Tuesday, December 22, 2009

ಬಿಟ್ಟೆನೆಂದರೂ ಬಿಡದು ನಿನ್ನಯ ಮಾಯೆ


ತುಳುನಾಡಿನಲ್ಲಿ ದೈವಾರಾಧನೆ ಪ್ರಕೃತಿ ಪೂಜೆಯ ಪ್ರತೀಕ. ಈಗ ತುಳುನಾಡಿನಲ್ಲಿ ವಿಜೃಂಭಣೆಯಿಂದ ಪಂಚಲೋಹದ ಮುಗ, ಚಿನ್ನ, ಬೆಳ್ಳಿ ಬಿರುದಾವಳಿಗಳಿಂದ ವಿಜೃಂಭಿಸುತ್ತಾ ಆರಾಧಿಸಲ್ಪಡುವ ಹೆಚ್ಚಿನೆಲ್ಲಾ ದೈವಗಳು ನೂರಾರು ವರ್ಷಗಳ ಹಿಂದೆ ಸಾಗಿದರೆ ಕಲ್ಲು, ಮರಗಳಲ್ಲಿ ಅಡಗಿ ತನ್ನ ಮಾಯೆಯನ್ನು ಪ್ರದರ್ಶಿಸುತ್ತಿದ್ದವು. ದೈವಾರಾಧನೆಯ ಯಾವುದೇ ಪ್ರಖ್ಯಾತ ಕ್ಷೇತ್ರವನ್ನು ನೋಡಿದರೂ ಮೂಲದಲ್ಲಿ ಆರಾಧಿಸಲ್ಪಡುತ್ತಿದ್ದ ಕಲ್ಲು, ಮರ ಯಾ ಜಾಗವನ್ನು ಈಗಲೂ ಸಂರಕ್ಷಿಸಿಕೊಂಡು ಬಂದಿರುವುದನ್ನು ನಾವು ಕಾಣಬಹುದಾಗಿದೆ.
ಯಾವ್ಯಾವುದೋ ಕಾರಣಗಳಿಗಾಗಿ ವಲಸೆ ಹೋದ ಜನರನ್ನು ದೈವಗಳೂ ಬೆಂಬತ್ತಿ ಹೋದವು. ಜನರ ಬೆನ್ನ ಹಿಂದೆ ದೈವಗಳು ಹೋದವೋ ಅಥವಾ ದೈವಗಳನ್ನು ತನ್ನ ಬೆನ್ನ ಹಿಂದೆ ಕಟ್ಟಿಕೊಂಡು ಜನರು ಹೋದರೋ ಎಂದು ನಿಖರವಾಗಿ ಹೇಳಲು ಬರುವುದಿಲ್ಲ. ಮುಂಬೈಯಂತಹ ನಗರಗಳಲ್ಲಿ ವಾಸಿಸುವ ತುಳುವರಲ್ಲೂ ದೈವಾರಾಧನೆ ಬಗ್ಗೆ ಅಪಾರವಾದ ಆಸಕ್ತಿ ಇದೆ. ತುಳುನಾಡಿನ ದೈವಸ್ಥಾನಗಳ ಜೀರ್ಣೋದ್ದಾರ, ಬ್ರಹ್ಮಕಲಶ ಮುಂತಾದವುಗಳನ್ನು ಮಾಡುವುದರಲ್ಲಿ ಪ್ರಧಾನ ಪಾತ್ರವನ್ನು ಮುಂಬೈಯಲ್ಲಿ ವಾಸಿಸುವ ತುಳುವರೇ ವಹಿಸಿಕೊಳ್ಳುವುದು ಕಂಡು ಬರುತ್ತಿದೆ. ಮಾರ್ಚ್, ಏಪ್ರಿಲ್, ಮೇ ತಿಂಗಳುಗಳಲ್ಲಿ ಸಾಧಾರಣವಾಗಿ ಮುಂಬೈಯಲ್ಲಿ ವಾಸಿಸುತ್ತಿರುವ ಅರ್ಧಕ್ಕರ್ಧ ತುಳುವರು ತುಳುನಾಡಿಗೆ ಇಳಿಯುತ್ತಾರೆ. ಈ ಸಂದರ್ಭದಲ್ಲಿ ಇಲ್ಲಿ ಕೋಲ, ಬಲಿ, ಜಾತ್ರೆ, ಬ್ರಹ್ಮಕಲಶಗಳ ಸುಗ್ಗಿಯೋ ಸುಗ್ಗಿ.
ತುಳುನಾಡಿನ ದೈವವನ್ನು ಮುಂಬಯಿಗೆ ಕೊಂಡೊಯ್ದವರೂ ಇದ್ದಾರೆ. ಮುಂಬೈನ ಕೆಲವು ಭಾಗಗಳಲ್ಲಿ ಕೋಲ, ನೇಮಗಳೂ ನಡೆಯುತ್ತವೆ. ತುಳುನಾಡಿನ ದೈವಾದಿಗರ ತಂಡ ರೈಲುಗಾಡಿಯನ್ನೇರಿಯೋ, ಬಸ್ಸಿನ ಮೂಲಕವೂ ಮುಂಬೈಗೆ ಹೋಗಿ ನೇಮಾದಿಗಳನ್ನು ನೆರವೇರಿಸಿ ಊರಿನ ದಾರಿ ಹಿಡಿಯುತ್ತವೆ.
ತುಳುನಾಡಿನ ಹಳ್ಳಿಗಳಲ್ಲಿ ಒಂದು ಕಾಲದಲ್ಲಿ ಗುತ್ತಿನ ಗತ್ತಿನಲ್ಲಿ ಮೆರೆದ ಮನೆಗಳಲ್ಲಿ ಈಗ ಯಾವ ಗದ್ದಲವೂ ಇಲ್ಲದೆ ಭವ್ಯ ಮನೆಗಳು ಗೆದ್ದಲು ಹಿಡಿಯುತ್ತಿವೆ. ಪ್ರಾಯಸಂದ ಕೆಲವರು ಇಂತಹಾ ಮನೆಗಳಲ್ಲಿ ಕಂಡು ಬರುತ್ತಿದ್ದಾರೆ. ಯುವಕರು ಹೊಟ್ಟೆಪಾಡಿಗಾಗಿ ದೂರದ ಊರುಗಳನ್ನು ಸೇರಿಕೊಂಡಿದ್ದಾರೆ. ಆದರೂ ದೈವ ಕುಟುಂಬದ ಬೆನ್ನು ಬಿಟ್ಟಿಲ್ಲ. ಮುಂಬೈಯಲ್ಲಿ ವಾಸಿಸುವ ಈ ರೀತಿಯ ಕುಟುಂಬದ ಸದಸ್ಯರು ಓರ್ವ ಹಿರಿಯನನ್ನು ಗುತ್ತಿನ ಯಜಮಾನ ಎಂದು ನೇಮಿಸಿ ಪ್ರತೀ ತಿಂಗಳ ಸಂಕ್ರಮಣದಂದು ಖಚರ್ು ವೆಚ್ಚಗಳ ಮೇಲೆ ಇಂತಿಷ್ಟು ರೂಪಾಯಿ ಎಂದು ನಿಗದಿಪಡಿಸಿ ಊರಿಗೆ ಕಳುಹಿಸಿ ದೈವಗಳಿಗೆ `ಪೂ-ನೀರ್ ಇಡಿಸುವ ಕ್ರಮವೂ ಇದೆ.
ಇದೆಲ್ಲಾ ನೆನಪಾದದ್ದು ಯಾವಾಗ ಎಂದರೆ ಇತ್ತೀಚೆಗೆ ಮಂಗಳೂರು ನಗರದ ಹೃದಯ ಭಾಗವಾದ ಹಂಪನ ಕಟ್ಟೆಯ ನಾಲ್ಕು ಮಹಡಿಯ ಮೇಲೆ ನಾಗಸ್ವರದ ಧ್ವನಿ ಕೇಳಿದಾಗ. ಮಹಡಿ ಮೇಲಿನ ವಿಶಾಲ ಜಾಗದಲ್ಲಿ ಮಂತ್ರದೇವತೆಯ `ಕೊಡಿಯಡಿ' ಸಿದ್ಧವಾಗಿತ್ತು. ದೈವವನ್ನು ಅರಾಧಿಸುವ ಕುಟುಂಬಿಕರು ಮೆಟ್ಟಲುಗಳನ್ನು ಏರಿ ನೇಮದ ಚಾವಡಿಗೆ ಆಗಮಿಸಿದ್ದರು. ಎರಡು ದೈವಗಳ ಕೋಲ ಬ್ಯಾಂಡ್, ವಾದ್ಯ, ಬೆಡಿ, ಗರ್ನಾಲು ಸಹಿತ ವಿಜೃಂಭಣೆಯಿಂದ ನೆರವೇರಿತ್ತು. ಝಗಮಗಿಸುವ ಶೃಂಗಾರ, ಭೂರಿಭೋಜನ ಎಲ್ಲವೂ ನಡೆದಿತ್ತು.
ರಾಜನ್ದೈವಗಳಿಗೆ ನೇಮ ನಡೆಸುವಲ್ಲಿ ಕೆಲವೊಂದು ಕಟ್ಟುಪಾಡುಗಳು ಇರುತ್ತವೆ. ಇವುಗಳ ನೇಮ ನಡೆಯುವ ಜಾಗ, ಸೇರುವ ಜನರು ಇವೆಲ್ಲದರ ಬಗ್ಗೆ ವ್ಯವಸ್ಥಿತವಾದ ಕ್ರಮವನ್ನು ಅನುಸರಿಸಬೇಕಾಗುತ್ತದೆ. ಇಂತಹಾ ದೈವಗಳ ನೇಮಗಳನ್ನು ಟೇರೇಸ್ ಮೇಲೆ ನಡೆಸಲು ಬಹುಶಃ ಸಾಧ್ಯವಿಲ್ಲ. ಇನ್ನು ಕಾಲ ಕಳೆದಂತೆ ಅದೂ ಸಾಧ್ಯವಾಗಬಹುದೋ ಏನೋ. ಆದರೆ ಮನೆ ದೈವವಾಗಿ ಆರಾಧಿಸಲ್ಪಡುವ ಮಂತ್ರದೇವತೆ, ಸತ್ಯದೇವತೆಗಳಿಗೆ ಮನೆ ಮತ್ತು ಸಣ್ಣ ಅಂಗಳ ಇದ್ದರೂ ಸಾಧ್ಯವಾಗುತ್ತದೆ.
ಈಗ ಕಾಂಕ್ರೀಟ್ ಕಟ್ಟಡಗಳು ಎದ್ದ ಮಂಗಳೂರು ಹಂಪನ ಕಟ್ಟೆ ಪರಿಸರದಲ್ಲಿ ಒಂದು ಕಾಲದಲ್ಲಿ ನೇಮ, ಕೋಲಗಳು ನಡೆದಿರುವಂತ ಸಾಧ್ಯತೆಗಳು ಇವೆ. ಇಲ್ಲಿದ್ದ ದೈವದ ಕೇಂದ್ರಗಳನ್ನು ಒಡೆದು ತೆಗೆದು ಕಟ್ಟಡಗಳನ್ನು ನಿಮರ್ಿಸಿರಲೂ ಬಹುದು. ಆದರೆ ದೈವ ಎಂಬುದು ನಿದರ್ಿಷ್ಟ ವಸ್ತುಗಳ ಮೇಲೆ ಇರುವಂತಹುಗಳು ಎಂದು ಹೇಳಲು ಬರುವುದಿಲ್ಲ. ಅವುಗಳು ಮಾನವನ ಮನಸ್ಸಿನಲ್ಲಿ ನಾಟಿ ಹೋಗಿರುತ್ತವೆ. ಹಾಗಿರುವಾಗ ಮನುಷ್ಯ ನೆಲ ಬಿಟ್ಟು ಐದು ಮಹಡಿ ಮೇಲೆ ವಾಸಿಸಿದರೂ ದೈವಗಳೂ ಅಲ್ಲಿಗೂ ಬರುತ್ತವೆ ಎಂಬುದಕ್ಕೆ ಹಂಪನಕಟ್ಟೆಯಲ್ಲಿ ನಡೆದ ಟೆರೇಸ್ ಕೋಲ ಸಾಕ್ಷಿ ಎಂದು ಹೇಳಬಹುದೇ?

Saturday, December 19, 2009

ನಾವು-ನಮ್ಮದರ ಬಗ್ಗೆ ಆರೋಗ್ಯಕರ ಸಂಕುಚಿತತೆ ಬೇಕು



ಸಂಕುಚಿತತೆ ಎಂಬುದು ಮಾನಸಿಕ ವ್ಯಾಧಿ ಎಂಬುದು ಎಲ್ಲರೂ ಒಪ್ಪುವಂತದ್ದೇ. ಸಂಕುಚಿತತೆ ತನ್ನ ತನವನ್ನು ಉಳಿಸಿಕೊಳ್ಳುವಲ್ಲಿಯೂ ನೆರವಾಗುತ್ತದೆ. ಆರೋಗ್ಯಕರವಾದ ಸಂಕುಚಿತತೆ ಇಲ್ಲದೇ ಇದ್ದಲ್ಲಿ ನಾವು ನಮ್ಮನ್ನೇ ಕಳೆದುಕೊಂಡು ಬಿಡುವ ಅಪಾಯವಿದೆ. ತುಳು ಭಾಷೆ ಮತ್ತು ನಾಡಿನ ಬಗ್ಗೆ ಆರೋಗ್ಯಕರವಾದ ಸಂಕುಚಿತತೆ ಇಲ್ಲದೇ ಇದ್ದ ಕಾರಣದಿಂದಲೇ ಇದು ತುಳುನಾಡಿಗೆ, ತುಳು ಭಾಷೆಗೆ ದುರ್ಗತಿ ಒದಗಿ ಬಂದಿದೆ ಎಂದರೂ ತಪ್ಪಿಲ್ಲ. ಇದರಿಂದಾಗಿ ತುಳುವನೊಬ್ಬ ತುಳು ಭಾಷೆ, ಸಂಸ್ಕೃತಿ, ನಾಡಿಗಾಗಿ ಮಾತೆತ್ತಿದರೆ ಅದು ಸಂಕುಚಿತ ಮನೋಭಾವನೆ ಎಂದು ಕೆಲವರು ಗುರುತಿಸುವಲ್ಲಿಯವರೆಗೆ ಬಂದು ಮುಟ್ಟಿದೆ.
ಜಗತ್ತಿನ ಇತರ ಭಾಷೆಗಳಿಗೆ ಹೋಲಿಸಿದಲ್ಲಿ ತುಳುವಿಗೆ ಯಾವ ಕೊರತೆಯೂ ಇಲ್ಲ. ಶತಮಾನಗಳ ಇತಿಹಾಸ, ಸ್ವಂತವಾದ ಲಿಪಿ, ಕಾವ್ಯ, ಮುಂತಾದವುಗಳು ತುಳು ಭಾಷೆಗಿದೆ. ವಿದೇಶಿ ಪ್ರವಾಸಿಗರು ಕೂಡಾ ತುಳು ಭಾಷೆಯನ್ನು ಗುರುತಿಸಿದ್ದಾರೆ. ಭಾಷಾವಾರು ಪ್ರಾಂತ್ಯಗಳ ರಚನೆಯ ಸಂದರ್ಭದಲ್ಲಿ ಅದು ಯಾವ ಕಾರಣದಿಂದಲೋ ತುಳು ಎಂಬುದು ಗುರುತಿಸಲ್ಪಡಲೇ ಇಲ್ಲ. ಈ ಕಾರಣದಿಂದಾಗಿಯೇ ನಮ್ಮ ರಾಜಕಾರಣಿಗಳಲ್ಲಿ ತುಳು ಪರವಾಗಿ ಮಾತನಾಡುವುದು, ಹೋರಾಡುವುದು, ಸಂಕುಚಿತತೆ ಎಂಬ ಭಾವನೆ ಬಲವಾಗಿ ಬೇರೂರಿ ಹೋಯಿತು. ಕನ್ನಡ ಆಡಳಿತ ಭಾಷೆಯಾಗಿರುವಾಗ ನಾವು ತುಳುವಿಗಾಗಿ ಒಂದು ಮನವಿ ಸಲ್ಲಿಸಿದರೆ ಅದರಿಂದ ತಾನು ಪ್ರತ್ಯೇಕತೆಯ ವಿಷಬೀಜವನ್ನು ಬಿತ್ತುತ್ತಿದ್ದೇನೆ ಎಂದು ಭಾವಿಸಿ ತನ್ನ ಅಸ್ತಿತ್ವಕ್ಕೆ ಎಲ್ಲಿ ಧಕ್ಕೆ ಬರುತ್ತದೋ ಎಂಬ ಭಾವನೆಯಿಂದ ತುಳು ಅನಾಥವಾಗಿ ಹೋಯಿತು ಎನ್ನುವುದರಲ್ಲಿ ಎರಡು ಮಾತಿಲ್ಲ.
ಮೊನ್ನೆ ನಡೆದ ತುಳು ಸಮ್ಮೇಳನದಲ್ಲಿ ನಡೆದ ವಿಚಾರದ ಮಂಥನದಲ್ಲಿ ಈ ಎಲ್ಲಾ ವಿಷಯಗಳು ಸಮಗ್ರ ತುಳುವರಿಗೆ ತಿಳಿದು ಬಂದವು. ತುಳುವಿಗೊಂದು ಮಾನ್ಯತೆ ಕೊಡುವಲ್ಲಿ ರಾಜಕಾರಣಿಗಳು ನೀಡುತ್ತಿರುವ ಕುಂಟು ನೆಪಗಳೇನಿದೆಯೋ ಅದರ ಸತ್ಯಾಸತ್ಯತೆಗಳು ಏನು ಎಂಬುದನ್ನು ಬಿಚ್ಚಿ ನೋಡುವ ಕೆಲಸ ನಡೆಯಿತು. ತುಳುವಿಗೆ ಲಿಪಿ ಇಲ್ಲ ಎಂಬ ನೆಪ ತುಳುವಿಗೆ ಮಾನ್ಯತೆ ನೀಡುವಲ್ಲಿ ವಿಫಲವಾಗಿದೆ ಎಂಬು ವಿಚಾರ ಸರ್ವಥಾ ಸರಿಯಲ್ಲ. ಇಂಗ್ಲಿಷ್ಗೂ ಸ್ವಂತ ಲಿಪಿ ಇಲ್ಲ. ರೋಮನ್ ಲಿಪಿಯಲ್ಲಿ ಅದನ್ನು ಬರೆಯಲಾಗುತ್ತದೆ, ಮಾನ್ಯತೆ ಪಡೆದ ಕೊಂಕಣಿಗೂ ಲಿಪಿ ಇಲ್ಲ ಅದರ ಲಿಪಿಯ ನಿಮರ್ಾಣದ ತಯಾರಿ ನಡೆಯುತ್ತಿದೆ ಎಂಬ ನಗ್ನ ಸತ್ಯ ಎಲ್ಲರೆದುರೂ ತೆರೆದುಕೊಂಡಿತು. ಹಾಗಾದರೆ ಸ್ವಂತ ಲಿಪಿ ಇರುವ ತುಳು ಇವೆಲ್ಲಾ ಭಾಷೆಗಳನ್ನು ಮೀರಿ ನಿಲ್ಲುವುದಿಲ್ಲವೇ? ಆದರೆ ಇದನ್ನು ವ್ಯವಸ್ಥಿತವಾಗಿ ಅರ್ಥಮಾಡಿಸುವಲ್ಲಿ, ಮಾಡಿಕೊಳ್ಳುವಲ್ಲಿ ನಮ್ಮ ರಾಜಕಾರಣಿಗಳು ಸೋತು ಹೋಗಿದ್ದಾರೆ ಎಂದೇ ಹೇಳಬೇಕಾಗುತ್ತದೆ. ತುಳುನಾಡಿನ ರಾಜಕಾರಣಿಗಳೆಲ್ಲರೂ ತುಳು ಸಮ್ಮೇಳನದ ಒಂದೇ ವೇದಿಕೆಯಡಿ ಬಂದು ತುಳುವಿಗೊಂದು ಮಾನ್ಯತೆ ಕೊಡಿಸುವಲ್ಲಿ ಯಾವ ತೊಂದರೆಯೂ ಉದ್ಭವಿಸದು ಎಂದು ಘೋಷಿಸಿದ್ದು ತುಳುವಿಗಿರುವ ತೊಡಕನ್ನು ಒದ್ದು ಓಡಿಸಿದಂತೇ ಆಗಿದೆ.
ತುಳುವನ್ನು ಯಾರೂ ಇಷ್ಟಪಡುವುದಿಲ್ಲ. ತುಳುವರು ಭಾಷೆಯ, ನಾಡಿನ ಬಗ್ಗೆ ಸೋಮಾರಿಗಳು ಎಂಬು ಮಾತನ್ನು ಈ ಬಾರಿಯ ತುಳು ಸಮ್ಮೇಳನ ಸಂಪೂರ್ಣವಾಗಿ ನಿರಾಕರಿಸಿವೆ. ಮೂರು ಲಕ್ಷ ಜನರು ಸೇರಬಹುದು ಎಂಬ ನಿರೀಕ್ಷೆಯನ್ನು ಹುಸಿಮಾಡಿ ಹದಿಮೂರು ಲಕ್ಷ ಜನರ ಸೇರಿ. ಜನರನ್ನು ನಿಯಂತ್ರಿಸಲು ಹರಸಾಹಸಪಟ್ಟದ್ದು ತುಳುವರ ಉತ್ಸಾಹಕ್ಕೆ ಸಾಕ್ಷಿಯಾಗಿದೆ. ಈ ಉತ್ಸಾಹಕ್ಕೆ ರಾಜಕೀಯ ರಹಿತವಾದ ನೇತೃತ್ವವೊಂದು ಸಿಕ್ಕಿದರೆ ಖಂಡಿತವಾಗಿಯೂ `ತುಳುಅಪ್ಪೆ' ಸವರ್ಾಲಂಕೃತ ಭೂಷಿತೆಯಾಗಿ ಮೆರೆದಾಡುತ್ತಾಳೆ.

