ ಬಂದರೂ ಏನೂ ಮಾಡುವಂತಿಲ್ಲ. ಮಳೆರಾಯ ಯಾರ ಕಷ್ಟಸುಖಕ್ಕೂ ಸ್ಪಂದಿಸದೆ ಅಂದಿಗೂ ಇಂದಿಗೂ ಎಂದೆಂದಿಗೂ ತನ್ನಿಚ್ಛೆಯಂತೆ ಬಂದು ಹೋಗುತ್ತಲೇ ಇರುತ್ತಾನೆ.
ಆಧುನಿಕತೆ ಹೆಚ್ಚುತ್ತಾ ಹೋದಂತೆ ಮನುಷ್ಯ ಪ್ರಕೃತಿಯೊಂದಿಗೆ ಹೋರಾಡುವ ಚಾಕಚಕ್ಯತೆಯನ್ನು ಕಳೆದುಕೊಳ್ಳುತ್ತಲೇ ಹೋಗುತ್ತಾನೆ ಎಂಬುದಕ್ಕೆ ಫಯಾನ್ ಚಂಡಮಾರುತ, ಮಳೆ, ಬೆಳಗಳ ನಾಶ ಒಂದು ಉತ್ತಮ ಉದಾಹರಣೆಯಾಗಿ ನಿಲ್ಲುತ್ತದೆ. ಈಗಲೂ ಒಳನಾಡಿನ ಕೆಲವು ಹಳ್ಳಿಗಳಲ್ಲಿ ಉಳಿದುಕೊಂಡಿರುವ ಅವಿಭಕ್ತ ಕುಟುಂಬಗಳ ಕೃಷಿಕಾರ್ಯಗಳಿಗೆ ಮಳೆರಾಯನಿಂದ ಯಾವುದೇ ತೊಂದರೆಯಾಗುತ್ತಿಲ್ಲ ಎಂಬುದು ಗಮನಾರ್ಹ.

Sunday, November 8, 2009

ಅಡಿಕೆ ಹಾಳೆಯ ಮೋಟಾರಿನ ನೆನಪು



ಒಂದೆರಡು ದಶಕಗಳ ಹಿಂದೆ ತುಳುನಾಡಿನಲ್ಲಿ ಕೂಸು ಹುಟ್ಟಿದರೆ ಮನೆಯ ಯಜಮಾನ ಅಥವಾ ಕೆಲಸದ ಆಳುಗಳು ಅಡಕೆಯ ತೋಟಕ್ಕೆ ಒಂದು ಸುತ್ತು ಹೊಡೆದು ಮೆದುವಾದ ಅಗಲವಾದ ಅಡಕೆಯ ಹಾಳೆಗಳನ್ನು ಹೆಕ್ಕಿ ತರುತ್ತಿದ್ದರು. ಎಳೆಮಗುವಿಗೆ ಗಿಡಮೂಲಿಕೆಗಳಿಂದ ಕೂಡಿದ ತೆಂಗಿನ ಎಣ್ಣೆ ಹಚ್ಚಿ ಮಾಲೀಸು ಮಾಡಿ ಅಡಕೆ ಹಾಳೆಯ ಮೇಲೆ ಮಲಗಿಸುತ್ತಿದ್ದರು. ಹಾಳೆ ಮೃದುವಾಗಿದ್ದು ಎಳೆಯ ಚರ್ಮಕ್ಕೆ ಸರಿಯಾಗಿ ಹೊಂದಿಕೆಯಾಗುತ್ತಿತ್ತು. ತಾಯಿಗೆ ಹಿಡಿದುಕೊಳ್ಳುವುದಕ್ಕೂ ಸುಲಭವಾಗುತ್ತಿತ್ತು. ಈಗ ಯುವಾಸ್ಥೆಯಲ್ಲಿರುವ ಹಿಂದಿನ ತುಳುನಾಡ ಮಕ್ಕಳು ಅಡಕೆ ಹಾಳೆಯ ಮೇಲೆ ಮಲಗಿದವರೇ. ಈಗ ಹಾಳೆಯ ಸ್ಥಾನವನ್ನು ವಿವಿಧ ಕಂಪೆನಿಗಳ ದುಬಾರಿ ರಬ್ಬರ್ ಹಾಳೆ ಆಕ್ರಮಿಸಿಕೊಂಡಿದ್ದರೂ ಕೆಲವು ಕಡೆ ಎಳೆಯ ಮಕ್ಕಳನ್ನು ಮಲಗಿಸಲು ಹಾಳೆಯನ್ನೇ ಉಪಯೋಗಿಸುತ್ತಾರೆ.
