Monday, September 13, 2010

ತುಳುವರ ಸರಳ ಗಣಪ



ಚೌತಿ ಹಬ್ಬ ತುಳುನಾಡಿನ ಮನೆ ಮನೆಯ ಹಬ್ಬವಾಗಿದೆ. ತುಳುವರು ಆರಾಧಿಸುವ ದೈವಗಳು ಚೌತಿ ಹಬ್ಬವನ್ನು ಆಚರಿಸದೇ ಇದ್ದರೆ ಸಹಿಸುವುದಿಲ್ಲ. ಗುತ್ತಿನ ಮನೆ, ದೈವದ ಮನೆ, ದೈವಸ್ಥಾನಗಳಲ್ಲಿ ಚೌತಿ ಹಬ್ಬವನ್ನು ಖಡ್ಡಾಯವಾಗಿ ಆಚರಿಸಬೇಕು. ಕೆಲವೊಂದು ಕಡೆ ಚೌತಿ ದಿನ ಗಣಪತಿ ಪೂಜೆ ಮಾಡಲು ಕಾರಣಾಂತರಗಳಿಂದ ಅಸಾಧ್ಯವಾದರೆ ಮುಂದೊಂದು ದಿನ ಚೌತಿಹಬ್ಬ ಎಂದು ದಿನ ನಿಗದಿ ಮಾಡಿ ಗಣಪತಿಯನ್ನು ಆರಾಧಿಸಲೇ ಬೇಕು. ದೈವಗಳಿಗೆ ಈಶ್ವರನು ಯಜಮಾನನಾದುದರಿಂದ ಗಣಪತಿಗೂ ಮಾನ್ಯತೆ ಬರುತ್ತದೆ.
ಇಲ್ಲಿನ ಮನೆ ಮನೆಗಳಲ್ಲಿ ಚೌತಿಯ ಗಣಪತಿಯನ್ನು ಮೂತರ್ಿಯ ಮೂಲಕ ಆರಾಧಿಸುವುದು ಬಹಳ ಕಡಿಮೆ. ಈಗೀಗ ಗಣಪತಿ ಮೂತರ್ಿಯನ್ನು ಪ್ರತಿಷ್ಠಾಪಿಸಿ ಪೂಜಿಸುವ ಕ್ರಮ ಕೆಲವು ಮನೆಗಳಲ್ಲಿ ಇದ್ದರೂ ವಾಸ್ತವವಾಗಿ ತುಳುವರು ಎಂದು ಕರೆಯಲ್ಪಡುವವರು ಗಣಪತಿಯ ಮೂತರ್ಿಯನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಿರಲಿಲ್ಲ. ಅವರದೇನಿದ್ದರೂ ಕೃಷಿ ಪರಿಕರಗಳ ಹಿನ್ನೆಲೆಯುಳ್ಳ ಸರಳವಾದ ಗಣಪತಿಯ ಆಚರಣೆ.
ಬತ್ತದಂತೆ ಕಬ್ಬುಕೂಡಾ ತುಳುನಾಡಿನ ಪ್ರಮುಖ ಬೆಳೆಯಾಗಿತ್ತು. ಚೌತಿಯ ದಿನ ಕಬ್ಬನ್ನು ಮನೆಯೊಳಗೆ ತಂದಿಟ್ಟರೆ ಆ ದಿನ ಗಣಪ ಮನೆಗೆ ಬಂದೇ ಬರುತ್ತಾನೆ ಎಂದು ತುಳುವರು ನಂಬುತ್ತಾರೆ. ಯಾಕೆಂದರೆ ಗಣಪ ಕಬ್ಬುಪ್ರಿಯ. ಒಂದು ತುಂಡು ಕಬ್ಬು ಮನೆಯೊಳಗೆ ತಂದು ಚೌತಿ ಆಚರಿಸಿದ ಸಮಾಧಾನ ಪಟ್ಟುಕೊಳ್ಳುವವರೂ ಇದ್ದಾರೆ. ಆದುದರಿಂದ ತುಳುವರ ಮನೆಯೊಳಗೆ ಅಂದು ಕಬ್ಬು ಬಂದೇ ಬರಬೇಕು. ಇಲ್ಲಿನ ಸಂತೆಗಳಲ್ಲಿ ಚೌತಿಯ ಮುಂಚಿನ ದಿನಗಳಲ್ಲಿ ಕಬ್ಬಿನ ಮಾರಾಟ ಭರಾಟೆಯಿಂದ ನಡೆಯುತ್ತದೆ. ಎಲ್ಲಿ ನೋಡಿದರೂ ಕಬ್ಬಿನ ಕಟ್ಟಗಳ ಸಾಲುಗಳು ಕಂಡು ಬರುತ್ತವೆ. ಕಬ್ಬು ಬೆಳೆಸುವ ರೈತರು ಈ ದಿನ ಕಬ್ಬನ್ನು ನೇರವಾಗಿ ಮಾರಾಟ ಮಾಡಿ ಲಾಭ ಮಾಡಿಕೊಳ್ಳುತ್ತಾರೆ.