ತಿತ್ತೀರಿ ಬಿತ್ಲ್ ಮಜಲ್ದ ಪಂತಿ



ಫಲವತ್ತಾದ ತಿತ್ತೀರಿ ಬಿತ್ಲ್ ಮಜಲು ಗದ್ದೆಯಲ್ಲಿ ಕಳೆಹುಲ್ಲು ಬೆಳೆದಿದೆ ಎಂಬ ದೂರು ಗುತ್ತಿನ ಯಜಮಾನನಿಗೆ ಬಂದಿತು. ಆತ ಅದು ಹೇಗಾಯಿತು? ಎಂದು ವಿಚಾರಣೆ ಆರಂಭಿಸಿದ ಪಾಡ್ದನ ಹೀಗಿದೆ.
ತಿತ್ತೀರಿ ಬಿತ್ಲ್ ಮಜಲ್ಡ್ ಪಂತಿ ಎಕರ್್ದ್ಂಡ್ಗೇ.
ದಾಯೆ ಎಮರ್ೆ ದಾಯೆ ಎಮರ್ೆ ಪಂತಿ ಮೇಯಿಜ?
ಇರೆ ಚಾಕಿರ್ದಾಯೆ ಬಲ್ಲ್ಬುಡ್ಜೆಡ ಯಾನ್ ದಾನೊಡು?
ದಾಯೆ ಚಾಕಿರ್ದಾಯ ದಾಯೆ ಚಾಕಿರ್ದಾಯ
ಬಲ್ಲ್ ಬುಡ್ತುಜಾ?
ಇರೆ ಯಜಮಾನ್ದಿ ತೆಲಿ ಮೈತ್ಜೆರ್ಡ ಯಾನ್ ದಾನೋಡು?
ದಾಯೆ ಪೊಣ್ಣೆ, ದಾಯೆ ಪೊಣ್ಣೆ ತೆಲಿ ಮೈತ್ಜಾ?
ಎನ್ನ ಕೈಸಟ್ಟಿ, ಕುಡುಪು ಉದಲ್ ಪತ್ತ್ದ್ಂಡೇ
ಯಾನ್ ದಾನೊಡು?
ದಾಯೆ ಕೋರಿ ದಾಯೆ ಕೋರಿ ಉದಲ್ ಪೆಜ್ಜ್ಜಾ?
ಎನ್ನ ಕೊಕ್ಕು ಬಡ್ಡ್ ಆತ್ಂಡೆ ಯಾನ್ ದಾನೋಡು?
ದಾಯೆ ಆಚಾರಿ, ದಾಯೆ ಆಚಾರಿ ಕೊಕ್ಕು ಕೆತ್ತ್ಜಾ?
ಎನ್ನ ಉಳಿ, ಸುತ್ತೆ ಕಲ್ವೆರ್ ಕೊನೊತೆರೆ
ಯಾನ್ ದಾನೋಡು?
ದಾಯೆ ನಾಯಿ ದಾಯೆ ನಾಯಿ ಕಲ್ಪನ್ ಪತ್ತ್ಜಾ?
ಇರೆ ಒಟ್ಟುಗು ಬೋಂಟೆಗ್ ಬೈದೆನೆ
ಯಾನ್ ದಾನೋಡು?
ತುಳು ಕವಿಯೊಬ್ಬ ರಚಿಸಿದ ಈ ಪಾಡ್ದನವನ್ನು ಬಾಲ್ಯದಲ್ಲಿ ಕೇಳಿದ, ಹಾಡಿದ ನೆನಪಿನಿಂದ ಇಲ್ಲಿ ನೀಡಲಾಗಿದೆ. ಈ ಪಾಡ್ದನದ ಪ್ರಶ್ನೆಗಳ ಸರಮಾಲೆ ಅಪಾರವಾದ ಅರ್ಥವನ್ನು ನೀಡುತ್ತದೆ.
ಹುಲ್ಲು ಮೇಯುವುದು ಎಮ್ಮೆಯ ಕೆಲಸ ಯಾಕೆ ಮೇಯಲಿಲ್ಲ? ಎಂದು ಯಜಮಾನ ಎಮ್ಮೆಯನ್ನು ಕೇಳಿದಾಗ ಕೆಲಸದಾಳು ಹಗ್ಗ ಬಿಡಲಿಲ್ಲ ಎನ್ನುತ್ತದೆ. ಹಗ್ಗ ಯಾಕೆ ಬಿಡಲಿಲ್ಲ? ಎಂದಾಗ ಕೆಲಸದವ ಮನೆಯೊಡತಿ ತೆಲಿನೀರು ಕೊಡಲಿಲ್ಲ ಎನ್ನುತ್ತಾನೆ. ತೆಲಿನೀರು ಯಾಕೆ ಕೊಡಲಿಲ್ಲ? ಎಂದಾಗ ಅನ್ನ ಬಸಿಯಲು ಉಪಯೋಗಿಸುವ ಮರದ `ಕೈಸಟ್ಟಿ' ಮತ್ತು ಬೀಳಲಿನ `ಕುಡುಪು' ಗೆದ್ದಲು ತಿಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾಳೆ. ಗೆದ್ದಲನ್ನು ಯಾಕೆ ಹೆಕ್ಕಿ ತಿನ್ನಲಿಲ್ಲ? ಎಂದು ಕೋಳಿಯನ್ನು ಕೇಳಿದಾಗ ಕೋಳಿ ನನ್ನ ಕೊಕ್ಕು ಹರಿತವಿಲ್ಲ ಎಂದು ಬಿಂಕವಾಡುತ್ತದೆ. ಕೊಕ್ಕನ್ನು ಬಡಗಿ ಯಾಕೆ ಕೆತ್ತಿ ಹರಿತ ಮಾಡಲಿಲ್ಲ? ಎಂದು ಕೇಳಿದಾಗ ನನ್ನ ಉಳಿ, ಸುತ್ತಿಗೆ ಕಳ್ಳರು ಕದ್ದುಕೊಂಡುಹೋಗಿದ್ದಾರೆ ಎಂದು ದೂರು ಕೊಡುತ್ತಾನೆ. ಕಳ್ಳರನ್ನು ಯಾಕೆ ಹಿಡಿಯಲಿಲ್ಲ? ಎಂದು ನಾಯಿಯನ್ನು ಕೇಳಿದಾಗ ರಾತ್ರಿ ಹಗಲು ತಮ್ಮೊಂದಿಗೆ ಬೇಟೆಗೆ ಬಂದಿದ್ದರಿಂದ ನಾನೇನು ಮಾಡಲು ಸಾಧ್ಯ? ಎಂದು ಕೇಳುತ್ತದೆ. ಈಗ ಗುತ್ತಿನ ಯಜಮಾನನಿಗೆ ತನ್ನ ತಪ್ಪಿನ ಅರಿವಾಗುತ್ತದೆ. ತಾನು ಕರ್ತವ್ಯ ಮರೆತು ರಾತ್ರಿ ಹಗಲು ಬೇಟೆಯ ಮೋಜಿನಲ್ಲಿ ಕಾಲ ಕಳೆಯುತ್ತಿರುವ ಬಗ್ಗೆ ಆತನಿಗೆ ನಾಯಿ ಎಚ್ಚರಿಸುತ್ತದೆ.
ನಮ್ಮ ತುಳುನಾಡಿನ ಕತೆಯೂ ಇದಕ್ಕಿಂತೆ ಒಂದು ಹೆಜ್ಜೆ ಮುಂದೆ ಹೋಗಿದೆ. ತಿತ್ತೀರಿ ಬಿತ್ತಿಲಿನ ಹುಲ್ಲನ್ನು ತೆಗೆದು ಫಸಲು ತೆಗೆಯಲು ಯಜಮಾನ ಮುಂದೆ ಯತ್ನಿಸಿದರೂ. ತುಳುನಾಡಿನ ಮಜಲು ಗದ್ದೆಯ ತುಂಬಾ ಕಳೆ ಬೆಳೆದುದನ್ನು ಕಿತ್ತು ಹಾಕಲು ನಾವು ಎಷ್ಟು ಪ್ರಯತ್ನಿಸಿದ್ದೇವೆ ಎಂಬ ಪ್ರಶ್ನೆ ನಮ್ಮೆದುರು ನಿಲ್ಲುತ್ತದೆ.
ಈ ಪಾಡ್ದನದ ಕಾಲದಲ್ಲಿ ಬೇಟೆ ಎಂಬುದು ಮೋಜು ಮಜಾ ಮಾಡುವ ಒಂದು ಸಾಧನವಾಗಿತ್ತು. ಯಜಮಾನ ಕೇವಲ ಬೇಟೆಯ ವ್ಯಸನದಿಂದ ಕರ್ತವ್ಯ ಮರೆತಿದ್ದರಿಂದ ಗುತ್ತಿನಲ್ಲಿ ಹಲವಾರು ಅನಾಹುತಗಳಾದವು. ಇದರ ಅರಿವು ಆತನಿಗೆ ಬಂದಾಗ ಅತ ಎಲ್ಲರನ್ನು ವಿಚಾರಿಸತೊಡಗಿದ ಎಲ್ಲರೂ ಒಂದೊಂದು ಕಾರಣ ಹೇಳಿ ನುಣಿಚಿಕೊಂಡರು. ತಪ್ಪು ನನ್ನದಲ್ಲ ಎನ್ನುತ್ತಾ ಇನ್ನೊಬ್ಬನ ಮೇಲೆ ಹಾಕತೊಡಗಿದರು. ಕೊನೆಗೆ ತಪ್ಪು ಎಂಬ ಮಾಲೆ ಗುತ್ತಿನ ಯಜಮಾಜನ ಕುತ್ತಿಗೆಯನ್ನೇ ಅಲಂಕರಿಸಿಬಿಟ್ಟಿತು!
ಇದು ಒಂದು ಗುತ್ತಿನ ಮನೆಯ ಕತೆಯಾಯಿತು. ಹೆಚ್ಚಿನ ಸಂಘ, ಸಂಸ್ಥೆಗಳು, ವ್ಯವಹಾರ ಕೇಂದ್ರಗಳಿಗೂ ಈ ಪಾಡ್ದನ ಚೆನ್ನಾಗಿ ಒಪ್ಪುತ್ತದೆ. ತಪ್ಪು ಮಾಡುತ್ತಿದ್ದೇವೆ ಎಂದು ಅರಿವಿಗೆ ಬಂದರೂ ತಮ್ಮ ಸ್ವಾರ್ಥಕ್ಕಾಗಿ ತಪ್ಪನ್ನು ಅಪ್ಪಿಕೊಂಡು ಪತನದತ್ತ ಸಾಗುವ ಕಾಯಕಕ್ಕೆ ಯಾರೂ ಏನೂ ಹೇಳುವಂತಿಲ್ಲ. ತುಳುನಾಡಿನ ಸಂಸ್ಕೃತಿ ಹಾಳಾಗಿದೆ, ಹಾಳಾಗುತ್ತಿದೆ ಎಂದು ಹೇಳುವಲ್ಲಿಯೂ ಈ ಪಾಡ್ದನ ಸಕಾಲಿಕವಾಗಿ ಅನ್ವಯಿಸುತ್ತದೆ.
ತುಳುನಾಡಿನ ಜನತೆ ಸಂಸ್ಕೃತಿ ಮರೆತು ಪರ ಸಂಸ್ಕೃತಿಯನ್ನು ಅನುಸರಿಸಿ ದಿನಕ್ಕೊಂದು ರೀತಿಯ ಮೋಜಿನಲ್ಲಿ ಕಾಲ ಕಳೆಯುತ್ತಿರುವಾಗ ಅದು ತಪ್ಪು ಎಂಬ ಅರಿವು ಎಲ್ಲರಿಗೂ ಬರುತ್ತಿದೆ. ಆದರೆ ಇನ್ನೊಬ್ಬನನ್ನು ತೋರಿಸುತ್ತಾ ಹಾಗಾಯಿತು, ಹೀಗಾಯಿತು ಎನ್ನುತ್ತಾ ತಪ್ಪು ಮಾಡುತ್ತ, ಅನುಕರಣೆ ಮಾಡುತ್ತಲೇ ಸಾಗುತ್ತಿದ್ದೇವೆ.
ಹೇಳಿ ಕೇಳಿ ಈಗ ನಾವು ಪ್ರಜಾಪ್ರಭುತ್ವವನ್ನು ಅನುಸರಿಸುತ್ತಿದ್ದೇವೆ. ನಾವೇ ಪ್ರಭುಗಳಾಗಿದ್ದೇವೆ. ತುಳು ಸಂಸ್ಕೃತಿ ಹಾಳಾಗಿದೆ ಎಂದು ನಾವೆಷ್ಟು ಹೇಳಿಕೊಂಡು, ಅಸಮಾಧಾನ, ಕೋಪ, ಬಿಂಕ, ದರ್ಪ, ಅಸಹಾಯಕತೆ ವ್ಯಕ್ತಪಡಿಸಿದರೂ ಹಾಳುಮಾಡಿದ ಪಾಪ ನಮ್ಮ ಬೆನ್ನ ಹಿಂದೇ ನೆರಳಿನಂತೆ ಹಿಂಬಾಲಿಸುತ್ತಿದೆ!

Thursday, December 3, 2009

`ಕಳಸೆ' ಅಕ್ಕಿಯ ಬದಲು `ಪಣವಿ'ಗೆ ಮಾನ್ಯತೆ




ವಿಶ್ವ ತುಳು ಸಮ್ಮೇಳನದ ಲಾಂಛನದಲ್ಲಿ `ಕಳಸೆ' ಎಂದು ತುಳುವಿನಲ್ಲಿ ಕರೆಯಲ್ಪಡುವ ಮಾಪನ ವಸ್ತುವೊಂದು ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ತುಳುನಾಡಿನಲ್ಲಿ ಅಕ್ಕಿ, ಭತ್ತ, ಧಾನ್ಯಗಳನ್ನು ಕಳಸೆಯಲ್ಲಿ ಅಳೆದು ಕೊಡಲಾಗುತ್ತಿತ್ತು. ಕಿಲೋಗ್ರಾಂ ಲೆಕ್ಕಪದ್ಧತಿ ಬಂದ ನಂತರ ಕಳಸೆಗಳು ವಸ್ತುಸಂಗ್ರಹಾಲಯ ಸೇರಿವೆ.
ಅಕ್ಕಿ ತುಂಬಿ ತುಳುಕುವ ಕಳಸೆಯನ್ನು ತುಳುನಾಡಿನ ಶ್ರೀಮಂತಿಕೆಯ ಸಂಕೇತ ಎಂದು ಭಾವಿಸಲಾಗುತ್ತಿದೆ. ಈ ಅರ್ಥದಿಂದಲೇ ವಿಶ್ವತುಳು ಸಮ್ಮೇಳನದ ಲಾಂಛನದಲ್ಲಿ ಇದನ್ನು ಪ್ರಾಮುಖ್ಯವಾಗಿ ತೋರಿಸಲಾಗಿದೆ. ತುಳುನಾಡು ಅಕ್ಕಿಯಿಂದ ತುಂಬಿ ತುಳುಕುತ್ತಿತ್ತು ಎಂಬುದರ ಸಂಕೇತವೂ ಇದಾಗಿದೆ. ತುಳುನಾಡಿನಾದ್ಯಂತ ಹಚ್ಚ ಹಸಿರಾಗಿ ಕಂಡು ಬರುತ್ತಿದ್ದ ಭತ್ತದ ಗದ್ದೆಗಳು, ಅದರಲ್ಲಿ ಸೊಂಟಕ್ಕೊಂದು ಬಟ್ಟೆ ಸುತ್ತಿಕೊಂಡು ಉಳಿದಂತೆ ಬರಿ ಮೈಯನ್ನು ಸೂರ್ಯನ ಬೆಳಕಿಗೆ ಒಡ್ಡುತ್ತಾ ಮೈಮುರಿದು ದುಡಿಯುತ್ತಿದ್ದ ರೈತರು. ಇದೆಲ್ಲಾ ಐದು ದಶಕಗಳ ಹಿಂದಿನ ತುಳುನಾಡಿನ ಚಿತ್ರಣವಾಗಿತ್ತು. ಅಂದು ತುಳುನಾಡಿನ ಅಂಗಡಿ ಮುಂಗಟ್ಟುಗಳಲ್ಲಿ ಅಕ್ಕಿಮುಡಿಯ ಅಟ್ಟಿ ಕಂಡು ಬರುತ್ತಿದ್ದವು. `ಬೋರಿಗಾಡಿ'ಗಳಲ್ಲಿ ಅಕ್ಕಿಯ ಮುಡಿಯ ಸಾಗಾಟವಾಗುತ್ತಿತ್ತು. 1907ರಲ್ಲಿ ಆರಂಭವಾದ ಮಂಗಳೂರು ರೈಲು ನಿಲ್ದಾಣಕ್ಕೆ ಆಗಮಿಸುತ್ತಿದ್ದ ಗೂಡ್ಸ್ ರೈಲುಗಳಲ್ಲಿ ಅಕ್ಕಿಮುಡಿಯ ಅಟ್ಟಿಗಳು ಹೊರಪ್ರದೇಶಗಳಿಗೆ ಸಾಗಾಟವಾಗುತ್ತಿದ್ದ ಚಿತ್ರ ಬಾಸೆಲ್ ಮಿಷನ್ ನ ಚಿತ್ರಸಂಗ್ರಹದಲ್ಲಿದೆ. ಒಂದು ಕಾಲದಲ್ಲಿ ತುಳುನಾಡು ಅಕ್ಕಿಯಿಂದ ತುಂಬಿ ತುಳುಕುತ್ತಿತ್ತು ಎಂಬುದಕ್ಕೆ ಇಂತಹ ಅನೇಕ ನಿದರ್ಶನಗಳು ಕಂಡು ಬರುತ್ತವೆ.