ಅಡಕೆ ಹಾಳೆಯನ್ನು `ಪ್ರೆಸ್' ಮಾಡಿ ತಟ್ಟೆಗಳು, ಬಟ್ಟಲುಗಳು, ಕಪ್ ಪರಿವರ್ತಿಸುವ ಉದ್ಯಮಗಳು ಈಗ ಇವೆ. ಬ್ರಹ್ಮಕಲಶೋತ್ಸವ, ನಾಗಮಂಡಲ ಮುಂತಾದ ಬೃಹತ್ ಸಂಖ್ಯೆಯ ಜನರು ಸೇರುವ ಸಮಾರಂಭಗಳಲ್ಲಿ `ಬುಫೆ' ವಿಧಾನದಲ್ಲಿ ಊಟ ಮಾಡಲು ಮೊದಲ ಮೊದಲು ಅಡಕೆ ಹಾಳೆಗಳನ್ನು ಹಾಗೇ ಬಳಸಲಾಗುತ್ತಿದ್ದರೂ, ಈಗೀಗ ಬಟ್ಟಲಿನಾಕಾರಲ್ಲಿ ಪರಿವರ್ತಿಸಿದ ತಟ್ಟೆಗಳು ವ್ಯಾಪಕವಾಗಿ ಬಳಸಲಾಗುತ್ತದೆ. ಇದು ಪ್ರಕೃತಿ ಸಹ್ಯವೂ, ಆರೋಗ್ಯಕಾರಿಯೂ ಹೌದು. ಪ್ಲಾಸ್ಟಿಕನಂತೆಮಣ್ಣಿನೊಳಗೆ ಸೇರಿ ಎಂದಿಗೂ ಕರಗದೆ ಇರುವಂತಹುದಲ್ಲ. ಸುಲಭವಾಗಿ ಮಣ್ಣಿನಲ್ಲಿ ಬೆರೆತು ಮಣ್ಣಾಗಿ ಹೋಗುತ್ತದೆ. ಮಿತವ್ಯಯ, ಕೃಷಿಗೆ ಉತ್ತೇಜನ ನೀಡುವುದಕ್ಕಾಗಿ ಮತ್ತು ಸುಲಭವಾಗಿ ಬಳಸಬಹುದಾದುದರಿಂದ ಇದರ ಉಪಯೋಗ ವ್ಯಾಪಕವಾಗುತ್ತಿದೆ.