ವಿಶ್ವಸಮ್ಮೇಳನದ ಲಾಂಛನದಲ್ಲಿ ತುಳುನಾಡನ್ನು ಅತೀ ಹೆಚ್ಚು ಕಾಲ ಆಳಿದ ಆಲೂಪರ ಕಾಲದ `ಪಣವು'ವನ್ನು ತೋರಿಸಲಾಗುತ್ತಿದೆ. ಆದರೆ ಇದು ಕಳಸೆಗಿಂತ ಸಣ್ಣದಾಗಿದ್ದರೂ ಈಗ ತುಳುನಾಡಿನಲ್ಲಿ ತನ್ನ ಪ್ರತಾಪವನ್ನು ಚೆನ್ನಾಗಿ ತೋರಿಸುತ್ತಿದೆ. ಹಣದ ವ್ಯಾಮೋಹಕ್ಕೆ ಬಲಿ ಬಿದ್ದ ಜನತೆ ನಿಧಾನವಾಗಿ ತುಳುನಾಡನ್ನು ಬೃಹತ್ ಕೈಗಾರಿಕೆಗಳ ಕಸದ ತೊಟ್ಟಿಯಾಗುವಂತೆ ಮಾಡುತ್ತಿದ್ದಾರೆ. ತುಳುನಾಡಿನ ಅಕ್ಕಿ ಬೆಳೆದ ಅಮೂಲ್ಯ ಭೂಮಿ ಈಗ ಹಣದಾಸೆಯಿಂದ ಬೃಹತ್ ಕೈಗಾರಿಕೆಗಳಿಗೆ ಮಾರಾಟವಾಗುತ್ತಿದೆ. ಈಗ ತೈಲದ ತೊಟ್ಟಿಗಳಿಂದ ಕಂಗೊಳಿಸುತ್ತಿರುವ ಸುರತ್ಕಲ್ ಸಮೀಪದ ಬಾಳ - ತೋಕೂರು ಗ್ರಾಮಗಳು ಒಂದು ಕಾಲದಲ್ಲಿ ಅಕ್ಕಿಯ ಕಣಜಗಳಾಗಿದ್ದವು.
ಭತ್ತದ ಗದ್ದೆಗಳಿಂದ ನಳನಳಿಸುತ್ತ ಅಕ್ಕಿಯ ತವರೂರಾಗಿದ್ದ ಪಣಂಬೂರು ಆಸು ಪಾಸಿನಲ್ಲಿ ಈಗ ಕಂಡು ಬರುತ್ತಿರುವುದು ಕಲ್ಲಿದ್ದಲು, ಅದುರಿನ ಧೂಳು, ಯೂರಿಯಾದ ಹರಳುಗಳು, ಸಲ್ಫೇಟ್ ಪುಡಿ, ಗ್ರಾನೈಟ್ ಕಲ್ಲುಗಳು, ಮರದ ದಿಮ್ಮಿಗಳು. ನವಮಂಗಳೂರು ಬಂದರು ನಮ್ಮ ನಾಡನ್ನು ಜಗತ್ತಿಗೆ ತೆರೆದು ತೋರಿಸಿದರೂ ತುಳುನಾಡಿನ ಸಾಂಸ್ಕೃತಿಕ ವೈಭವದ ಅಧಃಪತನ ಆರಂಭವಾದದ್ದು ಈ ಬಂದರು ಕಾಯರ್ಾರಂಭ ಮಾಡಿದ ಕ್ಷಣದಿಂದ ಎಂಬುದನ್ನೂ ಮರೆಯುವಂತಿಲ್ಲ. ನಿಧಾನವಾಗಿ ತುಳುನಾಡಿನಲ್ಲಿ ಭತ್ತ ಬೆಳೆದು ಅಕ್ಕಿಯಾಗುತ್ತಿದ್ದ ಪ್ರದೇಶಗಳನ್ನು ಬಂಜರು ಎಂದು ಘೋಷಿಸುತ್ತಾ ಪಣವು ನುಂಗುತ್ತಾ ಸಾಗುತ್ತಿದೆ.
ಈಗ ತುಂಡು ಬಟ್ಟೆಯ ಕಪ್ಪು-ಕರಿಯ ಬಣ್ಣದ ಮೈಯ ರೈತರು ಕಾಣಸಿಗುವುದು ಅಪರೂಪ. ಬಿಳಿ ಬಣ್ಣದ ಠಾಕು ಠೀಕಾದ ಉಡುಪು ತೊಟ್ಟು, ಸೂಟು ಬೂಟು ಹಾಕಿದ ಜನರು ತುಳುನಾಡಿನ ತುಂಬೆಲ್ಲಾ ಓಡಾಡುತ್ತಿದ್ದಾರೆ. ಅವರ ಕಿಸೆಯಲ್ಲಿ `ಪಣವಿ'ನ ಝಣತ್ಕಾರ ಕೇಳಿಸುತ್ತಿದೆ. ಬೆವರು ವಾಸನೆಯ ಬದಲಿಗೆ ಸೆಂಟು, ಪೌಡರು ವಾಸನೆ ಮೂಗಿಗೆ ರಾಚುತ್ತಿದೆ. ಮಾನವನ ಅತೀ ಅವಶ್ಯಕವಾದ ಆಹಾರದ ವಸ್ತು `ಕುಚ್ಚಲು' ಅಕ್ಕಿಯನ್ನು ಹೊರ ಪ್ರದೇಶಗಳಿಗೆ ಸಾಗಾಟ ಮಾಡುತ್ತಿದ್ದ ತುಳುನಾಡಿಗೆ ಹೊರ ಪ್ರದೇಶಗಳ ಬಿಳಿ ಅಕ್ಕಿ ಆಗಮಿಸುತ್ತಿದೆ. ಬರ ಬಂದರೆ ಅಕ್ಕಿಯನ್ನು ಬಿಟ್ಟು ಹಣವನ್ನು ತಿನ್ನಲು ಆಗುವುದಿಲ್ಲ ಎಂಬ ಸತ್ಯ ಎಲ್ಲರಿಗೂ ಗೊತ್ತು. ಕಾಲ ಸತ್ಯ ಒಪ್ಪಿಕೊಳ್ಳದಂತೆ ಮಾಡಿದೆ!

Thursday, November 19, 2009

ಬದಲಾದದ್ದು ನಾವು, ಮಳೆರಾಯನಲ್ಲ



ಜಾಗತಿಕ ತಾಪಮಾನ ಹೆಚ್ಚಳದಿಂದ ವಾತಾವರಣದಲ್ಲಿ ಏರುಪೇರು ಉಂಟಾಗಿ ಮಳೆ, ಬಿಸಿಲುಗಳಲ್ಲಿ ವ್ಯತ್ಯಾಸ ಕಂಡು ಬರುತ್ತದೆ. ಅಕಾಲಿಕ ಮಳೆ, ಪ್ರವಾಹ, ಚಂಡಮಾರುತಗಳು ಉಂಟಾಗುತ್ತವೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಈ ಹೇಳಿಕೆಗಳಲ್ಲಿ ಸತ್ಯಾಂಶವಿರಬಹುದು. ಆದರೆ ತುಳುನಾಡಿನ ಬೆಳೆಗಳಿಗೆ ಸಂಬಂಧಪಟ್ಟಂತೆ ಇದು ಎಷ್ಟು ಸರಿ ಎಂಬುದು ಜಿಜ್ಞಾಸೆಯಾಗಿದೆ.
ಫಯಾನ್ ಚಂಡಮಾರುತದಿಂದ ತುಳುನಾಡಿನ ಭತ್ತದ ಬೆಳೆಗಳಿಗೆ ಅಪಾರ ಹಾನಿ ಉಂಟಾಯಿತು. ಕಟಾವು ಮಾಡಲ್ಪಟ್ಟ ಭತ್ತದಗಿಡಗಳ ಸೂಡಿಗಳು ನೆರೆನೀರಿನಲ್ಲಿ ತೇಲಾಡತೊಡಗಿದವು. ಇದು ಈ ಬಾರಿ ಮಾತ್ರ ಸಂಭವಿಸಿದ ಅನಾಹುತ ಎಂದು ನಾವು ತಿಳಿದುಕೊಳ್ಳಬೇಕಾಗಿಲ್ಲ. ವರ್ಷ ವರ್ಷವೂ ಈ ರೀತಿಯ ಬೆಳೆಹಾನಿ ಸಂಭವಿಸುತ್ತಲೇ ಇರುತ್ತದೆ. ನಾಟಿ ಸಂದರ್ಭದಲ್ಲಿ ಮಳೆ ನಾಪತ್ತೆಯಾಗಿ, ಕಣ್ಣಾಮುಚ್ಚಾಲೆಯಾಡುತ್ತಾ ರೈತರನ್ನು ಸತಾಯಿಸುವ ಮಳೆ ಕಟಾವು ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿ ಕಂಗಾಲಾಗುವಂತೆ ಮಾಡುತ್ತದೆ. ಈಚೇಚೆಗೆ ಅಪಾರ ಪ್ರಮಾಣದ ಬೆಳೆ ನಾಶವಾಗುತ್ತಿದೆ. ಹಾಗಾದರೆ ಅಕಾಲಿಕ ಮಳೆ ಈಗ ಮಾತ್ರ ಬರುತ್ತದೆಯೇ ಹಿಂದೆ ಬರುತ್ತಿರಲಿಲ್ಲವೇ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತದೆ.
ಈ ಬಗ್ಗೆ ತುಳುನಾಡಿನ ಕೆಲವು ಹಿರಿಯರಲ್ಲಿ ಮಾತನಾಡಿದರೆ ಮಳೆರಾಯ ಬದಲಾಗಿಲ್ಲ ನಾವು ಬದಲಾಗಿದ್ದೇವೆ ಎಂಬ ವಿಚಾರ ತಿಳಿದು ಬರುತ್ತದೆ. ತುಳುನಾಡಿನ ಹಿರಿಯರು ಹೇಳುವ ಪಗ್ಗು, ಬೇಶ. ಇತ್ಯಾದಿ ತಿಂಗಳುಗಳನ್ನು ಜನವರಿ, ಫೆಬ್ರವರಿ ಮುಂತಾದ ತಿಂಗಳುಗಳಿಗೆ ಅನ್ವಯಿಸಿ ನೋಡಿದರೆ ಫೆಬ್ರವರಿ, ಮಾಚರ್್ ತಿಂಗಳ ಸುಡಬಿಸಿಲ ಕಾಲದಲ್ಲಿಯೂ ಅಪಾರ ಮಳೆ ಬಿದ್ದ ವಿಚಾರ ಅವರ ಅನುಭವದ ಬುತ್ತಿಯಿಂದ ಬಿಚ್ಚಲ್ಪಡುತ್ತದೆ. ಈಗ ನಾವು ಇಂತಹ ಅಕಾಲಿಕ ಮಳೆಗಳು ಚಂಡಮಾರುತಗಳಿಂದಾಗಿ ಉಂಟಾಗುತ್ತಿವೆ ಎಂದು ಹೇಳುತ್ತಿದ್ದೇವೆ. ಫಯಾನ್ ಎಂಬಿತ್ಯಾದಿ ಹೆಸರುಗಳಿಂದ ಕರೆಯುತ್ತೇವೆ. ವಿಜ್ಞಾನ ಮುಂದುವರಿದಂತೆ ಪ್ರಕೃತಿಗೆ ಸಂಬಂಧಪಟ್ಟಂತೆ ಭೀತಿಗಳು ಸೃಷ್ಟಿಯಾಗುತ್ತಲೇ ಸಾಗಿದೆ.
ಹಿಂದಿನ ಕಾಲದ ತುಳುನಾಡಿನ ಕೃಷಿಕರು ಯಾವ ಚಂಡಮಾರುತ, ಪ್ರಕೃತಿ ವಿಕೋಪಗಳನ್ನೂ ಎದುರಿಸುವಂತಹಾ ತಾಖತ್ತು ಹೊಂದಿದ್ದರು. ಮೂರು ನಾಲ್ಕು ದಶಕಗಳ ಹಿಂದಿನ ಅವಿಭಕ್ತ ಕುಟುಂಬಗಳು ಕೃಷಿಕಾರ್ಯಗಳಿಗಾಗಿ ಯಾರನ್ನೂ ಅವಲಂಬಿಸುವ ಅಗತ್ಯವನ್ನು ಹೊಂದಿರಲಿಲ್ಲ. ಮಳೆ ಬಿದ್ದ ಕೂಡಲೇ ಮನೆಯ ಎಲ್ಲಾ ಸದಸ್ಯರು ಒಂದೊಂದು ಕೆಲಸವನ್ನು ಹಚ್ಚಿಕೊಳ್ಳುತ್ತಾ ಕೃಷಿಕಾರ್ಯಗಳಲ್ಲಿ ತೊಡಗುತ್ತಿದ್ದರು. ಮೊದಲ ಮಳೆಗೆ ನೇಜಿ ಹಾಕಿ, ಮಳೆ ಸರಾಗವಾಗಿ ಬೀಳತೊಡಗಿದಾಗ ಗದ್ದೆಗಳನ್ನು ಉತ್ತು ನೇಜಿ ನೆಟ್ಟು ಆದಷ್ಟು ಶೀಘ್ರ ಕೃಷಿ ಕಾರ್ಯ ಮುಗಿಸಿಬಿಡುತ್ತಿದ್ದರು. ಮಳೆ ಕೈಕೊಟ್ಟರೂ ಕೆರೆ, ಹಳ್ಳಗಳಿಂದ ಸಾಂಪ್ರದಾಯಿಕ ವಿಧಾನಗಳಿಂದ ನೀರು ಎತ್ತಿ ಬೆಳೆಗಳಿಗೆ ಉಣಿಸುತ್ತಿದ್ದರು. ಕಟಾವು ಸಂದರ್ಭದಲ್ಲಿ ಮಳೆ ಬರುವ ಸೂಚನೆ ಇದ್ದರೆ ಕಟಾವು ಕಾರ್ಯವನ್ನು ಮಾಡದೆ, ಮಳೆ ಬರುವುದಿಲ್ಲ ಎಂದು ಖಚಿತವಾದ ಕೂಡಲೇ ಎಲ್ಲರೂ ಗದ್ದೆಗಿಳಿದು ಕಟಾವು ಮಾಡಿ ರಾತ್ರಿ ಹಗಲು ಕೆಲಸ ಮಾಡಿ ಕ್ಷಣಮಾತ್ರದಲ್ಲಿ `ಒತ್ತರೆ' ಮಾಡುತ್ತಿದ್ದರು. ಮಳೆರಾಯನಿಗೆ ತೊಂದರೆ ನೀಡಲು ಯಾವುದೇ ಅವಕಾಶವನ್ನೂ ಮಾಡುತ್ತಿರಲಿಲ್ಲ. ಆತ ಅಂದು ಕೂಡಾ ತನ್ನಿಚ್ಛೆಯಂತೆ ಬಂದು ಹೋಗುತ್ತಿದ್ದ.
ಆದರೆ ಈಗ ತುಳುನಾಡಿನ ಕೃಷಿ ಪದ್ಧತಿಯೇ ಬದಲಾಗಿದೆ. ಒಂದು ಗದ್ದೆಯನ್ನು ನಾಟಿಕಾರ್ಯಕ್ಕೆ ಸಿದ್ಧಗೊಳಿಸಬೇಕಾಗಿದ್ದರೆ ಹಿಂದೆಲ್ಲಾ ಬೆಳ್ಳಿ ಮೂಡಿದಾಗಲೇ ಎದ್ದು ಗೊಬ್ಬರ ಹರಡಿ ಕೋಣಗಳನ್ನು ಕಟ್ಟಿ ಸೂರ್ಯ ಮೂಡುತ್ತಿದ್ದಂತೆ ಅರ್ಧ ಗದ್ದೆಯನ್ನು ಹಸನುಗೊಳಿಸಿ ನಾಟಿಕಾರ್ಯಕ್ಕೆ ಸಿದ್ದಗೊಳಿಸುವ ಕಾರ್ಯ ಮುಗಿಯುತ್ತಿತ್ತು. ಈಗ ಕೆಲಸದಾಳುಗಳು ಯಾವಾಗ ಬರುತ್ತಾರೋ ಎಂದು ಕಾದು ಕುಳಿತುಕೊಳ್ಳುವ ಪರಿಸ್ಥಿತಿ ಇದೆ. ಸಂಜೆ ಹೊತ್ತು ಮುಳುಗಿ ತಿಂಗಳ ಬೆಳಕಿನಲ್ಲೂ ನೇಜಿ ತೆಗೆಯುವ, ಧಾನ್ಯ ಹರಿಯುವ ಕೃಷಿಯ ಕಾರ್ಯಗಳು ನಡೆಯುತ್ತಿದ್ದವು. ಈಗ ಸಂಜೆ ಐದು ಐದೂವರೆಗೆ ಕೆಲಸದಾಳುಗಳು ಕೈಕಾಲು ತೊಳೆದುಕೊಂಡುಬಿಡುತ್ತಾರೆ. ಕೋಣಗಳು ನಾಪತ್ತೆಯಾಗಿ ಟಿಲ್ಲರ್ಗಳು ಪ್ರವೇಶವಾದ ನಂತರ ಗದ್ದೆಗಳನ್ನು ಉಳಲು ಊರಿನಲ್ಲಿ ಒಂದೆರಡು ಟಿಲ್ಲರ್ ಮಾಲಕರ, ನಡೆಸುವವರ ಪುರುಸೊತ್ತನ್ನು ಕಾಯುವ ಪರಿಸ್ಥಿತಿ ಬಂದಿದೆ. ನೀರಿರುವಾಗ ಗದ್ದೆ ಉಳಲು ಸಾಧ್ಯವಾಗುತ್ತಿಲ್ಲ. ನೀರಲ್ಲದೇ ಇರುವಾಗ ಟಿಲ್ಲರ್ ಬಂದು ಗದ್ದೆಯ ಬದಿಯಲ್ಲಿ ನಿಲ್ಲುತ್ತದೆ!
ಅದು ಹೇಗೋ ಮಾಡಿಕೊಂಡು ಗದ್ದೆಯ ನೆಟ್ಟು ಬೆಳೆ ಬೆಳೆದು ಕಟಾವು ಮಾಡಲೂ ಹೊರಗಿನ ಜನರನ್ನು ಕಾಯುವ ಪರಿಸ್ಥಿತಿ. ಕಟಾವು ಮಾಡಿದ ಪೈರನ್ನು ಅಂಗಳಕ್ಕೆ ತಂದು ಒತ್ತರೆ ಮಾಡಲೂ ಕೆಲಸದಾಳುಗಳು. ಈ ಸಂದರ್ಭದಲ್ಲಿ ಮೋಡಕವಿದರಂತೂ ಗಡಿಬಿಡಿಯೇ ಗಡಿಬಿಡಿ. ಮಳೆರಾಯನಿಗೊಂದಷ್ಟು ಶಾಪ ಹಾಕುತ್ತಾ ಕಟಾವು ಮಾಡಿದ ಪೈರು, ಅರ್ಧಕ್ಕೆ ನಿಂತ ಕಟಾವು ಮತ್ತಿತರ ಕಾರ್ಯವನ್ನು ಅಸಹಾಯಕತೆಯಿಂದ ನೋಡುವ ಪರಿಸ್ಥಿತಿ. ಭತ್ತದ ಗಿಡದ ಸೂಡಿಗಳು ನೆರೆಯಲ್ಲಿ ಕೊಚ್ಚಿಕೊಂಡು ಹೋದರೂ, ಭತ್ತ ನೀರಿನಲ್ಲಿ ಮುಳುಗಿ ಮೊಳಕೆ ಬಂದರೂ ಏನೂ ಮಾಡುವಂತಿಲ್ಲ. ಮಳೆರಾಯ ಯಾರ ಕಷ್ಟಸುಖಕ್ಕೂ ಸ್ಪಂದಿಸದೆ ಅಂದಿಗೂ ಇಂದಿಗೂ ಎಂದೆಂದಿಗೂ ತನ್ನಿಚ್ಛೆಯಂತೆ ಬಂದು ಹೋಗುತ್ತಲೇ ಇರುತ್ತಾನೆ.
ಆಧುನಿಕತೆ ಹೆಚ್ಚುತ್ತಾ ಹೋದಂತೆ ಮನುಷ್ಯ ಪ್ರಕೃತಿಯೊಂದಿಗೆ ಹೋರಾಡುವ ಚಾಕಚಕ್ಯತೆಯನ್ನು ಕಳೆದುಕೊಳ್ಳುತ್ತಲೇ ಹೋಗುತ್ತಾನೆ ಎಂಬುದಕ್ಕೆ ಫಯಾನ್ ಚಂಡಮಾರುತ, ಮಳೆ, ಬೆಳಗಳ ನಾಶ ಒಂದು ಉತ್ತಮ ಉದಾಹರಣೆಯಾಗಿ ನಿಲ್ಲುತ್ತದೆ. ಈಗಲೂ ಒಳನಾಡಿನ ಕೆಲವು ಹಳ್ಳಿಗಳಲ್ಲಿ ಉಳಿದುಕೊಂಡಿರುವ ಅವಿಭಕ್ತ ಕುಟುಂಬಗಳ ಕೃಷಿಕಾರ್ಯಗಳಿಗೆ ಮಳೆರಾಯನಿಂದ ಯಾವುದೇ ತೊಂದರೆಯಾಗುತ್ತಿಲ್ಲ ಎಂಬುದು ಗಮನಾರ್ಹ.

Sunday, November 8, 2009

ಅಡಿಕೆ ಹಾಳೆಯ ಮೋಟಾರಿನ ನೆನಪು



ಒಂದೆರಡು ದಶಕಗಳ ಹಿಂದೆ ತುಳುನಾಡಿನಲ್ಲಿ ಕೂಸು ಹುಟ್ಟಿದರೆ ಮನೆಯ ಯಜಮಾನ ಅಥವಾ ಕೆಲಸದ ಆಳುಗಳು ಅಡಕೆಯ ತೋಟಕ್ಕೆ ಒಂದು ಸುತ್ತು ಹೊಡೆದು ಮೆದುವಾದ ಅಗಲವಾದ ಅಡಕೆಯ ಹಾಳೆಗಳನ್ನು ಹೆಕ್ಕಿ ತರುತ್ತಿದ್ದರು. ಎಳೆಮಗುವಿಗೆ ಗಿಡಮೂಲಿಕೆಗಳಿಂದ ಕೂಡಿದ ತೆಂಗಿನ ಎಣ್ಣೆ ಹಚ್ಚಿ ಮಾಲೀಸು ಮಾಡಿ ಅಡಕೆ ಹಾಳೆಯ ಮೇಲೆ ಮಲಗಿಸುತ್ತಿದ್ದರು. ಹಾಳೆ ಮೃದುವಾಗಿದ್ದು ಎಳೆಯ ಚರ್ಮಕ್ಕೆ ಸರಿಯಾಗಿ ಹೊಂದಿಕೆಯಾಗುತ್ತಿತ್ತು. ತಾಯಿಗೆ ಹಿಡಿದುಕೊಳ್ಳುವುದಕ್ಕೂ ಸುಲಭವಾಗುತ್ತಿತ್ತು. ಈಗ ಯುವಾಸ್ಥೆಯಲ್ಲಿರುವ ಹಿಂದಿನ ತುಳುನಾಡ ಮಕ್ಕಳು ಅಡಕೆ ಹಾಳೆಯ ಮೇಲೆ ಮಲಗಿದವರೇ. ಈಗ ಹಾಳೆಯ ಸ್ಥಾನವನ್ನು ವಿವಿಧ ಕಂಪೆನಿಗಳ ದುಬಾರಿ ರಬ್ಬರ್ ಹಾಳೆ ಆಕ್ರಮಿಸಿಕೊಂಡಿದ್ದರೂ ಕೆಲವು ಕಡೆ ಎಳೆಯ ಮಕ್ಕಳನ್ನು ಮಲಗಿಸಲು ಹಾಳೆಯನ್ನೇ ಉಪಯೋಗಿಸುತ್ತಾರೆ.
ಅಡಕೆ ಹಾಳೆಯನ್ನು `ಪ್ರೆಸ್' ಮಾಡಿ ತಟ್ಟೆಗಳು, ಬಟ್ಟಲುಗಳು, ಕಪ್ ಪರಿವರ್ತಿಸುವ ಉದ್ಯಮಗಳು ಈಗ ಇವೆ. ಬ್ರಹ್ಮಕಲಶೋತ್ಸವ, ನಾಗಮಂಡಲ ಮುಂತಾದ ಬೃಹತ್ ಸಂಖ್ಯೆಯ ಜನರು ಸೇರುವ ಸಮಾರಂಭಗಳಲ್ಲಿ `ಬುಫೆ' ವಿಧಾನದಲ್ಲಿ ಊಟ ಮಾಡಲು ಮೊದಲ ಮೊದಲು ಅಡಕೆ ಹಾಳೆಗಳನ್ನು ಹಾಗೇ ಬಳಸಲಾಗುತ್ತಿದ್ದರೂ, ಈಗೀಗ ಬಟ್ಟಲಿನಾಕಾರಲ್ಲಿ ಪರಿವರ್ತಿಸಿದ ತಟ್ಟೆಗಳು ವ್ಯಾಪಕವಾಗಿ ಬಳಸಲಾಗುತ್ತದೆ. ಇದು ಪ್ರಕೃತಿ ಸಹ್ಯವೂ, ಆರೋಗ್ಯಕಾರಿಯೂ ಹೌದು. ಪ್ಲಾಸ್ಟಿಕನಂತೆಮಣ್ಣಿನೊಳಗೆ ಸೇರಿ ಎಂದಿಗೂ ಕರಗದೆ ಇರುವಂತಹುದಲ್ಲ. ಸುಲಭವಾಗಿ ಮಣ್ಣಿನಲ್ಲಿ ಬೆರೆತು ಮಣ್ಣಾಗಿ ಹೋಗುತ್ತದೆ. ಮಿತವ್ಯಯ, ಕೃಷಿಗೆ ಉತ್ತೇಜನ ನೀಡುವುದಕ್ಕಾಗಿ ಮತ್ತು ಸುಲಭವಾಗಿ ಬಳಸಬಹುದಾದುದರಿಂದ ಇದರ ಉಪಯೋಗ ವ್ಯಾಪಕವಾಗುತ್ತಿದೆ.
ಅಡಕೆ ಹಾಳೆಯಿಂದ ಹಲವಾರು ಕರಕುಶಲ ವಸ್ತುಗಳನ್ನೂ ತಯಾರಿಸಲಾಗುತ್ತದೆ. ಯಾವ ರೀತಿಯ ಬಗ್ಗುವಿಕೆಗೂ ಇದು ಒಗ್ಗುವುದರಿಂದ ಆಕರ್ಷಕ, ಸುಂದರವಾದ ಕಲಾವಸ್ತುಗಳನ್ನು ಇದರಿಂದ ತಯಾರಿಸಬಹುದಾಗಿದೆ. ಭೂತಕೋಲದಲ್ಲಿ ಅಡಕೆ ಹಾಳೆ ಬಹುಉಪಯೋಗಿ ವಸ್ತುವಾಗಿದೆ. ಭೂತದ ಮೊಗ (ಮುಖವಾಡ) ಇಲ್ಲದೆ ಕಡೆಗಳಲ್ಲಿ ಹಾಳೆಯ ಮೊಗವನ್ನು ತಯಾರಿಸಲಾಗುತ್ತದೆ. ಭೂತ ಕಟ್ಟುವವರು ಮೊಣಕಾಲಿಗೆ ಹಾಳೆಯ ತುಂಡನ್ನು ಕಟ್ಟಿಕೊಳ್ಳುತ್ತಾರೆ. ಫ್ಯಾನ್ ಆಗಮಿಸುವ ಮೊದಲು ಬೇಸಿಗೆ ಕಾಲದಲ್ಲಿ ಬೀಸಣಿಗೆ ಮಾಡಲೂ ಇದು ಉಪಯೋಗವಾಗುತ್ತಿತ್ತು. ಕೃಷಿಕಾರ್ಯಗಳಲ್ಲಿ ತಲೆಹೊರೆಗೆ ಶಿರಸ್ತ್ರಾಣವಾದ `ಮುಟ್ಟಾಲೆ', ಗೊಬ್ಬರ, ನೇಜಿ ಹೊರವಾಗ ನೀರು ತಲೆಗೆ ತಾಗದಂತೆ ಧರಿಸುವ `ಅರುಂಬುಡೆ'ಗಳನ್ನು ಹಾಲೆಯಿಂದ ತಯಾರಿಸಲಾಗುತ್ತಿತ್ತು, ಈಗ ಕೆಲವು ಕಡೆ ಇದರ ಸ್ಥಾನವನ್ನು ಹೆಲ್ಮೆಟ್ಗಳು ಆಕ್ರಮಿಸಿಕೊಂಡಿದೆ.
ಒಂದು ಕಾಲದಲ್ಲಿ ಯಾರೂ ಕೇಳುವವರಿಲ್ಲದೆ ತೋಟದಲ್ಲೆಲ್ಲಾ ಕಸವಾಗಿ ಬೀಳುತ್ತಿದ್ದ ಅಡಕೆ ಸೋಗೆ ಮತ್ತು ಹಾಳೆಗಳು ಬಿಸಿನೀರು ಕಾಯಿಸಲು ಮಾತ್ರ ಉಪಯೋಗವಾಗುತ್ತಿತ್ತು. ಅಂದಿನ ಕಾಲದ ಮಕ್ಕಳಿಗೆ ಈಗಿನಂತೆ ಮೂರು ಚಕ್ರದ ಸೈಕಲ್. ಪ್ಲಾಸ್ಟಿಕ್, ಫೈಬರ್ ಚಕ್ರದ ಗಾಡಿಗಳು ಇರಲಿಲ್ಲ. ಎಲ್ಲೋ ಶ್ರೀಮಂತರ ಮನೆಯ ಮಕ್ಕಳು ಕಾಂಕ್ರೀಟ್ ಹಾಕಿದ ಮನೆಯ ಅಂಗಳದಲ್ಲಿ ಮಾತ್ರ ಸೈಕಲ್ನಲ್ಲಿ ಆಟವಾಡುತ್ತಿದ್ದರು. ಆ ಸಂದರ್ಭದಲ್ಲಿ ಸಾಮಾನ್ಯ ವರ್ಗದ ಮಕ್ಕಳಿಗೆ ಅಡಿಕೆ ಹಾಳೆಯ ಸುಲಭದ ಆಟದ ಸಾಧನವಾಗಿತ್ತು. ಈ ಆಟ ಆಡಲು ಕನಿಷ್ಠ ಇಬ್ಬರ ಅವಶ್ಯಕತೆ ಇತ್ತು. ಅಡಕೆಯ ಹಾಳೆಯ ಮೇಲೆ ಓರ್ವ ಕುಳಿತುಕೊಂಡರೆ ಇನ್ನೋರ್ವ ಅದರ ಸೋಗೆಯ ಭಾಗದಲ್ಲಿ ಹಿಡಿದು ಎಳೆಯುವುದು. ನಿಗದಿತ ದೂರ, ನಿಗದಿತ ಸುತ್ತು ಮುಗಿದ ನಂತರ ಎಳೆಯುವವ ಕುಳಿತು ಕುಳಿತವ ಎಳೆಯುವುದು ಈ ಆಟದ ಅಘೋಷಿತ ನಿಯಮ. ತೋಟ, ಅಂಗಳ ಮನೆಯ ಹಿಂದಿನ ದಾರಿ, ಗದ್ದೆಯ ನಡುವಿನ ದಾರಿ, ಗದ್ದೆಯ ಹುಣಿ ಇವೆಲ್ಲಾ ಈ ಹಾಳೆಯ ಆಟದ ಅಂಗಣಗಳು ಈ ಆಟದಲ್ಲಿ ಮಕ್ಕಳು ಎಷ್ಟು ತಲ್ಲೀನರಾಗಿರುತ್ತಿದ್ದರೆಂದರೆ ಹಾಳೆ ಹರಿದು ಹೋಗಿ ಒಂದು ಹಾಳೆಯ ಮೇಲೆ ಇನ್ನೊಂದು ಹಾಳೆಯನ್ನಿಟ್ಟು ಎಳೆಯುವುದು. ಹೆಚ್ಚು ಮಕ್ಕಳಿದ್ದರೆ ಇಬ್ಬರು ಮೂವರನ್ನು ಕುಳ್ಳಿರಿಸಿ ದೊಡ್ಡ ಮಕ್ಕಳು, ದೊಡ್ಡ ಮಕ್ಕಳನ್ನು ಎರಡು ಮೂರು ಸಣ್ಣ ಮಕ್ಕಳು ಸೇರಿ ಎಳೆಯುವುದು, ಹಾಳೆ ಹರಿದ ಪರಿವೆಯೇ ಇಲ್ಲದೆ ತೊಟ್ಟುಕೊಂಡ ಚೆಡ್ಡಿಯೂ ಹಿಂಭಾಗದಲ್ಲಿ ಒಂದಷ್ಟಗಲ ಹರಿದು ಹೋಗುವುದೂ ನಡೆಯುತ್ತಿತ್ತು.
ಹಿಂದೆಲ್ಲಾ ಅಡಕೆಯ ಹಾಳೆಯನ್ನು ಕಂಡ ಕೂಡಲೇ ಮಕ್ಕಳ ಮನಸ್ಸಿಗೆ ಈ ಒಂದು ಆಟ ತಕ್ಷಣ ಹೊಳೆದು ಬಿಡುತ್ತಿತ್ತು. ಈಗ ಕಾಲ ಬದಲಾಗಿದೆ. ಮಕ್ಕಳ ಆಟಕ್ಕೆ ವಿವಿಧ ಸಲಕರಣೆಗಳು ಬಂದುಬಿಟ್ಟಿದೆ. ಇಂತಹದ್ದೊಂದು ಆಟ ಇದೆ ಎಂದು ಮಕ್ಕಳಿಗೆ ಹೇಳಿದರೆ ಒಂದೈದು ನಿಮಿಷ ಅದರಲ್ಲಿ ಆಸಕ್ತಿ ತೋರಿಸುತ್ತಾರೆ.
ವಿಶ್ವ ತುಳು ಸಮ್ಮೇಳನದ ಪೂರ್ವಭಾವಿಯಾಗಿ ಅಲ್ಲಲ್ಲಿ ನಡೆಯುತ್ತಿರುವ ತುಳುವೆರ್ನ ಗೊಬ್ಬುಲು ಕಾರ್ಯಕ್ರಮಗಳಲ್ಲಿ `ಪಾಲೆಡೊಯ್ಪುನ ಪಂಥ' ಆಟವನ್ನು ನೆನಪಿಸುವ ಕೆಲಸವನ್ನು ಮಾಡಲಾಗುತ್ತಿರುವುದು ಸಂತೋಷದ ಸಂಗತಿಯಾಗಿದೆ. ಇದು ತುಳುನಾಡಿನ ಕಳೆದುಹೋದ ಒಂದು ಸವಿನೆನಪನ್ನು ಮತ್ತೆ ನೆನಪಿಸುತ್ತಿದೆ.

Tuesday, October 27, 2009

ತುಳುನಾಡಿನ `ದೋಲು' ಸ್ಥಾನವನ್ನು ಆಕ್ರಮಿಸುತ್ತಿರುವ 'ನಾಸಿಕ್ ಬ್ಯಾಂಡ್

ತುಳುನಾಡಿನಲ್ಲಿ ನಡೆಯುವ ಮೆರವಣಿಗೆ ಮುಂತಾದ ಕಾರ್ಯಕ್ರಮಗಳಲ್ಲಿ ನಾಸಿಕ್ ಬ್ಯಾಂಡ್ ಎಂಬ ವಾದನ ತಂಡವೊಂದು ಕಾಣಿಸಿಕೊಳ್ಳುತ್ತಿದೆ. ಎಲ್ಲಿಯ ನಾಸಿಕ್ ಎಲ್ಲಿಯ ಮಂಗಳೂರು ಎಂಬ ಪ್ರಶ್ನೆ ಮನಸ್ಸಿನಲ್ಲಿ ಸಹಜವಾಗಿ ಮೂಡುತ್ತದೆ. ಮಹಾರಾಷ್ಟ್ರದಲ್ಲಿ ನಾಸಿಕ್ ಬ್ಯಾಂಡ್ ಎಂಬುದು ಮರಾಠಿಗರ ಮದುವೆಯ ಸಂದರ್ಭದಲ್ಲಿ ಅನಿವಾರ್ಯವಾದ ವಾದನವಾಗಿದೆ. ಮದುವೆ ಸಂದರ್ಭದಲ್ಲಿ ಮದುಮಕ್ಕಳ ಮೆರವಣಿಗೆ ಮಾಡಲು ನಾಸಿಕ್ ಬ್ಯಾಂಡ್ ಅನಿವಾರ್ಯ. ಎರಡು ಮೂರು ಡೋಲು, ಏಳೆಂಟು ಸಣ್ಣ ಸಣ್ಣ ವಾದನಗಳು ಜತೆಗೆ ಧ್ವನಿ ವರ್ಧಕ ಅಳವಡಿಸಿದ ಕೀಬೋರ್ಡ್ ಗೌಜಿಯಲ್ಲಿ ಇಂತಹಾ ಮದುಮಕ್ಕಳ ಮೆರವಣಿಗೆ ಮುಂಬೈ ನಗರದಲ್ಲಿ ಹಗಲೂ ರಾತ್ರಿ ನಡೆಯುತ್ತದೆ. ಸಂಭ್ರಮದ ವಾತಾವರಣ ಈ ಬ್ಯಾಂಡ್ಸೆಟ್ ಉಂಟು ಮಾಡಿದರೂ, ಶಾಂತತೆಯನ್ನು ಬಯಸುವ ಜನರಿಗೆ ಕಿರಿಕಿರಿ ಎಂದೆನಿಸಬಹುದು.
ಈ ವಾದನದ ಭರಾಟೆಯನ್ನು ಗಮನಿಸಿದಾಗ ತುಳುವರಿಗೆ ತುಳುನಾಡಿನ ದೋಲು (ದುಡಿ) ನೆನಪಿಗೆ ಬಂದೇ ಬರುತ್ತದೆ. ನಾಸಿಕ್ ಬ್ಯಾಂಡ್ನ ಕರ್ಕಶ ಧ್ವನಿಯ ನಡುವೆ ತುಳುನಾಡಿನ ಡೋಲು ವಾದನ ನೆನೆಪಿಸಿಕೊಂಡರೆ ಮನಸ್ಸಿಗೆ ಮುದವನ್ನು ನೀಡುತ್ತದೆ. ಡೋಲು, ತಮಟೆ, ತಾಳ ಮತ್ತು `ಪುರಲ್ ಎಂದು ಹೇಳುವ ಕೊಳಲಿನ ಮಧುರ ಧ್ವನಿ ಮನಸ್ಸಿಗೆ ಆನಂದವನ್ನುಂಟುಮಾಡುತ್ತಿತ್ತು. ಅಳು, ನಗು, ಸಂಭ್ರಮದ ಸಂಕೇತದ ಧ್ವನಿಯನ್ನು ಈ ದೋಲು ಹೊರ ಹೊಮ್ಮಿಸುತ್ತಿತ್ತು. ಮುಂದುವರಿದವರ ದರ್ಪ. ಶೋಷಣೆ ಮುಂತಾದ ಹೆಸರುಗಳಿಂದ ಉಂಟಾದ ಪ್ರತಿಭಟನೆಯ ಕಾವಿನಿಂದ ತುಳುನಾಡಿನ ದೋಲು ಅಥವಾ ಡೋಲು ಮಾಯವಾಗಿ ಅದರ ಸ್ಥಾನದಲ್ಲಿ ನಾಸಿಕ್ ಬ್ಯಾಂಡ್ ಎಂಬ ಕರ್ಕಶ ಧ್ವನಿ ಹೊರಡಿಸುವ ವಾದನ ಆಕ್ರಮಿಸಿಕೊಂಡದ್ದು ದುರಾದೃಷ್ಟವೆಂದೇ ಹೇಳಬಹುದಾಗಿದೆ.
ತುಳುನಾಡಿನ ಕಟ್ಟುಪಾಡುಗಳಲ್ಲಿ ವಿವಿಧ ಜನಾಂಗಗಳು ನಿರ್ವಹಿಸುವ ಕಾರ್ಯಗಳು `ಅಜಲು' ಎಂಬ ಹೆಸರಿನಿಂದ ಕರೆಯಲ್ಪಟ್ಟಿತು. ಬರಬರುತ್ತಾ ಮುಂದುವರಿದವರು ನಿರ್ವಹಿಸುವ ಅಜಲು ಕಾರ್ಯವು ವಿಶೇಷವಾದ ಮಯರ್ಾದೆ, ಮನ್ನಣೆಯನ್ನು ಪಡೆದುಕೊಳ್ಳಲಾರಂಭಿಸಿತು. ಅವುಗಳಿಗೆ ವಿಶೇಷವಾದ ಸಂಭಾವನೆ ದೊರಕಲಾರಂಭಿಸುತ್ತು. ಮತ್ತೆ ಕೆಲವು ಹಿಂದುಳಿದ ಜನಾಂಗಗಳು ನಿರ್ವಹಿಸುವ `ಅಜಲು'ಗಳು ಶೋಷಣೆಯ ರೂಪವನ್ನು ತಳೆಯಲಾರಂಭಿಸಿತು. ಯಾವುದೇ ಸಂಭಾವನೆ ಇಲ್ಲದೆ ದೈವದ ಭಕ್ತಿಯನ್ನು ಹುಟ್ಟಿಸಿ ರಾತ್ರಿ ಹಗಲು ದುಡಿಸುವುದು, ಡೋಲು ಬಾರಿಸುವುದು ನಡೆಯತೊಡಗಿದಾಗ. ಕಂಬಳ, ಜಾತ್ರೆ, ಮರಣ ಸಂದರ್ಭಗಳಲ್ಲಿ ಬೆದರಿಸಿ ಡೋಲು ಬಾರಿಸಲು ಒತ್ತಾಯಿಸುವುದು. ಅದಕ್ಕೆ ಸರಿಯಾದ ಸಂಭಾವನೆ, ಮಯರ್ಾದೆ ದೊರಕದೇ ಹೋದಾಗ ಅಜಲು ಎಂಬುದು ಶೋಷಣೆ ಸಂಕೇತವಾಗಿಬಿಟ್ಟಿತು.
ಅಜಲು ಎಂದರೆ ಹಿಂದುಳಿದವರ ಕೆಲಸ ಎಂದೇ ಪರಿಗಣಿಸಲಾಯಿತು. ತುಳುನಾಡಿನ ಒಂದು ಊರಿನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಪುರೋಹಿತರ ಕೆಲಸ ಮತ್ತು ಅದೇ ಸಂದರ್ಭದಲ್ಲಿ ದೂರದ ಬೆಟ್ಟು ಗದ್ದೆಯಲ್ಲಿ ಡೋಲು ಬಾರಿಸುವ ವೃತ್ತಿ ಎರಡೂ ಕೂಡಾ ಇಂದಿಗೂ `ಅಜಲು' ಎಂದು ಹಳ್ಳಿಯ ಭಾಷೆಯಲ್ಲಿ ಕರೆಯಲ್ಪಡುತ್ತದೆ. ಆದರೆ ಗೌರವದ, ಸಂಭಾವನೆಯ ದೃಷ್ಟಿಯಿಂದ ಅಜಗಜಾಂತರ ವ್ಯತ್ಯಾಸವಾಗಿಬಿಟ್ಟಿದೆ.
ಈಗ ಅಜಲು ಪದ್ಧತಿಯ ನಿಷೇಧವಾಗಿದೆ. ಅದರ ಜತೆ ತುಳುನಾಡಿನ ಅಮೂಲ್ಯವಾದ ಡೋಲು ವಾದನ ಕಲೆಯೂ ನಶಿಸಿ ಹೋಗುತ್ತಿದೆ. ಈ ನಡುವೆ ಡೋಲುವಾದನ ಶೋಷಣೆಯ ಸಂಕೇತವಲ್ಲ. ಅದೊಂದು ಕಲೆ ಎಂದು ಕೆಲವರು ಹೇಳುತ್ತಿರುವುದು, ಅದನ್ನು ಬಾರಿಸಲು ಉತ್ಸುಕತೆ ತೋರಿಸುತ್ತಿರುವುದು ಸ್ವಾಗತಾರ್ಹ.
ಡಾ. ಶಿವರಾಮ ಕಾರಂತರ ಚೋಮನ ದುಡಿ ಕಾದಂಬರಿಯಲ್ಲಿ ದುಡಿ ಅಥವ ದೋಲಿನ ವರ್ಣನೆ ಇದೆ.
ದೋಲು ತುಳುನಾಡಿನಲ್ಲಿ ವಿಶೇಷವಾದ ಗೌರವಕ್ಕೆ ಪಾತ್ರವಾಗಿತ್ತು. ಜಾತ್ರೆ ಸಂದರ್ಭಗಳಲ್ಲಿ ಡೋಲು ಬಾರಿಸುವ ಸಂಪ್ರದಾಯವಿತ್ತು. ಬಪ್ಪನಾಡಿನ ಡೋಲು ಇತಿಹಾಸ ಪ್ರಸಿದ್ಧವಾಗಿದೆ. ಇಲ್ಲಿ ಹರಕೆ ಹೇಳಿ ಡೋಲು ಬಾರಿಸುವ ಸಂಪ್ರದಾಯವಿದೆ. ಡೋಲು ಎಂಬುದು ಸಾಮಾಜಿಕ ಪದ್ಧತಿಯ ಅವಿಭಾಜ್ಯ ಅಂಗವಾಗಿತ್ತು. ನಾಸಿಕ್ ಬ್ಯಾಂಡಿನಂತೆ ಮೆರವಣಿಗೆಯ ಅಂಗ ಮಾತ್ರವಾಗಿರಲಿಲ್ಲ.

Thursday, October 22, 2009

ಪ್ರಾತ್ಯಕ್ಷಿಕೆಯಾಗುವತ್ತ ತುಳುನಾಡಿನ ಬೇಸಾಯ

ತುಳು ಸಂಸ್ಕೃತಿಗೆ ಸಂಬಂಧಪಟ್ಟ ಸಮಾವೇಶಗಳನ್ನು ತುಳುನಾಡಿನಲ್ಲಿ ಮತ್ತು ತುಳುವರು ವಾಸಿಸುವ ಇತರ ಮಹಾನಗರಗಳಲ್ಲಿ ಏರ್ಪಡಿಸುವಾಗ ತುಳು ಮಣ್ಣಿಗೆ ಸಂಬಂಧಪಟ್ಟ ಕೆಲವು ಪ್ರಾತ್ಯಕ್ಷಿಕೆಗಳನ್ನು ಪ್ರದಶರ್ಿಸುವುದು ಒಂದು ವಾಡಿಕೆ. ಇತ್ತೀಚೆಗೆ ಮುಂಬೈ ಮತ್ತು ಬೆಂಗಳೂರಿನಲ್ಲೂ ಇಂತಹಾ ಪ್ರಾತ್ಯಕ್ಷಿಕೆಗಳು ನಡೆದಿದ್ದವು.
ವಿಶ್ವತುಳು ಸಮ್ಮೇಳನದ ಅಂಗವಾಗಿ ತುಳುನಾಡಿನ ಕುಲಕಸುಬು, ಕಲೆ, ಸಂಸ್ಕೃತಿಯ ಬಗ್ಗೆ ಪ್ರಾತ್ಯಕ್ಷಿಕೆ ಪ್ರದರ್ಶನಗಳು `ಅಂದು-ಇಂದು-ಮುಂದು' ಎಂಬ ಹೆಸರಿನಲ್ಲಿ ಈಗ ನಡೆಯುತ್ತಿವೆ. ಈ ಸಂದರ್ಭದಲ್ಲಿ ತುಳುನಾಡಿನಲ್ಲಿ ಒಂದು ಕಾಲದಲ್ಲಿ ವ್ಯಾಪಕವಾಗಿದ್ದ ಈಗ ಅಳಿದು ಹೋಗಿರುವ, ಹೋಗುತ್ತಿರುವ ವಿಷಯಗಳ ಬಗ್ಗೆ ಅಳಿದುಳಿದವರಿಂದ ಪ್ರದರ್ಶನಗಳನ್ನು ಏರ್ಪಡಿಸಲಾಗುತ್ತಿದೆ. ಪನೆ ಎಂದು ಹೇಳುವ ಏತ, ಮುಡಿಕಟ್ಟುವುದು, ಗಾಣ, ಕುಂಬಾರಿಕೆ ಇತ್ಯಾದಿಗಳು ತುಳುನಾಡಿನಲ್ಲಿ ವ್ಯಾಪಕವಾಗಿದ್ದವು. `ಪನೆ' (ಏತ) ತುಳುನಾಡಿನ ನೀರಾವರಿಯ ಪ್ರಮುಖ ಜೀವಾಳವಾಗಿತ್ತು. ಸುಮಾರು ಮೂರು ದಶಕಗಳ ಹಿಂದೆ ಪನೆಯನ್ನು ಹಳ್ಳಿ ಹಳ್ಳಿಗಳಲ್ಲಿ ಕಾಣಬಹುದಾಗಿತ್ತು.
ಆನಂತರ ಬಂದ ಸೀಮೆ ಎಣ್ಣೆ, ಡೀಸಿಲ್, ವಿದ್ಯುತ್ ಪಂಪುಗಳು `ಪನೆ' ಎಂಬ ಅಚ್ಚಹಳ್ಳಿಯ ತಾಂತ್ರಿಕ ಅಂಶವನ್ನೇ ಮಂಗಮಾಯ ಮಾಡಿಬಿಟ್ಟಿತು. ಪನೆಯ ಹಗ್ಗದಲ್ಲಿ ನೇತಾಡಿ ತಗ್ಗಿಗೆ ಹಾರಿದ ಅಂದಿನ ಚಿಗುರುಮೀಸೆಯ ಯುವಕರು ಮತ್ತು ಯುವತಿಯರು ಈಗ ಮಧ್ಯವಯಸ್ಸನ್ನು ದಾಟಿದ್ದಾರೆ. ಮರಾಯಿಯಲ್ಲಿ ನೀರು ಮಗುಚಿದ ಅನುಭವವುಳ್ಳ ವ್ಯಕ್ತಿಗಳು ಈಗ ವೃದ್ಧರಾಗಿದ್ದಾರೆ. ನಸುಕಿನಲ್ಲಿ ಎದ್ದು ಪನೆ ಎಂಬ ಯಂತ್ರದಲ್ಲಿ ದುಡಿದು ಭತ್ತದ ಗದ್ದೆಗಳಿಗೆ, ತರಕಾರಿ, ಗೆಣಸು ಇತ್ಯಾದಿಗಳಿಗೆ ನೀರುಣಿಸಿ ಬಂಗಾರದ ಬೆಳೆ ತೆಗೆದು ಗಟ್ಟಮುಟ್ಟಾಗಿ ದೇಹವನ್ನು ಬೆಳೆಸಿದ ಸವಿ ನೆನಪುಗಳನ್ನು ಇಂತವರು ಸ್ವಾರಸ್ಯಕರವಾಗಿ ಮೆಲುಕು ಹಾಕುತ್ತಾರೆ. ಅಂದಿನ ಕಾಲದಲ್ಲಿದ್ದ ಎತ್ತಿನಗಾಡಿಗಳನ್ನು ನಾವು ಈಗ ಹಳೆಯ ಕಪ್ಪು ಬಿಳುಪು ಹಿಂದಿ, ಕನ್ನಡ ಚಲನಚಿತ್ರಗಳಲ್ಲಿ ಮಾತ್ರ ಕಾಣಬಹುದಾಗಿದೆ.
ಹಳ್ಳಿಯ ಮನೆಯ ಅಟ್ಟಗಳನ್ನು ಏರುತ್ತಿದ್ದ ಮುಡಿಗಳ ಸ್ಥಾನದಲ್ಲಿ ಗೋಣಿ, ಪ್ಲಾಷ್ಟಿಕ್ ಚೀಲಗಳು ಬಂದು ಬಿಟ್ಟಿವೆ. ಅಂಗಳವನ್ನು ಅಲಂಕರಿಸುತ್ತಿದ್ದ `ತುಪ್ಪೆ' (ಕಣಜ) ಗಳು ನಾಪತ್ತೆಯಾಗಿವೆ. ಹಳ್ಳಿಗಳ ಹಳೆಯ ಮನೆಗಳ ಅಂಗಳದಲ್ಲಿ `ತುಪ್ಪೆದಕಳ'ವನ್ನು ಮಾತ್ರ ಈಗ ಕಾಣಬಹುದಾಗಿದೆ. ಭತ್ತ ಬೇಯಿಸುವ ದೊಡ್ಡದಾದ ಒಲೆ, ಹಂಡೆ ಕಾಣೆಯಾಗಿದೆ. ಭತ್ತ ಹರಡಲು ನೆಗಣಿಸಾರಿಸಿ ಅಂದಗೊಳಿಸಲಾದ ಅಂಗಳಗಳು ಕಾಣಿಸುತ್ತಿಲ್ಲ. ಅಕ್ಕಿ, ಎಣ್ಣೆ ಮಿಲ್ಗಳು ಬಂದ ನಂತರ ಭತ್ತ ಕುಟ್ಟಿ ಅಕ್ಕಿ ಮಾಡುವ, ಗಾಣದಮನೆಗಳನ್ನು ಈಗಿನ ತಲೆಮಾರು ಕಂಡೇ ಇಲ್ಲ. ಹಳ್ಳಿ ಹಳ್ಳಿಗಳಲ್ಲಿ ಇರುವ ಗಾಣದ ಕೊಟ್ಯ, ವಾಡರಿಬೆಟ್ಟು ಇತ್ಯಾದಿ ಹೆಸರುಗಳು ಯಾಕೆ ಬಂತು ಎಂದ ತಲೆ ಕೆರೆಯಬೇಕಾದ ಸಂದರ್ಭ ಬಂದಿದೆ. ಭತ್ತವನ್ನು ಅಕ್ಕಿಯಾಗಿಸುವ, ಕೊಬ್ಬರಿ ಎಣ್ಣೆಯಾಗುವ, ಕಬ್ಬು ಬೆಲ್ಲವಾಗುವ, ಮಣ್ಣು ಮಡಿಕೆಯಾಗುವ ಸಲಕರಣೆ, ವಿಧಾನಗಳನ್ನು ನಾವು ನೋಡಬೇಕಾದರೆ ಸಮ್ಮೇಳನಗಳಲ್ಲಿ ಏರ್ಪಡಿಸಲಾಗುವ ಪ್ರಾತ್ಯಕ್ಷಿಕೆಗಳ ಕಡೆ ದೃಷ್ಟಿ ಹಾಯಿಸಬೇಕಾಗುತ್ತದೆ. ಇದೆಲ್ಲಾ ತುಳುನಾಡಿನ ಪಳೆಯುಳಿಕೆಗಳು. ಕಾಲದ ಹೊಡೆತಕ್ಕೆ ನಲುಗಿ ಮರೆಯಾಗಿ ಹೋಗಿರುವ ಇಂತಹುಗಳ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸುವುದರಿಂದ ಸಮ್ಮೇಳನಗಳು ಸಾರ್ಥಕತೆಯನ್ನು ಪಡೆಯುತ್ತವೆ.
ಇದೆಲ್ಲಾ ಆಧುನಿಕತೆಯ ಹೊಡೆತದಿಂದ ಮರೆಯಾಗಿ ಹೋಯಿತು ಎಂದು ಹೇಳಬಹುದು. ಮನುಷ್ಯ ಆಧುನಿಕ ಆವಿಷ್ಕಾರಗಳಿಂದ ಪ್ರಯೋಜನವನ್ನು ಪಡೆಯುತ್ತಾ ಕಷ್ಟಪಡುವುದನ್ನು ಇಷ್ಟಪಡುವುದಿಲ್ಲ ಎಂದು ಸಮರ್ಥಿಸಬಹುದು. ಇಷ್ಟೆಲ್ಲಾ ಆಧುನಿಕ ಸೌಲಭ್ಯಗಳು, ಸಲಕರಣೆಗಳು ಇದ್ದರೂ ಭಾರತದ ಜೀವಾಳ, ಬೆನ್ನೆಲುಬಾದ ಬೇಸಾಯವೇ ಪ್ರಾತ್ಯಕ್ಷಿಕೆಯಾಗುವ ಕಡೆಗೆ ಸಾಗುತ್ತಿರುವುದನ್ನು ಯಾರಿಂದಲೂ ತಡೆಯಲಾಗುತ್ತಿಲ್ಲ. ತುಳು ಸಂಸ್ಕೃತಿ ಬೆಳೆದು ಬಂದದ್ದೇ ಕೃಷಿಯಿಂದ. ಬೃಹತ್ ಕೈಗಾರಿಕೆಗಳು ಆಗಮಿಸಿದ ನಂತರ ತುಳುನಾಡಿನ ಜನರು ಕೃಷಿಯ ಬಗ್ಗೆ ಆಸಕ್ತಿಯನ್ನೇ ಕಳೆದುಕೊಂಡಿದ್ದಾರೆ. ಕೃಷಿ ಮಾಡುತ್ತಿರುವ ಮನೆಯ ಯುವಕರು ಕೃಷಿ ಕೆಲಸಕ್ಕೆ ನಿಲ್ಲುತ್ತಿಲ್ಲ. ಪಟ್ಟಣದ, ಕೈಗಾರಿಕೆಗಳಲ್ಲಿನ ಉದ್ಯೋಗಕ್ಕೆ ಹೋಗುತ್ತಿದ್ದಾರೆ. ತುಳುನಾಡಿನ ಕೃಷಿ ಕಾರ್ಯಗಳನ್ನು ಬಿಜಾಪುರ, ಬಳ್ಳಾರಿ, ಬಾಗಲಕೋಟೆ ಇತ್ಯಾದಿ ಕಡೆಗಳಿಂದ ಬಂದ ವಲಸೆ ಕಾಮರ್ಿಕರು ನಡೆಸುತ್ತಿದ್ದಾರೆ. ಮನೆಯ ಮಗ ನೂರೈವತ್ತು ರೂಪಾಯಿಗೆ ಕೈಗಾರಿಕೆಯ ಕಂಟ್ರಾಕ್ಟ್ ಕೆಲಸಕ್ಕೆ ಹೋಗುತ್ತಿದ್ದರೆ, ವಲಸೆ ಕೂಲಿ ಕಾರ್ಮಿಕರು ಇನ್ನೂರು ರೂಪಾಯಿಗೆ ಕೃಷಿ ಗದ್ದೆಯಲ್ಲಿ ಕೂಲಿ ಮಾಡುವ ಪರಿಸ್ಥಿತಿ ಒದಗಿ ಬಂದಿದೆ.
ಕೃಷಿಕೂಲಿಯ ಮೊತ್ತದ ಹೆಚ್ಚಳ, ಅನುಭವಿ ಕಾಮರ್ಿಕರ ಅಭಾವದಿಂದ ತುಳುನಾಡಿನ ಕೃಷಿ ಗದ್ದೆಗಳು ಪಾಳುಬಿದ್ದಿವೆ. ಇಲ್ಲಿನ ಭೂಮಿಯನ್ನು ಬಂಜರು ಭೂಮಿ ಎಂದು ಸಮಥರ್ಿಸಿ ಕೈಗಾರಿಕೆಗಳಿಗಾಗಿ ಅದನ್ನು ಪಡೆಯುವ ಹೊಂಚು ಹೂಡಿದ ಕೈಗಾರಿಕೋದ್ಯಮಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು ನಿಧಾನವಾಗಿ ಇಂತಹಾ ಭೂಮಿಗಳಿಗೆ ಗಾಳ ಹಾಕಿ ಅಮೂಲ್ಯವಾದ ಭೂಮಿಯನ್ನು ಮಾರಾಟ ಮಾಡುತ್ತಿದ್ದಾರೆ. ತುಳುನಾಡು ಇನ್ನು ಕೆಲವೇ ದಶಕಗಳಲ್ಲಿ ಒಂದು ದೊಡ್ಡ ನಗರವಾಗಿ ಹೋಗುವ, ಕೈಗಾರಿಕೆಗಳು, ಕಾಂಕ್ರೀಟ್ ಕಟ್ಟಡಗಳಿಂದ ತುಂಬಿ ಹೋಗುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ.
ಹಾಗಿರುವಾಗ ಇಲ್ಲಿನ ಜೀವಾಳವಾಗಿದ್ದ ಬೇಸಾಯದ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸುವ ಸಂದರ್ಭ ಸಮ್ಮೇಳನಗಳನ್ನು ಏರ್ಪಡಿಸುವ ತುಳುವರಿಗೆ ಮುಂದೊಂದು ದಿನ ಒದಗಿ ಬರಬಹುದಲ್ಲವೇ?