ಅಡಕೆ ಹಾಳೆಯಿಂದ ಹಲವಾರು ಕರಕುಶಲ ವಸ್ತುಗಳನ್ನೂ ತಯಾರಿಸಲಾಗುತ್ತದೆ. ಯಾವ ರೀತಿಯ ಬಗ್ಗುವಿಕೆಗೂ ಇದು ಒಗ್ಗುವುದರಿಂದ ಆಕರ್ಷಕ, ಸುಂದರವಾದ ಕಲಾವಸ್ತುಗಳನ್ನು ಇದರಿಂದ ತಯಾರಿಸಬಹುದಾಗಿದೆ. ಭೂತಕೋಲದಲ್ಲಿ ಅಡಕೆ ಹಾಳೆ ಬಹುಉಪಯೋಗಿ ವಸ್ತುವಾಗಿದೆ. ಭೂತದ ಮೊಗ (ಮುಖವಾಡ) ಇಲ್ಲದೆ ಕಡೆಗಳಲ್ಲಿ ಹಾಳೆಯ ಮೊಗವನ್ನು ತಯಾರಿಸಲಾಗುತ್ತದೆ. ಭೂತ ಕಟ್ಟುವವರು ಮೊಣಕಾಲಿಗೆ ಹಾಳೆಯ ತುಂಡನ್ನು ಕಟ್ಟಿಕೊಳ್ಳುತ್ತಾರೆ. ಫ್ಯಾನ್ ಆಗಮಿಸುವ ಮೊದಲು ಬೇಸಿಗೆ ಕಾಲದಲ್ಲಿ ಬೀಸಣಿಗೆ ಮಾಡಲೂ ಇದು ಉಪಯೋಗವಾಗುತ್ತಿತ್ತು. ಕೃಷಿಕಾರ್ಯಗಳಲ್ಲಿ ತಲೆಹೊರೆಗೆ ಶಿರಸ್ತ್ರಾಣವಾದ `ಮುಟ್ಟಾಲೆ', ಗೊಬ್ಬರ, ನೇಜಿ ಹೊರವಾಗ ನೀರು ತಲೆಗೆ ತಾಗದಂತೆ ಧರಿಸುವ `ಅರುಂಬುಡೆ'ಗಳನ್ನು ಹಾಲೆಯಿಂದ ತಯಾರಿಸಲಾಗುತ್ತಿತ್ತು, ಈಗ ಕೆಲವು ಕಡೆ ಇದರ ಸ್ಥಾನವನ್ನು ಹೆಲ್ಮೆಟ್ಗಳು ಆಕ್ರಮಿಸಿಕೊಂಡಿದೆ.
ಒಂದು ಕಾಲದಲ್ಲಿ ಯಾರೂ ಕೇಳುವವರಿಲ್ಲದೆ ತೋಟದಲ್ಲೆಲ್ಲಾ ಕಸವಾಗಿ ಬೀಳುತ್ತಿದ್ದ ಅಡಕೆ ಸೋಗೆ ಮತ್ತು ಹಾಳೆಗಳು ಬಿಸಿನೀರು ಕಾಯಿಸಲು ಮಾತ್ರ ಉಪಯೋಗವಾಗುತ್ತಿತ್ತು. ಅಂದಿನ ಕಾಲದ ಮಕ್ಕಳಿಗೆ ಈಗಿನಂತೆ ಮೂರು ಚಕ್ರದ ಸೈಕಲ್. ಪ್ಲಾಸ್ಟಿಕ್, ಫೈಬರ್ ಚಕ್ರದ ಗಾಡಿಗಳು ಇರಲಿಲ್ಲ. ಎಲ್ಲೋ ಶ್ರೀಮಂತರ ಮನೆಯ ಮಕ್ಕಳು ಕಾಂಕ್ರೀಟ್ ಹಾಕಿದ ಮನೆಯ ಅಂಗಳದಲ್ಲಿ ಮಾತ್ರ ಸೈಕಲ್ನಲ್ಲಿ ಆಟವಾಡುತ್ತಿದ್ದರು. ಆ ಸಂದರ್ಭದಲ್ಲಿ ಸಾಮಾನ್ಯ ವರ್ಗದ ಮಕ್ಕಳಿಗೆ ಅಡಿಕೆ ಹಾಳೆಯ ಸುಲಭದ ಆಟದ ಸಾಧನವಾಗಿತ್ತು. ಈ ಆಟ ಆಡಲು ಕನಿಷ್ಠ ಇಬ್ಬರ ಅವಶ್ಯಕತೆ ಇತ್ತು. ಅಡಕೆಯ ಹಾಳೆಯ ಮೇಲೆ ಓರ್ವ ಕುಳಿತುಕೊಂಡರೆ ಇನ್ನೋರ್ವ ಅದರ ಸೋಗೆಯ ಭಾಗದಲ್ಲಿ ಹಿಡಿದು ಎಳೆಯುವುದು. ನಿಗದಿತ ದೂರ, ನಿಗದಿತ ಸುತ್ತು ಮುಗಿದ ನಂತರ ಎಳೆಯುವವ ಕುಳಿತು ಕುಳಿತವ ಎಳೆಯುವುದು ಈ ಆಟದ ಅಘೋಷಿತ ನಿಯಮ. ತೋಟ, ಅಂಗಳ ಮನೆಯ ಹಿಂದಿನ ದಾರಿ, ಗದ್ದೆಯ ನಡುವಿನ ದಾರಿ, ಗದ್ದೆಯ ಹುಣಿ ಇವೆಲ್ಲಾ ಈ ಹಾಳೆಯ ಆಟದ ಅಂಗಣಗಳು ಈ ಆಟದಲ್ಲಿ ಮಕ್ಕಳು ಎಷ್ಟು ತಲ್ಲೀನರಾಗಿರುತ್ತಿದ್ದರೆಂದರೆ ಹಾಳೆ ಹರಿದು ಹೋಗಿ ಒಂದು ಹಾಳೆಯ ಮೇಲೆ ಇನ್ನೊಂದು ಹಾಳೆಯನ್ನಿಟ್ಟು ಎಳೆಯುವುದು. ಹೆಚ್ಚು ಮಕ್ಕಳಿದ್ದರೆ ಇಬ್ಬರು ಮೂವರನ್ನು ಕುಳ್ಳಿರಿಸಿ ದೊಡ್ಡ ಮಕ್ಕಳು, ದೊಡ್ಡ ಮಕ್ಕಳನ್ನು ಎರಡು ಮೂರು ಸಣ್ಣ ಮಕ್ಕಳು ಸೇರಿ ಎಳೆಯುವುದು, ಹಾಳೆ ಹರಿದ ಪರಿವೆಯೇ ಇಲ್ಲದೆ ತೊಟ್ಟುಕೊಂಡ ಚೆಡ್ಡಿಯೂ ಹಿಂಭಾಗದಲ್ಲಿ ಒಂದಷ್ಟಗಲ ಹರಿದು ಹೋಗುವುದೂ ನಡೆಯುತ್ತಿತ್ತು.
ಹಿಂದೆಲ್ಲಾ ಅಡಕೆಯ ಹಾಳೆಯನ್ನು ಕಂಡ ಕೂಡಲೇ ಮಕ್ಕಳ ಮನಸ್ಸಿಗೆ ಈ ಒಂದು ಆಟ ತಕ್ಷಣ ಹೊಳೆದು ಬಿಡುತ್ತಿತ್ತು. ಈಗ ಕಾಲ ಬದಲಾಗಿದೆ. ಮಕ್ಕಳ ಆಟಕ್ಕೆ ವಿವಿಧ ಸಲಕರಣೆಗಳು ಬಂದುಬಿಟ್ಟಿದೆ. ಇಂತಹದ್ದೊಂದು ಆಟ ಇದೆ ಎಂದು ಮಕ್ಕಳಿಗೆ ಹೇಳಿದರೆ ಒಂದೈದು ನಿಮಿಷ ಅದರಲ್ಲಿ ಆಸಕ್ತಿ ತೋರಿಸುತ್ತಾರೆ.
ವಿಶ್ವ ತುಳು ಸಮ್ಮೇಳನದ ಪೂರ್ವಭಾವಿಯಾಗಿ ಅಲ್ಲಲ್ಲಿ ನಡೆಯುತ್ತಿರುವ ತುಳುವೆರ್ನ ಗೊಬ್ಬುಲು ಕಾರ್ಯಕ್ರಮಗಳಲ್ಲಿ `ಪಾಲೆಡೊಯ್ಪುನ ಪಂಥ' ಆಟವನ್ನು ನೆನಪಿಸುವ ಕೆಲಸವನ್ನು ಮಾಡಲಾಗುತ್ತಿರುವುದು ಸಂತೋಷದ ಸಂಗತಿಯಾಗಿದೆ. ಇದು ತುಳುನಾಡಿನ ಕಳೆದುಹೋದ ಒಂದು ಸವಿನೆನಪನ್ನು ಮತ್ತೆ ನೆನಪಿಸುತ್ತಿದೆ.