Sunday, October 18, 2009

ಗೂಡುದೀಪ ಶ್ರದ್ಧೆ ಮತ್ತು ಆಧುನಿಕತೆ


ದೀಪಾವಳಿ ಬಂದ ಕೂಡಲೇ ಗೂಡುದೀಪಗಳು ಎಲ್ಲೆಡೆ ಕಂಡು ಬರುತ್ತವೆ. ಇನ್ನೂ ಹದಿನೈದು ದಿವಸ ಬಾಕಿ ಇರುವಾಗಲೇ ಅಂಗಡಿಯ ಬಾಗಿಲಲ್ಲಿ ತರತರದ ಗೂಡು ದೀಪಗಳು ನೇತಾಡತೊಡಗುತ್ತವೆ. ಜಪಾನ್, ಚೈನಾ ಮಾದರಿಯ ಗೋಪುರಗಳ ಮೇಲೆ ಗೋಪುರಗಳನ್ನು ಇಟ್ಟಂತೆ. ಭೂಗೋಳ ಮುಂತಾದ ರೀತಿಯ ವಿವಿಧ ಮಾದರಿಯ ರೆಡಿಮೇಡ್ ಗೂಡುದೀಪಗಳ ಒಳಗೆ ಸಂಜೆ ಹೊತ್ತಿಗೆ ಬೆಳಕನ್ನು ನೋಡುವುದೇ ಚೆಂದ.
ಪೇಟೆಯ ಬೀದಿಯಲ್ಲಿ ಸುತ್ತಾಡುತ್ತಾ ಹೋದಾಗ ಇಂತಹಾ ಒಂದು ಗೂಡು ದೀಪವನ್ನು ಕೊಂಡೊಯ್ದು ಮನೆಯ ಮುಂದೆ ನೇತಾಡಿಸಿ ಅದರ ಒಳಗೆ ದೀಪ ಹಾಕಿ ಸಂಭ್ರಮಿಸಬೇಕು ಎಂದು ಅನಿಸುತ್ತದೆ. ಈ ಅನಿಸಿಕೆಯನ್ನು ಕಾರ್ಯರೂಪಕ್ಕೆ ತರುವುದು ಏನೂ ಕಷ್ಟವಿಲ್ಲ. ಹತ್ತಿಪ್ಪತ್ತು ರೂಪಾಯಿ ಕೊಟ್ಟರೆ ಒಂದು ಗೂಡು ದೀಪ ನಿಮ್ಮದಾಗುತ್ತದೆ.
ಒಂದೆರಡು ದಶಕಗಳ ಹಿಂದೆ ಇಂತಹಾ ಗೂಡುದೀಪಗಳ ರೆಡಿಮೇಡ್ ಗೂಡು ದೀಪಗಳು ಅಂಗಡಿಗಳ ಮುಂದೆ ನೇತಾಡುತ್ತಿರಲಿಲ್ಲ. ದೀಪಾವಳಿಯ ಸಂದರ್ಭದಲ್ಲಿ ಮನೆ ಮುಂದೆ ಒಂದು ಗೂಡುದೀಪವನ್ನು ನೇತಾಡಿಸಬೇಕು ಎಂದು ಅನಿಸಿದರೆ ಅದಕ್ಕಾಗಿ ಒಂದೆರೆಡು ವಾರಗಳ ತಯಾರಿ ಅತ್ಯಗತ್ಯವಾಗಿತ್ತು. ಮೊದಲಿಗೆ ಬಿದಿರು ಕಡ್ಡಿಗಳ ಹುಡುಕಾಟ. ಕಾಡು ಗುಡ್ಡ ಸುತ್ತಿಯೋ, ಮನೆಯ ಹಟ್ಟಿಗೆ ಉಪಯೋಗಿಸಲಾದ ಬಿದಿರನ್ನು ಕದಲಿಸಿಯೋ ಬಿದಿರಿನ ಕಡ್ಡಿಗಳನ್ನು ತಯಾರಿಸಬೇಕಾಗಿತ್ತು. ನಾಲ್ಕು ಭುಜಗಳ ಒಂದೂವರೆ ಅಡಿ ಉದ್ದದ ಗೂಡುದೀಪವನ್ನು ತಯಾರಿಸಬೇಕಾದರೆ 32 ಒಂದಡಿ ಉದ್ದದ ಮತ್ತು ನಾಲ್ಕು ಒಂದೂವರೆ ಅಡಿ ಉದ್ದದ ಕಡ್ಡಿಗಳನ್ನು ಕಷ್ಟಪಟ್ಟು ತಯಾರಿಸಬೇಕಾಗಿತ್ತು. ಬಿದಿರಿನ ಕಡ್ಡಿಗಳ ಮೂಲೆಯನ್ನು ಹಗ್ಗದ ಸಹಾಯದಿಂದ ಕಟ್ಟಿ ಎಂಟು ಚಚ್ಚೌಕಗಳನ್ನು ತಯಾರಿಸಿ ಅದರಲ್ಲಿ ನಾಲ್ಕು ಚೌಕಗಳ ಮಧ್ಯಭಾಗಕ್ಕೆ ಒಂದೂವರೆ ಅಡಿ ಉದ್ದದ ಕಡ್ಡಿಗಳನ್ನು ಮೇಲೆ ಮತ್ತು ಕೆಳಗೆ ಸಮಾನವಾಗಿ ಮೀರಿಸಿ ಕಟ್ಟಿದ ನಂತರ ಎರಡೆರಡು ಚಚ್ಚೌಕಗಳನ್ನು ಮೇಲೆ ಮತ್ತು ಕೆಳಗೆ ಬಿಗಿದು ಕಟ್ಟಿದರೆ ಗೂಡುದೀಪದ ಅಟ್ಟೆ ರೆಡಿ. ಈ ಕಟ್ಟುವಿಕೆಯಲ್ಲಿ ತುಂಬಾ ಶ್ರದ್ಧೆ ಇಡಬೇಕಾದ ಅವಶ್ಯಕತೆ ಇತ್ತು. ಸ್ವಲ್ಪ ಸಡಿಲವಾದರೂ ಗೂಡುದೀಪ ಮೋಟು ಮೋಟಾಗುತ್ತಿತ್ತು.
ಬೆವರಿಳಿಸಿ ಅಟ್ಟೆ ತಯಾರಿಸಿದ ಮೇಲೆ ಬಣ್ಣದ ಕಾಗದದ ಅಂಗಡಿಗೆ ಓಟ. ಅಲ್ಲಿಂದ ಬಣ್ಣದ ಕಾಗದ ಬೇಗಡೆ ಗೂಡುದೀಪದ ಬಾಲಕ್ಕೆ ಬೇಕಾದ ಕಾಗದಗಳನ್ನು ತಂದು ಮೈದಾ ಹಿಟ್ಟಿನ ಗೋಂದು ತಯಾರಿಸಿ ಅಟ್ಟೆಗೆ ಬಣ್ಣಬಣ್ಣದ ಕಾಗದದ ಬಟ್ಟೆಯನ್ನು ತೊಡಿಸಲು ಕುಳಿತುಕೊಳ್ಳಬೇಕು. ಬಣ್ಣದ ಹೊಂದಾಣಿಕೆ, ಅಂಚಿಗೆ ಬೆಗಡೆ, ಮಾರುದ್ದದ ಬಾಲಗಳನ್ನು ಎಚ್ಚರಿಕೆಯಿಂದ ಅಂಟಿಸಬೇಕು. ಸ್ವಲ್ಪ ಮೈಮರೆತರೆ ಬೆರಳು, ಮೊಣಕೈ ತಾಗಿ ಅಂಟಿಸಿದ ಬಣ್ಣದ ಕಾಗದ ತೂತಾಗುವ ಸಾಧ್ಯತೆ ಇದೆ. ಅಂತಿಮವಾಗಿ ಮೂಲೆ ಮೂಲೆಗಳಿಗೆ ಬಣ್ಣ ಬಣ್ಣದ ವೃತ್ತಾಕಾರದ ಅಥವಾ ಚೌಕಾಕಾರದ ಗೊಂಡೆಗಳನ್ನು ಮಾಡಿ ಅಂಟಿಸಿ ಒಂದೆರಡು ಗಂಟೆ ಬಿಸಿಲಿನಲ್ಲಿ ಒಣಗಲಿಕ್ಕೆ ಇಟ್ಟರೆ ಗೂಡು ದೀಪ ರೆಡಿ.
ಇಷ್ಟು ಕಷ್ಟಪಟ್ಟು ತಯಾರಿಸಿದ ಗೂಡುದೀಪವನ್ನು ಮನೆಯ ಮುಂದಿನ ಪಕ್ಕಾಸಿಗೆ ನೇತು ಹಾಕಿದರೆ ಸರಿಯಾಗುತ್ತದೆಯೇ? ಪಕ್ಕದ ಮನೆಯವ ಏರಿಸಿದ ಎತ್ತರವನ್ನು ಮೀರಬೇಕು. ಅದನ್ನು ಎತ್ತರೆತ್ತರಕ್ಕೆ ಏರಿಸಲಿಕ್ಕಾಗಿ ಮನೆಯ ಮುಂದಿನ ಎತ್ತರ ಮರಕ್ಕೆ ಉದ್ದನೆಯ ಬಿದಿರಿನ ಕೋಲು ಕಟ್ಟಿ ಅದರ ತುದಿಯಲ್ಲಿ ತ್ರಿಕೋಣಾಕಾರದ ಬಿದಿರಿನ ಕೋಲು ಕಟ್ಟಿ ಅಡ್ಡಲಾಗಿ ಕಟ್ಟಿದ ಕೊಡೆಯ ಕಡ್ಡಿಯ ನಡುವೆ ರೀಲು ಸಿಕ್ಕಿಸಿ ನೆಲದುದ್ದಕ್ಕೂ ಹಗ್ಗ ಕಟ್ಟಬೇಕು. ಇಷ್ಟೆಲ್ಲಾ ಆದರೆ ಗೂಡು ದೀಪದ ಪೂರ್ವ ತಯಾರಿ ಮುಗಿಯುತ್ತದೆ.
ದೀಪಾವಳಿಯ ದಿನ ವಿದ್ಯುತ್ ಇಲ್ಲದೆ ಮನೆಯಲ್ಲಾದರೆ ಗೂಡು ದೀಪದ ಒಳಗೆ ಕ್ಯಾಂಡಲ್ ಇರಿಸಿ ಏರಿಸಬೇಕು. ವಿದ್ಯುತ್ತು ಇರುವ ಮನೆಯಾದರೆ ಒಳಗೆ ಬಲ್ಬು ಸಿಕ್ಕಿಸಿ ವಯರ್ ಸಮೇತ ಏರಿಸಬೇಕು. ಹೀಗೆ ಏರಿಸಿದ ಗೂಡುದೀಪವನ್ನು ದೂರದ ಎತ್ತರದ ಪ್ರದೇಶದಲ್ಲಿ ನಿಂತು ನೋಡಿ ಹಿರಿಹಿರಿ ಹಿಗ್ಗಿದರೇನೇ ದೀಪಾವಳಿ ಸಾರ್ಥಕವಾದಂತೆ.
ಕಲಾತ್ಮಕವಾದ ಗೂಡುದೀಪಗಳೂ ರಚಿತವಾಗುತ್ತಿದ್ದವು. ನಕ್ಷತ್ರ, ಬಿಸಿಗಾಳಿಯ ಒತ್ತಡಕ್ಕೆ ತಿರುಗುವ ಗೂಡುದೀಪಗಳನ್ನು ರಚಿಸುವ ಮರಿ ಇಂಜಿನಿಯರುಗಳು ಇದ್ದರು.
ವೇಗವಾಗಿ ಸಾಗುವ ಯಾಂತ್ರಿಕತೆ, ಆಧುನಿಕತೆಯಲ್ಲಿ ಈಗ ಪುರಸೊತ್ತು ಯಾರಿಗಿದೆ? ಮನೆಯಲ್ಲಿ, ಗ್ರೈಂಡರ್, ಮಿಕ್ಸಿ, ನೀರೆತ್ತಲು ಪಂಪು ಬಂದಿದ್ದರೂ, ಟಿ.ವಿ. ಕಂಪ್ಯೂಟರ್ಗಳನ್ನು ಉಪಯೋಗಿಸಲು ದಿನದ 24 ಗಂಟೆಗಳೂ ಸಾಲದಾಗಿದೆ. ಹಾಗಿರುವಾಗ ಕಷ್ಟಪಟ್ಟು ಗೂಡು ದೀಪ ನಿಮರ್ಮಿಸುವ ಶ್ರದ್ಧೆ ಯಾರಿಗಿದೆ? ದೀಪಾವಳಿ ದಿನ ಪೇಟೆಗೊಂದು ಸುತ್ತು ಹೊಡೆದು ಅಲ್ಲಿ ಸಿಗುವ ರೆಡಿಮೇಡ್ ಗೂಡುದೀಪಗಳನ್ನು ತಂದು ಮನೆಯ ಮುಂದೆ ನೇತಾಡಿಸಿದರೆ ಮುಗಿಯಿತು.
ಇದರ ನಡುವೆಯೂ ಮಂಗಳೂರಿನಲ್ಲಿ ಕೆಲವು ಸಂಸ್ಥೆಗಳು ಗೂಡು ದೀಪ ಸ್ಪರ್ಧೆಗಳನ್ನು ಏರ್ಪಡಿಸಿ ಕಷ್ಟಪಟ್ಟು ಗೂಡು ದೀಪ ನಿಮರ್ಮಿಸುವಲ್ಲಿನ ಶ್ರದ್ಧೆಯನ್ನು ಜೀವಂತವಾಗಿಸುತ್ತಿರುವುದು ಪ್ರಶಂಸಾರ್ಹವಾಗಿದೆ.

ದೇವರಿಲ್ಲ ರಕ್ಕಸರೇ ಎಲ್ಲಾ!

ದಶಕಗಳ ಹಿಂದೆ ತುಳುನಾಡಿನಲ್ಲಿ `ಮಾರ್ನೆಮಿ' ಸಮಯದಲ್ಲಿ ವೇಷಗಳನ್ನು ಧರಿಸಿಕೊಂಡು ಮನೆ ಮನೆಗೆ ತಿರುಗುವುದು ಸಾಮಾನ್ಯವಾಗಿತ್ತು. ಈಗಲೂ ಇಲ್ಲ ಎಂದಿಲ್ಲ. ಆದರೆ ಈ ವೇಷಧಾರಣೆಯಲ್ಲಾದ ಬದಲಾವಣೆಯಲ್ಲೇ ವಿಷಯ ಇರುವುದು. ಹುಲಿ, ಕರಡಿ, ಸಿಂಹ ಶಾರ್ದೂಲ, ಬೇಟೆಗಾರ ಇತ್ಯಾದಿ ವೇಷಗಳನ್ನು ಹೊರತುಪಡಿಸಿ ಹಿಂದೆ ರಾಮ,ಲಕ್ಷ್ಮಣ, ಸೀತೆ, ರಾಧಾಕೃಷ್ಣ, ಹನುಮಂತ, ನಾರದ, ಬ್ರಹ್ಮನ, ಈಶ್ವರ, ಕಾಳಿ ಇತ್ಯಾದಿ ವೇಷಗಳು ಮನೆ ಮನೆಗೆ ತಿರುಗಿ ದಸರಾದ ಸಂಭ್ರಮವನ್ನು ಇಮ್ಮಡಿಗೊಳಿಸುತ್ತಿದ್ದವು. ಆದರೆ ಸಂಜೆಯಾಗುತ್ತಿದ್ದಂತೆ ವೇಷಧಾರಿಗಳು ತಾವು ಧರಿಸಿದ ವೇಷಗಳ ಹಿರಿಮೆಯನ್ನು ಮರೆತು ಕಂಠಪೂರ್ತಿ ಶರಾಬು ಕುಡಿದು ದೇವರಿಗೆ ಅಪಚಾರವೆಸಗಿ ನಗೆಪಾಟಲಿಗೀಡಾಗುವುದು ನಡೆದಾಗ ಹಿಂದೂ ಸಂಘಟನೆಗಳು ಇಂತಹಾ ವೇಷ ಧರಿಸಬಾರದು ಎಂಬ ತಾಕೀತು ಮಾಡಿ ಕಾಯರ್ಯಾಚರಣೆಗಿಳಿದವು. ದೇವರ ವೇಷ ಹಾಕಿದ ವ್ಯಕ್ತಿಗಳನ್ನು ಅನಾಮತ್ತಾಗಿ ಎತ್ತಿಕೊಂಡುಹೋಗಿ ನೀರಿನಲ್ಲಿ ಸ್ನಾನಮಾಡಿಸಿ ಕಳುಹಿಸುವುದು. ದಸರಾ ಆರಂಭವಾಗುತ್ತಿದ್ದಂತೆ ದೇವರ ವೇಷವನ್ನು ಹಾಕಿಕೊಂಡು ಬೀದಿ ಸುತ್ತಬಾರದು ಎಂಬ ಎಚ್ಚರಿಕೆಯ ಪತ್ರಿಕಾ ಪ್ರಕಟಣೆ ನೀಡುವುದು ಆರಂಭವಾಯಿತು.
ಇದರ ಪರಿಣಾಮವಾಗಿ ದೇವರ ಮೊರೆ ಹೋಗಿದ್ದ ವೇಷಧಾರಿಗಳೆಲ್ಲ ರಕ್ಕಸರ ಮೊರೆ ಹೋಗುವುದಕ್ಕೆ ಆರಂಭಿಸಿದರು. ರಾವಣ, ಕುಂಭಕರ್ಣ, ಕಂಸ, ಹಿಡಿಂಬ, ತಾಟಕಿ, ಪೂತನಿ, ಮುಂತಾದ ರಾಕ್ಷಸ ಗಣಗಳು ಕೈಯಲ್ಲಿ ಬಿಚ್ಚುಗತ್ತಿ ಝಳಪಿಸುತ್ತಾ ಬೀದಿಗಿಳಿದು ಮನೆ ಮನೆಗೆ, ಅಂಗಡಿ ಮುಂಗಟ್ಟುಗಳಿಗೆ ಆರ್ಭಟ ಮಾಡುತ್ತಾ ಧಾಳಿ ಇಡತೊಡಗಿದವು. ಅತೀ ಸುಲಭವಾಗಿ ಹಾಕಬಹುದಾದ ಪ್ರೇತ ವೇಷಧಾರಿಗಳು ಎಲ್ಲೆಡೆ ಕಾಣಿಸಿಕೊಳ್ಳತೊಡಗಿದರು. ಇಂತಹಾ ವೇಷಗಳು ಶರಾಬು ಕುಡಿದು ಎಲ್ಲೆಡೆ ಬಿದ್ದರೂ ಯಾರ ಮನಸ್ಸಿಗೂ ನೋವುಂಟಾಗುವುದಿಲ್ಲ. ಈಗ ದಸರಾ ಸಂದರ್ಭದಲ್ಲಿ ರಕ್ಕಸರೇ ವಿಜೃಂಭಿಸಿ ದುಷ್ಟ ಸಂರಕ್ಷಣೆಗಾಗಿರುವ ದೇವರುಗಳು ಮಾಯವಾಗಿರುವುದು ಒಂದು ವಿಪರ್ಯಾಸ. ಕಲಿಯುಗದ ಮಹಿಮೆ!
ಭಿಕ್ಷುಕರು, ವಲಸೆ ಕಾರ್ಮಿಕರ ಮಕ್ಕಳು ಈ ಸಂದರ್ಭದಲ್ಲಿ ಭಿಕ್ಷೆಗಾಗಿ ವೇಷ ಧರಿಸಿ ಎಲ್ಲೆಡೆ ಓಡಾಡುತ್ತಿರುತ್ತಾರೆ. ಮುಖಕ್ಕೆ ಬಣ್ಣ ಬಳಿದರೆ ಸಾಕು ಅದೇ ಮಾರ್ನೆಮಿ ವೇಷ ಎಂದು ಭಾವಿಸುವಂತಾಗಿದೆ. ವೇಷಗಳಿಗೆ ಹಿಂದಿನ ಕಾಲದಲ್ಲಿದ್ದ ಮರ್ಯಾದೆ, ಗೌರವ ಕಡಿಮೆಯಾಗಿದೆ. ವೇಷ ಧರಿಸುವುದು ಭಿಕ್ಷೆ ಬೇಡುವುದಕ್ಕೆ. ಸಂಜೆ ಹೊತ್ತಿಗೆ ಕುಡಿದು ತೂರಾಡುವುದಕ್ಕೇ ಎಂಬ ಮಾತುಗಳು ಎಲ್ಲೆಡೆ ಕೇಳಿಬರುತ್ತಿದೆ.
ಹಿಂದೆ ವೇಷಗಳನ್ನು ಹರಕೆಗಾಗಿ ಹಾಕಲಾಗುತ್ತಿತ್ತು. ಮೂರು ದಿನಗಳ ಕಾಲ ವೇಷ ಧರಿಸಿ ದಸರಾದ ಕೊನೆಯ ದಿನ ದೇವಸ್ಥಾನಕ್ಕೆ ತೆರಳಿ ಓಕುಳಿಯಲ್ಲಿ ಭಾಗವಹಿಸಿ ವೇಷ ತೆಗೆಯುವುದು ಕ್ರಮವಾಗಿತ್ತು. ಈಗಲೂ ಕೆಲವರು ಅದೇ ನಿಯತ್ತಿನಿಂದ ನಡೆದುಕೊಳ್ಳುತ್ತಿದ್ದಾರೆ.
ವೇಷವನ್ನು ಅದೆಷ್ಟು ಗೌರವಯುತವಾಗಿ ಹಾಕಿಕೊಳ್ಳುತ್ತಿದ್ದರು ಎಂಬುದಕ್ಕೆ ನಮ್ಮೂರಿನಲ್ಲಿದ್ದ ಕೂಕ್ರ ಎಂಬ ಹೆಸರಿನವರೊಬ್ಬರು ಉದಾಹರಣೆಯಾಗಿದ್ದಾರೆ. ಆವಾಗಲೇ ಮಧ್ಯವಯಸ್ಸನ್ನು ದಾಟಿ ವೃದ್ದಾಪ್ಯದ ಕಡೆಗೆ ಅಡಿ ಇಡುತ್ತಿದ್ದ ಈ ವ್ಯಕ್ತಿ ನಾರದ, ಮುದುಕ, ನರ್ಸಣ್ಣ ಇತ್ಯಾದಿಯಾಗಿ ಒಂಟಿ ವೇಷಗಳನ್ನು ಹಾಕುತ್ತಿದ್ದರು. ಅದರಲ್ಲೊಂದು ಅಚ್ಚುಕಟ್ಟು, ನಿಷ್ಠೆ ಇತ್ತು. ಅವರು ಒಂದು ಮನೆಗೆ ಭೇಟಿ ನೀಡಿದರೆ ಅಲ್ಲಿದ್ದ ತೊಟ್ಟಿಲ ಮಗುವಿನಿಂದ ಹಿಡಿದು ಮನೆಯ ಹಣ್ಣು ಹಣ್ಣು ಮುದುಕರವರೆಗೂ ಮನರಂಜನೆ ನೀಡುತ್ತಿದ್ದರು. ಎಲ್ಲರಲ್ಲಿಯೂ ಅವರವರ ಪ್ರಾಯಕ್ಕೆ, ಆಸಕ್ತಿಗೆ ಭೂಷಣವಾದ ಪ್ರಾಜ್ಞನಂತೆ ಮಾತುಗಳನ್ನು ಹಾಡುಗಳನ್ನು ಆಡಿ, ಹೇಳಿ ಸಂತೋಷ ಗೊಳಿಸುತ್ತಿದ್ದರು. ಕೊನೆಗೂ ದುಡ್ಡು ಕೊಡಿ ಎಂಬ ಮಾತು ಅವರ ಬಾಯಿಯಿಂದ ಬರುತ್ತಿರಲಿಲ್ಲ. ಮುದುಕನಿಗೆ ಎಲೆ ಅಡಿಕೆ ತಿನ್ನುವ ಮನಸ್ಸಾಗಿದೆ. ಪೇಟೆಯ ಅಂಗಡಿಯ ಎಲೆಯಡಿಕೆ ಚೆನ್ನಾಗಿದೆ ಎಂಬಿತ್ಯಾದಿಯಾಗಿ ಸುತ್ತು ಬಳಸಿ ಮಾತನಾಡುತ್ತಾ ಕೊನೆಗೆ ಕೊಟ್ಟಷ್ಟು ಹಣ ತೆಗೆದುಕೊಂಡು ಹೊರಡುತ್ತಿದ್ದರು. ಇವರ ವೇಷ ಮನೆಗೆ ಬರದೇ ಇದ್ದರೆ ಆ ವರ್ಷದ ದಸರಾ ಸಾರ್ಥಕವಲ್ಲ ಎಂಬ ಭಾವನೆ ಮನೆಯವರಿಗೆ ಉಂಟು ಮಾಡುತ್ತಿದ್ದರು.
ಇಂತಹಾ ಕೂಕ್ರ ಒಂದು ಬಾರಿ ಲಾಟರಿಯಲ್ಲಿ ಹತ್ತು ಲಕ್ಷ ರೂಪಾಯಿಗಳ ಬಂಪರ್ ಬಹುಮಾನ ಬಂದು ದಿಢೀರ್ ಶ್ರೀಮಂತರಾಗಿಬಿಟ್ಟಿದ್ದರು. ಈ ಬಾರಿ ಕೂಕ್ರಣ್ಣನ ವೇಷ ಇಲ್ಲ. ಅವರಿಗೆ ವೇಷ ಹಾಕಿ ಏನಾಗಬೇಕಾಗಿದೆ ಬೇಕಾದಷ್ಟು ದುಡ್ಡು ಉಂಟು ಎಂದು ಜನ ಆಡಿಕೊಳ್ಳತೊಡಗಿದರು. ಆದರೆ ದಸರಾ ಮುಗಿಯಲು ಮೂರು ದಿನ ಬಾಕಿ ಇದೆ ಅನ್ನುತ್ತಿರುವಾಗಲೇ ಕೂಕ್ರ ವೇಷ ಧರಿಸಿ ಬೀದಿಗಿಳಿದೇ ಬಿಟ್ಟಿದ್ದರು. ಅದೇನು ಲಕ ಲಕ ಹೊಳೆಯುವ ಉಡುಪು. ಬೆಳ್ಳಗೆ ಬೆಳ್ಳಗೆ ಮಿರಿ ಮಿರಿ ಮಿಂಚುವ ಬಿಳಿ ತಲೆ ಕೂದಲು. ಸಾಂತಾಕ್ಲಾಸ್ ನ್ನು ಹೋಲುವ ಇಳಿ ಬಿದ್ದ ಗಡ್ಡ. ಕೈಯಲ್ಲಿ ಶ್ರೀಮಂತಿಕೆಯ ಸಂಕೇತವಾದ ಚಿನ್ನದ ಬಣ್ಣದ ಬೆತ್ತ. ಕಾಲಿಗೆ ನೀಟಾದ ಹೊಚ್ಚ ಹೊಸ ನಾಟಕದ ರಾಜ ಮಹಾರಾಜರು ಧರಿಸುವ ಪಾದರಕ್ಷೆ. ಲಕ್ಷಾಧೀಶ ಮುದುಕ ಮನೆ ಮನೆಗಳ ಅಂಗಡಿ ಮುಂಗಟ್ಟುಗಳ ಭೇಟಿ ಆರಂಭಿಸಿಯೇ ಬಿಟ್ಟಿದ್ದ. ಮನೆ ಮನೆಗಳಲ್ಲಿ ಈ ಹಿಂದಿನಂತೆಯೇ ವರ್ತನೆ. ನನಗೆ ದೇವರು ಯಾವುದಕ್ಕೂ ಕಡಿಮೆ ಮಾಡಿಲ್ಲ. ಎಲ್ಲವನ್ನೂ ಕೊಟ್ಟಿದ್ದಾನೆ, ನಾರಾಯಣ... ನಾರಾಯಣಾ... ಎನ್ನುತ್ತಾ ಮನೆ ಬಿಡುತ್ತಿದ್ದರು. ಇದೇ ರೀತಿ ಮೂರು ವರ್ಷಗಳವರೆಗೆ ಇವರು ಮಾರ್ನೆಮಿ ವೇಷ ಧರಿಸಿದ್ದರು.
ಹರಕೆ, ಸಂಪ್ರದಾಯದ ಉಳಿವು ಎಂದರೆ ಇದೇ ಅಲ್ಲವೇ?

ಕೆಪಿಎಲ್ ಅಂಗಣದಲ್ಲಿ ಚೀರ್`ಪಿಲೀ'ಸ್ ಉಡುಪಿ ವಿಟ್ಲಪಿಂಡಿಯಲ್ಲಿ `ಪೊಣ್ಣುಪಿಲಿ'

ಹುಲಿವೇಷ ಧಾರಣೆ ಜಗತ್ತಿನಾದ್ಯಂತ ಕಂಡು ಬರುತ್ತದೆ. ಪ್ರಾದೇಶಿಕವಾಗಿ ಹುಲಿ ವೇಷ ಧರಿಸುವುದರಲ್ಲಿ ಬದಲಾವಣೆಗಳು ಇರುತ್ತವೆ. ಹೆಚ್ಚಿನ ಕಡೆಗಳಲ್ಲಿ ಹುಲಿಗಳ ಬಣ್ಣದ ಬಟ್ಟೆಯನ್ನು ಧರಿಸಿ ಕುಣಿಯುವುದನ್ನು ನಾವು ಕಾಣುತ್ತೇವೆ. ಆದರೆ ತುಳುನಾಡಿನ ಪಿಲಿ ಅಂದರೆ ಹುಲಿ ಜಗತ್ತಿನ ಇತರ ಕಡೆಗಳಿಗಿಂತ ಭಿನ್ನವಾಗಿದೆ.
ತುಳುನಾಡಿನ ಹುಲಿ ಸಾಹಸದ ಸಂಕೇತವೂ ಹೌದು. ಇಲ್ಲಿ ಹುಲಿಯ ಪಟ್ಟೆಯಂತೆ ಬಟ್ಟೆಯನ್ನು ಧರಿಸುವುದಿಲ್ಲ. ಮೈತುಂಬಾ ಪಟ್ಟೆಗಳನ್ನು ಬಣ್ಣದಿಂದ ಬಳಿದುಕೊಳ್ಳಲಾಗುತ್ತದೆ. ಬಣ್ಣದ ವಾಸನೆ ಮತ್ತು ಕುಣಿತ ಎಲ್ಲರಿಗೂ ಒಗ್ಗವುದಿಲ್ಲ. ದಸರಾದ ದಿನಗಳಲ್ಲಿ ಮೂರು, ಆರು, ಒಂಭತ್ತು ದಿನಗಳ ಕಾಲ ಬಟ್ಟೆ ಧರಿಸಿದೆ ಕೇವಲ ಬಣ್ಣದೊಂದಿಗೆ ಕಳೆಯಬೇಕಾಗುತ್ತದೆ. ಮಳೆ, ಚಳಿ, ಬಿಸಿಲು ಯಾವುದಕ್ಕೂ ಕಂಗೆಡದೆ ಕುಣಿಯಬೇಕಾಗುತ್ತದೆ. ಜತೆಗೆ ಕುರಿ, ಅಕ್ಕಿ ಮುಡಿ ಎತ್ತುವುದು. ವಿವಿಧ ಕೋನಗಳಲ್ಲಿ ಹಣ ಎತ್ತುವಂತಹಾ ದೈಹಿಕ ಕಸರತ್ತುಗಳನ್ನು ಮಾಡಬೇಕಾಗುತ್ತದೆ.
ದಸರಾ ದಿನಗಳಲ್ಲಿ ಹುಲಿ ವೇಷವನ್ನು ಹಾಕುವವರನ್ನು ಸಾಹಸಿಗಳೆಂದೇ ಪರಿಗಣಿಸಲಾಗುತ್ತದೆ. ಈ ಹುಲಿಗಳ ನಾಯಕನಿಗೆ ಅಥವಾ ಹುಲಿ ವೇಷ ಹಾಕಿಸುವವನ ಹಿಂದೆ ಬಣ್ಣ ಬಣ್ಣದ ಸಾಹಸ ಕತೆಗಳು ಗರಿ ಬಿಚ್ಚತೊಡಗುತ್ತವೆ. ಗಢಚಿಕ್ಕುವ ಎರಡು ಮೂರು ತಾಸೆಯ, ಆಧುನಿಕ ಸಿನಿಮಾ ಹಾಡುಗಳ ಬ್ಯಾಂಡ್ ಸೆಟ್ನೊಂದಿಗೆ ಏಳು, ಹದಿನಾಲ್ಕು, ಇಪ್ಪತ್ತೊಂದು ಹುಲಿಗಳ ತಂಡ ಹೊರಟಿತು ಎಂದರೆ ಊರಿಡೀ ಗದ್ದಲವೇ ಗದ್ದಲ. ಕೆಲವು ಊರಿನ ಸಾಹಸಿಗರು ನೂರು ಹುಲಿಗಳ ತಂಡವನ್ನೂ ದಸರಾ ಸಮಯದಲ್ಲಿ ರಸ್ತೆಗಿಳಿಸುವುದೂ ಇದೆ. ಹುಲಿಗಳ ಉಪಟಳಕ್ಕೆ ಹೆದರಿ ಕೆಲವರು ಜೇಬು ಗಟ್ಟಿಯಾಗಿ ಹಿಡಿದುಕೊಂಡು ಊರು ಬಿಡುವುದೂ ಇದೆ.
ದಸರಾ ಹಬ್ಬವನ್ನು ತುಳುನಾಡಿನಲ್ಲಿ `ಮಾರ್ನೆಮಿ' ಎಂದು ಆಚರಿಸಲಾಗುತ್ತದೆ. ವಿಧ ವಿಧವಾದ ವೇಷಗಳ ಮುಂಚೂಣಿಯಲ್ಲಿ ದುರ್ಗಾದೇವಿಯ ವಾಹನವಾದ ಹುಲಿವೇಷಧಾರಿಗಳು ತುಳುನಾಡಿನಾದ್ಯಂತ ಕಂಡುಬರುತ್ತಾರೆ. `ಮಾರ್ನೆಮಿದ ಪಿಲಿ' ಎಂದು ಇವುಗಳನ್ನು ಕರೆಯಲಾಗುತ್ತದೆ. ತುಳುನಾಡಿನ ವ್ಯಾಪ್ತಿಯನ್ನು ಬಿಟ್ಟು ಈ ಪಿಲಿಗಳು ಹೊರ ಪ್ರದೇಶಗಳಲ್ಲಿ ಅಷ್ಟಾಗಿ ಪ್ರಾಮುಖ್ಯತೆಯನ್ನು ಪಡೆದಿಲ್ಲ. ಈ ಹುಲಿ ಕುಣಿತಕ್ಕೂ ಒಂದು ಲಯ, ಪಟ್ಟು ಇದೆ.
ತುಳುನಾಡಿನಲ್ಲಿ ದಸರಾವನ್ನು ಹೊರತುಪಡಿಸಿ ಚೌತಿಯ ಗಣೇಶೋತ್ಸವ, ಶ್ರೀಕೃಷ್ಣ ಜನ್ಮಾಷ್ಠಮಿಯ ಮೊಸರು ಕುಡಿಕೆ ಮತ್ತು ಇತರ ಕೆಲವು ಮೆರವಣಿಗೆಳಿಗೆ ಕಳೆಕಟ್ಟ ಬೇಕಾದರೆ ಹುಲಿ ಕುಣಿತ ಬೇಕೇ ಬೇಕು.
ತುಳುನಾಡಿನ ಪಿಲಿ ಈಗ ನಾಡಿನ ಗಡಿ ದಾಟಿ ಹೋಗಿದೆ. ಜಗತ್ತಿನ ಶ್ರೀಮಂತ ಆಟಗಳಲ್ಲಿ ಒಂದಾದ ಕ್ರಿಕೆಟ್ ಅಂಗಣಕ್ಕೆ ತುಳುನಾಡಿನ ಪಿಲಿ ಕಾಲಿಟ್ಟಿದೆ. ವಿಶ್ವಕಪ್, ಟ್ಟೆಂಟಿ ಟ್ಟೆಂಟಿ ವಿಶ್ವಕಪ್ ಪಂದ್ಯಾಟಗಳಲ್ಲಿ ಚೀರ್ ಗರ್ಲ್ಗಳು ಕಡಿಮೆ ಬಟ್ಟೆ ಧರಿಸಿಕೊಂಡು ಕೆಲವರು ಹೇಳುವಂತೆ ಅಶ್ಲೀಲವಾಗಿ ಕುಣಿಯುವುದನ್ನು ನಾವು ಕಂಡಿದ್ದೇವೆ. ಕನರ್ನಾಟಕದೊಳಗಿನ ಕೆಪಿಎಲ್ ಟ್ವೆಂಟಿ ಟ್ವೆಂಟಿ ಪಂದ್ಯಾಟದಲ್ಲಿ ಬಟ್ಟೆ ಕಡಿಮೆ ಇದ್ದರೂ ಅಶ್ಲೀಲವೆನಿಸದ `ಚೀಯರಪಿಲೀಸ್' ಕುಣಿದಿವೆ. ತುಳುನಾಡಿನ ಪಿಲಿಯನ್ನು ಬೆಂಗಳೂರಿನ ಕ್ರೀಡಾಂಗಣಕ್ಕೆ ಕರೆದೊಯ್ದ ಯುನೈಟೆಡ್ ಮಂಗಳೂರು ತಂಡದ ಪ್ರಾಯೋಜಕರು ನಿಜಕ್ಕೂ ಅಭಿನಂದನಾರ್ಹರು.
ಅಂದಹಾಗೆ ಹುಲಿ ಕುಣಿತ ಇತಿಹಾಸದಲ್ಲಿ ಇನ್ನೂ ಒಂದು ದಾಖಲೆಯಾಗಿದೆ. ಉಡುಪಿಯ ಸುಪ್ರಸಿದ್ಧ ವಿಟ್ಲ ಪಿಂಡಿ ಕಾರ್ಯಕ್ರಮದಲ್ಲಿ ಮಹಿಳಾ ಪಿಲಿಗಳು ಈ ಬಾರಿ ಕುಣಿದಿವೆ.

ಅಂಗೈಯಲ್ಲಿ ನೆಲ್ಲಿಕಾಯಿ ಇರುವಾಗ...

`ಮಡು ಪುಗೆಲ್ಡ್ ದೀವೊಂದು ಮಡು ಬೋಡುಂದು ಊರಿಡೀ ನಾಡ್ದೆಗೆ' (ಹೆಗಲಲ್ಲಿ ಕೊಡಲಿ ಇಟ್ಟುಕೊಂಡು ಕೊಡಲಿಗಾಗಿ ಊರೆಲ್ಲಾ ಹುಡುಕಾಡಿದನಂತೆ) ಎಂಬ ಆಡು ಮಾತು ತುಳುನಾಡಿನ ಹಳ್ಳಿಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಅಂಗೈಯಲ್ಲಿ ನೆಲ್ಲಿಕಾಯಿ ಇರುವಾಗ ಉಪ್ಪಿನಕಾಯಿಗಾಗಿ ತವಕಿಸಿದಂತೆ ಎಂಬ ಕನ್ನಡದ ಮಾತೂ ಇದಕ್ಕೆ ತಾಳೆಯಾಗುತ್ತದೆ.
ತುಳುನಾಡಿನ ಇತಿಹಾಸದ ಬಗ್ಗೆ ಸಮಗ್ರವಾಗಿ ವಾದ, ಪುರಾವೆಯನ್ನು ಮಂಡಿಸಲು ಸಾಧ್ಯವಿಲ್ಲ ಎಂಬ ಮಾತು ಇತ್ತೀಚೆಗೆ ಕೇಳಿಬಂದಿದೆ. ಇದು ಇಲ್ಲಿನ ಇತಿಹಾಸದ ಲೋಪವಲ್ಲ. ಅದನ್ನು ಸಮಗ್ರವಾಗಿ ಅಧ್ಯಯನ ಮಾಡುವಲ್ಲಿ ನಾವು ಸೋತು ಹೋಗಿದ್ದೇವೆ. ಆದರೆ ಈ ಬಾರಿ ಈ ಪ್ರಯತ್ನದಲ್ಲಿ ಹಳೆ ಸೋಲುಗಳನ್ನು ಮೆಟ್ಟಿ ನಿಂತು ಗೆಲುವಿನ ನಗೆ ಬೀರಿ ತುಳುವಿಗೊಂದು ಸ್ಥಾನಮಾನ ಕೊಡುವ ಪ್ರಯತ್ನ ಸಾರ್ಥಕವಾಗುತ್ತದೆ ಎಂಬ ಭರವಸೆ ಮೂಡುತ್ತಿದೆ. ತುಳುಭಾಷೆಗೊಂದು ಗೆಲುವನ್ನು ಕೊಡಲು ಈ ನಾಡಿನ ದಿಗ್ಗಜರು ಟೊಂಕ ಕಟ್ಟಿ ನಿಂತಿದ್ದಾರೆ.
ತುಳುನಾಡಿನ ವೀರ ಪುರುಷರಾದ ಕೋಟಿಚೆನ್ನಯ, ಕಾಂತಾಬಾರೆ ಬೂದಾಬಾರೆ, ಅಗೋಳಿ ಮಂಜಣ್ಣ, ದೇವುಪೂಂಜ, ಸಿರಿ ಮುಂತಾದವರ ಜೀವನ ಚರಿತ್ರೆಯನ್ನು ಸಾರುವ ಪಾಡ್ದನಗಳು, ಅವರು ಬಾಳಿ ಬೆಳಗಿ ಕಾರಣೀಕ ಮೆರೆದ ಕುರುಹುಗಳು ಆಧುನಿಕ ಯುಗದಲ್ಲಿ ಮೂಢನಂಬಿಕೆಗಳ ಸಾಲಿಗೆ ಸೇರಿಸಲ್ಪಡುತ್ತಿರುವುದು ವಿಷಾದನೀಯ. ಇವುಗಳ ಬಗ್ಗೆ ಬರಹರೂಪದ ದಾಖಲೆಗಳು ಇಲ್ಲ. ಕಂಠಸ್ಥವಾಗಿ ಹರಿದು ಬಂದ ಪಾಡ್ದನಗಳಿಗೆ ಅದೆಷ್ಟು ಸತ್ಯವಾಗಿದ್ದರೂ ಮಾನ್ಯತೆ ಸಿಗಲಾರದು ಎಂಬುದನ್ನು ಒಂದೊಮ್ಮೆ ಒಪ್ಪಬಹುದಾದರೂ. ಬರಹ ರೂಪದಲ್ಲಿ, ವಿದೇಶಿ ಪ್ರವಾಸಿಗರ ಪ್ರವಾಸ ಕಥನ ದಾಖಲೆಗಳನ್ನು ಮೂಲವಾಗಿಟ್ಟುಕೊಂಡು ಸಂಶೋಧನೆ ನಡೆಸಿ ತುಳುವಿಗೆ ನ್ಯಾಯ ಒದಗಿಸಲು ಸಾಧ್ಯವಿದೆ.
ತುಳು ವಂಶದ ಪ್ರಖ್ಯಾತ ವ್ಯಕ್ತಿಗಳಲ್ಲಿ ವಿಜಯನಗರ ಸಾಮ್ರಾಜ್ಯದ ಅರಸನಾದ ಶ್ರೀಕೃಷ್ಣದೇವರಾಯ ಅಗ್ರಮಾನ್ಯನಾಗಿದ್ದಾನೆ. ಈತನಿಗೆ ತುಳು ಭಾಷೆ ಬರುತ್ತಿತ್ತು ಎಂಬ ಕಾರಣಕ್ಕಾಗಿಯೇ ಈ ವಾದವನ್ನು ಮಾಡುವಂತಿಲ್ಲ. ಅಂದಿನ ದಕ್ಷಿಣ ಭಾರತದ ರಾಜಕೀಯದ ವ್ಯವಸ್ಥೆಯಲ್ಲಿ ಓರ್ವ ಸಮರ್ಥರಾಜನೆನಿಸಿ ಕೊಂಡವನಿಗೆ ಪಂಚದ್ರಾವಿಡ ಭಾಷೆಗಳಾದ ತುಳು, ಕನ್ನಡ, ತಮಿಳು, ತೆಲುಗು, ಮಲಯಾಲಂಗಳ ಜ್ಞಾನವಿರುವುದು ಅಗತ್ಯವಾಗಿದ್ದಿರಬಹುದು. ಶ್ರೀಕೃಷ್ಣದೇವರಾಯ ತುಳುವ ವಂಶಸ್ಥ ಎಂಬ ವಿಚಾರವು ಇಲ್ಲಿ ಪ್ರಾಮಖ್ಯತೆಯನ್ನು ಪಡೆಯುತ್ತದೆ. ಈ ವಿಚಾರ ಕಂಠಸ್ಥವಾಗಿ ಬಂದದ್ದಲ್ಲ. ಸುಮಾರು ನಾಲ್ಕು ದಶಕಗಳ ಹಿಂದೆ ವಿಜಯನಗರ ಸಾಮ್ರಾಜ್ಯಕ್ಕೆ ಆಗಮಿಸಿದ ವಿದೇಶಿ ಪ್ರವಾಸಿಗರ ಪ್ರವಾಸ ಕಥನದಲ್ಲಿ ಈ ವಿಚಾರಗಳು ತಿಳಿದುಬರುತ್ತದೆ. 1441ರಲ್ಲಿ ವಿಜಯನಗರಕ್ಕೆ ಪ್ರವಾಸಿಯಾಗಿ ಬಂದ ಅಬ್ದುಲ್ ರಜಾಕ್, ಇತಿಹಾಸಕಾರ ಬಾರ್ಬೋಸ್ ಕೃಷ್ಣದೇವರಾಯನ ಔದಾರ್ಯ ಮತ್ತು ವಿಜಯನಗರದ ವೈಭವವನ್ನು ಕೊಂಡಾಡಿದ್ದಾರೆ ಪೋರ್ಚಗಲ್ ಪ್ರವಾಸಿ ಡೊಮಿಂಗೊ ಪಾಯೇಸ್ ಕೃಷ್ಣದೇವರಾಯನನ್ನು `ಫರ್ಫೆಕ್ಟ್ ಕಿಂಗ್' ಎಂದೇ ಕರೆದಿದ್ದಾನೆ. ಜತೆಗೆ ಇತಿಹಾಸಕಾರರು ವಿಜಯನಗರದ ಅರಸ ಶ್ರೀಕೃಷ್ಣದೇವರಾಯ ತುಳುವ ವಂಶಸ್ಥನೆಂಬ ವಿವರವನ್ನೂ ನೀಡಿದ್ದಾರೆ.
ತುಳುವಿಗೊಂದು ಮಾನ್ಯತೆ ಒದಗಿಸಿಕೊಡುವ ನಿಟ್ಟಿನಲ್ಲಿ ಟೊಂಕಕಟ್ಟಿ ನಿಂತಿರುವವರಿಗೆ ಈಗ ಇರುವ ಕೆಲಸವೇನೆಂದರೆ ಶ್ರೀಕೃಷ್ಣದೇವರಾಯನ ಮೂಲವನ್ನು ಹುಡುಕಿ ತೆಗೆಯುವುದು. ಈತನ ಮೂಲವನ್ನು ಹುಡುಕುತ್ತಾ ಹೋದರೆ ಖಂಡಿತವಾಗಿಯೂ ತುಳುನಾಡಿನ ಯಾವುದಾದರೊಂದು ಪ್ರದೇಶಕ್ಕೆ ಆ ಗೌರವ ಸಲ್ಲಬಹುದು.
ಈ ಬಾರಿ ವಿಶ್ವತುಳು ಸಮ್ಮೇಳನ ಉಜಿರೆಯಲ್ಲಿ ನಡೆಯುತ್ತಿದೆ. ಸಮಗ್ರ ತುಳುವರಿಗೆ ಗುರಿಕಾರರ ಸ್ಥಾನದಲ್ಲಿರುವ ವೀರೇಂದ್ರ ಹೆಗ್ಗಡೆಯವರು ಇದರ ಸಾರಥ್ಯವನ್ನು ವಹಿಸಿಕೊಂಡಿದ್ದಾರೆ. ಖಂಡಿತವಾಗಿಯೂ ಈ ಬಾರಿಯ ಸಮ್ಮೇಳನ ಅರ್ಥಪೂರ್ಣವಾಗುವ ಭರವಸೆ ಇದೆ. ಇಂತಹಾ ಸಂದರ್ಭದಲ್ಲಿ ತುಳುವಂಶಸ್ಥ ಶ್ರೀಕೃಷ್ಣದೇವರಾಯನ ಬಗ್ಗೆ ಆಳವಾದ ಸಂಶೋಧನೆ ನಡೆದಲ್ಲಿ ಅದು ತುಳುಭಾಷೆಗೆ ಸ್ಥಾನ ಮಾನ ಕಲ್ಪಿಸುವಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಬಹುದು.

ಹಿಂಗ್ಲಿಷ್, ಕಂಗ್ಲಿಷ್, ತುಂಗ್ಲಿಷ್ ಮತ್ತು `ತುಂದಿ'!

`ಅಕ್ಚುವಲಿ ನಾನು ಪ್ರಿಫೆರ್ ಮಾಡಿದ್ದು ದಿಸ್ ಫಿಲ್ಮ್, ಬಟ್ ಆ ಫಿಲ್ಮ್ ದಿಸ್ ಮಚ್ ಫೇಮಸ್ ಆಗುತ್ತೇಂತ ಇಮಾಜಿನೇ ಮಾಡಿರ್ಲಿಲ್ಲ. ಸೋ...'
ಯಾವುದಾದರೂ ಟಿವಿ ವಾಹಿನಿಯಲ್ಲಿ ಚಿತ್ರತಾರೆಯರ ಅಥವಾ ಇನ್ನಿತರ ವಿಚಾರಗಳಲ್ಲಿ ಯುವಕರ ಸಂದರ್ಶನವನ್ನು ನೋಡಿದರೆ ಇಂತಹಾ ಕಂಗ್ಲಿಷ್ ಕೇಳಿಬರುತ್ತದೆ.
ಕನ್ನಡ ಮತ್ತು ಇಂಗ್ಲಿಷ್ ಸೇರಿಸಿ ಮಾತನಾಡುವುದನ್ನು ಈ ಆಧುನಿಕ ಯುಗದಲ್ಲಿ ಕಂಗ್ಲಿಷ್ ಎಂದು ಕರೆಯುತ್ತೇವೆ. ಅದೇ ರೀತಿ ಹಿಂದಿ ಮತ್ತು ಇಂಗ್ಲಿಷ್ ಬೆರೆಸಿ ಮಾತನಾಡುವುದನ್ನು ನಾವು ಹಿಂದಿ ಛಾನೆಲ್ ಗಳಲ್ಲಿ ನೋಡಬಹುದು. ಇದು ಹಿಂಗ್ಲಿಷ್ ಎಂದು ಕರೆಯಲ್ಪಡುತ್ತದೆ. ಹಿಂಗ್ಲಿಷ್ ಎಂಬ ಬಾಲಿವುಡ್ ಸಿನೆಮಾ ಕೂಡಾ ತಯಾರಾಗಿತ್ತು.
ತಾವು ಬಳಸುವ ಮಾತೃಭಾಷೆಯ ಮೇಲೆ ಎಲ್ಲರಿಗೂ ಒಂದು ತರದ ಕೀಳರಿಮೆ ಇದ್ದಂತೆ ಕಂಡು ಬರುತ್ತದೆ. ಇದರ ಜತೆಗೆ ಇಂಗ್ಲಿಷ್ ಅಥವಾ ಹಿಂದೀ ಪದಗಳನ್ನು ಬೆರೆಸಿ ಮಾತನಾಡಿದರೆ ಅದೇನೋ ಆನಂದ, ಈ ಮಾತುಗಳನ್ನು ಕೇಳುವವರೂ ಈತ ತುಂಬಾ ಭಾಷೆಗಳನ್ನು ಕಲಿತಿದ್ದಾನೆ ಎಂದು ಭಾವಿಸುತ್ತಾರೆ ಎಂಬ ಭಾವನೆ ಬರುತ್ತದೆ ಎಂಬ ನಂಬಿಕೆ ಕೆಲವರಿಗಿರುತ್ತದೆ.
ದಕ್ಷಿಣ ಕನ್ನಡ, ಉಡುಪಿ ಮುಂತಾದ ತುಳು ಮಾತನಾಡುವ ಪ್ರದೇಶಗಳ ಜನರಲ್ಲಿಯೂ ಈ ಅಭ್ಯಾಸವಿದೆ. ತುಳು ಮತ್ತು ಇಂಗ್ಲಿಷ್ ಸೇರಿಸಿ ಮಾತನಾಡುವುದು, ಕೆಲವು ವಸ್ತುಗಳಿಗೆ ತುಳುವಿನಲ್ಲಿ ಪದಗಳಿಲ್ಲ ನಿಜ, ಆದರೆ ಹೆಚ್ಚಿನ ವಸ್ತುಗಳಿಗೆ ಅಚ್ಚ ತುಳುವಿನ ಪದಗಳಿದ್ದರೂ ಅದನ್ನು ಹೇಳದೆ ಇಂಗ್ಲಿಷ್ನಲ್ಲೇ ಹೇಳುವುದು ನಮಗೆ ರೂಢಿಯಾಗಿದೆ. ಇದೆಲ್ಲಾ ಶಾಲೆಗೆ ಹೋಗಿ ಇಂಗ್ಲಿಷ್ ಮೀಡಿಯಂನಲ್ಲಿ ಕಲಿತ ಪ್ರಭಾವವಿರಬಹುದು.
ತುಳು ನಾಡಿನಲ್ಲಿ ಇನ್ನೊ ಒಂದು ರೀತಿ ಮಿಶ್ರ ಭಾಷೆ ಬಹಳಷ್ಟು ಹಿಂದಿನಿಂದಲೂ ಚಾಲ್ತಿಯಲ್ಲಿತ್ತು. ಅದು ತುಳು ಮತ್ತು ಹಿಂದಿಯನ್ನು ಬೆರೆಸಿ ಮಾತನಾಡುವುದು. ಕನ್ನಡ ಮತ್ತು ಇಂಗ್ಲಿಷ್ ಬೆರೆಸಿ ಮಾತನಾಡುವುದನ್ನು ಕಂಗ್ಲಿಷ್ ಎಂದು ಕರೆದರೆ ತುಳು ಮತ್ತು ಹಿಂದಿಯನ್ನು ಬೆರೆಸಿ ಮಾತನಾಡುವುದನ್ನು ತುಂದಿ ಎಂದು ಕರೆಯಬಹುದಲ್ಲವೇ?
ಇಲ್ಲಿನ ಪ್ರತಿಯೊಂದು ಮನೆಯ ಒಂದಿಬ್ಬರು ಸದಸ್ಯರು ಮಹಾರಾಷ್ಟ್ರದ ಮುಂಬೈಯಲ್ಲಿ ವಾಸಿಸುತ್ತಿದ್ದಾರೆ. ಮುಂಬೈ ಮತ್ತು ಮಂಗಳೂರು, ಉಡುಪಿಗೆ ಅವಿನಾಭಾವ ಸಂಬಂಧವಿದೆ. ಬೆಂಗಳೂರಿನಲ್ಲಿ ಏನಾದರೂ ಘಟನೆ ಸಂಭವಿಸಿದರೆ ಅದರ ಪರಿಣಾಮ ಮಂಗಳೂರಿನಲ್ಲಿ ಆಗುವುದಕ್ಕಿಂತ ಹೆಚ್ಚಾಗಿ ಮುಂಬೈಯಲ್ಲಿ ಜ್ವರ ಬಂದರೆ ಮಂಗಳೂರಿಗರಿಗೆ ಶೀತವಾಗುತ್ತದೆ. ಹಾಗಿರುವಾಗ ಮುಂಬೈಯ ಭಾಷೆ ಹಿಂದಿ ಮಂಗಳೂರಿನಲ್ಲಿ ಪ್ರಭಾವ ಬೀರುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ.
ಮಂಗಳೂರಿನ ಹಳ್ಳಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕಾದ ಅನಿವಾರ್ಯತೆ ಇರುವ ಮಂಗಳೂರು ಮೂಲದ ಮುಂಬೈ ವಾಸಿ ಮಂಗಳೂರಿಗೆ ಬಂದಾಗ ಹೇಳುವ `ತುಂದಿ' ಈ ರೀತಿ ಇದೆ.
`ತಾಪುಡ್ತೋಪ್ ಪಿದಡೊಂದು ಬತ್ತಿನೆ. ಗಾಡಿಡ್ ಮಸ್ತ್ ಗದರ್ದಿ ಇತ್ತ್ಂಡ್. ಈ ಗರ್ಮಿಗ್ ಮಸ್ತ್ ಕಂಟಲ ಆಂಡ್. ರೋಜ್ದ ವರ್ಸಗೊರ ಆಪಿನೆಕ್ಕ್ ಹಾಜಿರಾವೊಡತ್ತೆ. ಎಲ್ಲೆ ಜಲ್ದಿ ವಾಪಾಸ್ ಪೋಡು. ದುಖಾನ್ ಕೋಲೊಡತ್ತೇ?'
(ಅವಸವಸರವಾಗಿ ಹೊರಟು ಬಂದೆ. ರೈಲಿನಲ್ಲಿ ತುಂಬಾ ರಷ್ ಇತ್ತು. ಈ ಸೆಖೆಗೆ ತುಂಬಾ ತೊಂದರೆಯಾಯಿತು. ಪ್ರತಿ ವರ್ಷಕ್ಕೊಮ್ಮೆ ಆಗುವುದಕ್ಕೆ ಹಾಜರಾಗಬೇಕಲ್ಲಾ, ನಾಳೆ ಬೇಗ ಹಿಂದೆ ಹೋಗಬೇಕು. ಅಂಗಡಿ ತೆರೆಯಬೇಕಲ್ಲಾ?

ತುಳುವನ್ನು ಕನ್ನಡ ನುಂಗಿ! ಕನ್ನಡವಾ ಇಂಗ್ಲಿಷ್ ನುಂಗಿ...!

ತುಳು ಕಲಿಸುವ ಯೋಜನೆ ರೂಪುಗೊಂಡು ವಿದೇಶಕ್ಕೂ ತುಳು ಕಲಿಸುವ ಪ್ರತಿನಿಧಿಗಳು ಹಾರಿಹೋದದ್ದು ಸಂತಸದಾಯಕ ಸಂಗತಿ. ತುಳು ಅವನತಿ ಹೊಂದುತ್ತಿದೆ ಎಂದು ನಮಗೆಲ್ಲರಿಗೂ ಅನಿಸುತ್ತಿದೆ. ಆದರೆ ಭಾರತದ ಪ್ರಾದೇಶಿಕ ಭಾಷೆಗಳೇ ನಿಧಾನವಾಗಿ ಅವನತಿ ಹೊಂದುತ್ತಿರುವ ಪರಿಸ್ಥಿತಿಯೂ ನಿಮರ್ಮಾಣವಾಗಿದೆ. ಜನರ ಮನಸ್ಸು ಸದಾ ಹೊಸತನವನ್ನೇ ಬಯಸುತ್ತದೆ. ಈ ಬಯಕೆಯ ನಡುವೆ ನಿಧಾನವಾಗಿ ನಮ್ಮದು ಎಂಬ ಸಂಗತಿಗಳು ಮರೆಯಾಗುತ್ತಾ ಹೋಗುತ್ತಿರುವುದು ವಿಷಾದನೀಯ.
ಶಾಲೆಗಳಲ್ಲಿ ಇಂತಹದೇ ಭಾಷೆ ಮಾತನಾಡಬೇಕು ಎಂಬ ಅಘೋಷಿತ ಕಟ್ಟುಪಾಡುಗಳು ಬಹಳ ಹಿಂದಿನಿಂದಲೂ ಇತ್ತು. ನಮ್ಮ ಬಾಲ್ಯ ಕಾಲದಲ್ಲಿ ಶಾಲೆಯಲ್ಲಿ ಕನ್ನಡವನ್ನೇ ಮಾತನಾಡಬೇಕು ಎಂಬ ನಿಯಮವಿತ್ತು. ಅಪ್ಪಿ ತಪ್ಪಿ ಎಲ್ಲಿಯಾದರೂ ತುಳು ಮಾತನಾಡಿದರೆ ಕೆಲವು ಮಾಸ್ತರರು ಶಿಕ್ಷೆಯನ್ನು ನೀಡುತ್ತಿದ್ದರು. ಈ ಕಾರಣಕ್ಕಾಗಿ ಬಸ್ಕಿ, ಒಂಟಿ ಕಾಲಿನಲ್ಲಿ ನಿಲ್ಲುವುದು, ಛಡಿ ಏಟು ನೀಡುವ ಮಾಸ್ತರರು ಇದ್ದರು. ತಮಾಷೆ ಮಾಡಿ ಹೀಗಳೆಯುತ್ತಾ ನೀವು ಶಾಲೆಗೆ ಬರುವುದು ದಂಡಕ್ಕೆ ಎಂದು ಹೇಳುವವರೂ ಇದ್ದರು. ಆವಾಗ ತುಳು ಎನ್ನುವುದು ಅನಾಗರಿಕ ಭಾಷೆ ಎಂಬ ಕೀಳರಿಮೆ ಮನಸ್ಸಿನಲ್ಲಿ ಅಗೋಚರವಾಗಿ ತುಂಬುತ್ತಿತ್ತು.
ಹೈಸ್ಕೂಲ್ ಮೆಟ್ಟಲು ಹತ್ತುತ್ತಿದ್ದಂತೆ ಒಂದು ತರಗತಿಯ ಎ.ಬಿ.ಸಿ ಇತ್ಯಾದಿ ಹತ್ತಾರು ವಿಭಾಗಗಳಲ್ಲಿ ಎ ತರಗತಿ ಯಾವಾಗಲೂ ಇಂಗ್ಲಿಷ್ ಮೀಡಿಯಂಗೆ ಮೀಸಲಾಗಿರುತ್ತಿತ್ತು. ಇಂಗ್ಲಿಷ್ ಮೀಡಿಯಂನಲ್ಲಿ ಕಲಿಯುವ ವಿದ್ಯಾರ್ಥಿ ಎಂದರೆ ಆತ ವಿಶೇಷ ಆದರಣೆಗೆ ಪಾತ್ರವಾಗುತ್ತಿದ್ದ. ಆ ತರಗತಿಗೆ ಕಲಿಸುವ ಅಧ್ಯಾಪಕರಿಗೂ ಒಂದು ರೀತಿಯಲ್ಲಿ ವಿಶೇಷವಾದ ಗೌರವವಿರುತ್ತಿತ್ತು. ಇಂಗ್ಲಿಷ್ ಮೀಡಿಯಂ ತರಗತಿಯಲ್ಲಿ ಕಲಿಯುವ ವಿದ್ಯಾರ್ಥಿ ತರಗತಿಯಲ್ಲಿ ಇಂಗ್ಲಿಷನ್ನೇ ಮಾತನಾಡಬೇಕು. ಕನ್ನಡ ಮಾತನಾಡಿದರೆ ಕೆಲವು ಅಧ್ಯಾಪಕರು ಶಿಕ್ಷಿಸುತ್ತಲೂ ಇದ್ದರೂ. ಈ ಸಂದರ್ಭದಲ್ಲಿ ಇಂಗ್ಲಿಷ್ ಮೀಡಿಯಂ ವಿದ್ಯಾರ್ಥಿಗಳಿಗೆ ಸಿಗುವ ವಿಶೇಷ ಗೌರವ ಕಂಡು ಕನ್ನಡ ಮೀಡಿಯಂ ವಿದ್ಯಾರ್ಥಿಗಳು ಮನಸ್ಸಿನಲ್ಲೇ ಕೀಳರಿಮೆಯನ್ನು ತುಂಬಿಕೊಳ್ಳುತ್ತಿದ್ದರು. ಅವರಿಗೆ ಕನ್ನಡ ಎಂದರೆ ಅನಾಗರಿಕ ಭಾಷೆ ಇಂಗ್ಲಿಷ್ನಲ್ಲಿ ಹೆಚ್ಚುಗಾರಿಕೆ ಇದೆ ಎಂದು ಅನಿಸುತ್ತಾ ಇತ್ತು.
ಇದು ತುಳು ಮತ್ತು ಕನ್ನಡ ಭಾಷೆಗೆ ಮಾತ್ರ ಇರುವಂತಹಾ ಸಂಗತಿಯಲ್ಲ. ಭಾರತದಲ್ಲಿ ಎಲ್ಲೆಲ್ಲಾ ಎಷ್ಟೆಷ್ಟು ಪ್ರಾದೇಶಿಕ ಭಾಷೆಗಳು ಇದೆಯೋ ಅಂತಹವರೆಲ್ಲರ ಪರಿಸ್ಥಿತಿಯೂ ಇದೇ ಆಗಿತ್ತು. ಹೀಗಿರುವಾಗ ಪ್ರಾದೇಶಿಕ ಭಾಷೆಗಳನ್ನು ಅಳಿವಿನಂಚಿಗೆ ದೂಡಿದವರು ಯಾರು? ಎಂಬ ಪ್ರಶ್ನೆಗೆ ನಾವೇನು ಉತ್ತರ ಕೊಡುವುದಕ್ಕೆ ಸಾಧ್ಯ? ತುಳುವನ್ನು ಕೀಳರಿಮೆಯಿಂದ ದೂರ ಮಾಡುತ್ತಾ ಕನ್ನಡಕ್ಕೆ ಆದರವನ್ನು ಕೊಟ್ಟ ನಾವು ನಿಧಾನವಾಗಿ ಕನ್ನಡದ ಬಗ್ಗೆಯೂ ಕೀಳರಿಮೆಯನ್ನು ತುಂಬಿಸಿಕೊಂಡು ಇಂಗ್ಲಿಷ್ಗೇ ಮಣೆ ಹಾಕುತ್ತಿದ್ದೇವೆಯಲ್ಲವೆ? ತುಳುವನ್ನು ಕನ್ನಡ ದೂರ ಮಾಡಿದರೆ ಕನ್ನಡವನ್ನು ಇಂಗ್ಲಿಷ್ ನುಂಗಿ ಬಿಡುತ್ತದೆ.
ತುಳುವರೇನೋ ಜಾಗೃತಗೊಂಡು ಎಲ್ಲೋ ಮೂಲೆಯಲ್ಲಿದ್ದ ತುಳು ಲಿಪಿಯ ಮೇಲಿನ ಧೂಳನ್ನು ಕೊಡವಿ ತುಳು ಕಲಿಯುವಲ್ಲಿ ಉತ್ಸಾಹವನ್ನು ತೋರುತ್ತಿದ್ದಾರೆ. ಇಂತಹಾ ಪರಿಸ್ಥಿತಿ ಒಂದು ಸಂದರ್ಭದಲ್ಲಿ ಕನ್ನಡಕ್ಕೂ ಬಂದು ಬಿಡುವ ಸಾಧ್ಯತೆ ಇದೆ. ಹಾಗಿರುವಾಗ ನಾವು ನಮ್ಮದು ಎಂಬ ಭಾಷೆ, ಸಂಸ್ಕೃತಿ, ವಸ್ತು, ಸೊತ್ತುಗಳ ಬಗ್ಗೆ ಎಂದಿಗೂ ಕೀಳರಿಮೆಯನ್ನು ಹೊಂದಬಾರದು. ನಮ್ಮದರ ಬಗ್ಗೆ ಅನಾದರ ತೋರದೆ ಹೆಮ್ಮೆ ಪಡುತ್ತಾ ಇನ್ನೊಂದನ್ನು ಸ್ವಾಗತಿಸುವ ಪರಿಪಾಠ ಬೆಳೆದು ಬಂದರೆ `ಭಾಷೆಯ ಅವನತಿ' ಎಂಬ ಪದವನ್ನು ಶಬ್ದಕೋಶಕ್ಕೆ ಮಾತ್ರ ಸೀಮಿತ ಮಾಡಿಬಿಡಬಹುದು.