ಚೌತಿಯ ಮುಂಚಿನ ದಿನವಾದ ಗೌರಿ ಹಬ್ಬವನ್ನು ತೆನೆ ಹಬ್ಬವನ್ನಾಗಿಯೂ ಕೆಲವು ಕಡೆ ಆಚರಿಸುತ್ತಾರೆ. ಅಂದು ತೆನೆಯನ್ನು ಮನೆ ತುಂಬಿಸುವ ಸಂಭ್ರಮವೂ ಜರಗಿ ಚೌತಿ ಆಚರಣೆಗೆ ಮುನ್ನುಡಿ ಬರೆಯಲಾಗುತ್ತದೆ.
ಗಣಪತಿ ಮೂತರ್ಿ ಪ್ರತಿಷ್ಠಾಪನೆ, ಕಡುಬು, ಮೋದಕ, ಸಿಹಿತಿಂಡಿಗಳ ಸಮರ್ಪಣೆ, ಪೂಜೆ ಮುಂತಾದ ಪದ್ಧತಿಗಳು ತುಳುನಾಡಿನ ಚೌತಿ ಆಚರಣೆಯಲ್ಲಿ ಇರುವುದಿಲ್ಲ. ಕಬ್ಬನ್ನು ಸವರಿ, ಸೀಳುಮಾಡಿ ಒಂದಡಿ ಉದ್ದದಷ್ಟು ಕತ್ತರಿಸಿದ ತುಂಡುಗಳನ್ನು ಚೌಕಾಕಾರದಲ್ಲಿ ಒಂದೆರಡು ಅಡಿ ಅಟ್ಟಿ ಮಾಡಲಾಗುತ್ತದೆ. ಕೆಲವು ಕಡೆ ಈ ಚೌಕಾಕಾರದ ಅಟ್ಟಿಯ ಒಳಗೆ ಕಲಶ ಪ್ರತಿಷ್ಠಾಪಿಸುವುದೂ ಇದೆ. ಅದರ ಮೇಲೆ ಬಾಳೆ ಎಲೆ ಹಾಕಿ ಧಾನ್ಯಗಳಿಂದ ತಯಾರಿಸಿದ ಕಜ್ಜಾಯ, ಅಕ್ಕಿಯ ತೆಲ್ಲವು (ದೋಸೆ) ಬೆಲ್ಲ, ಪೊರಿ (ಹರಳು) ಹಾಕಲಾಗುತ್ತಿದೆ. ಹಿಂದಿನ ಕಾಲದಲ್ಲಿ ಒಲೆಯ ಮಣ್ಣಿನ `ಓಡು' ಇಟ್ಟು ಅದು ಕಾದಾಗ ಅದರ ಮೇಲೆ ಬತ್ತ ಹಾಕಿ ಅರಳಿಸಿ ತಯಾರಿಸಲಾದ `ಪೊದ್ದೊಲು' ವನ್ನು ಗಣಪತಿಗೆ ಸಮಪರ್ಿಸಲಾಗುತ್ತದೆ. ಈಗ ಸುಲಭವಾಗಿ ಅಂಗಡಿಯಲ್ಲಿ ಸಿಗುವ ಹರಳನ್ನೇ ಹೆಚ್ಚಾಗಿ ಬಳಸಲಾಗುತ್ತದೆ. ಗಣಪತಿಗೆ ತಯಾರಿಸುವ ಕಜ್ಜಾಯ, ತೆಲ್ಲವುಗಳಿಗೆ ಉಪ್ಪಿನ ನಿಷೇಧವಿದೆ.
ಈಗ ಮಾರುಕಟ್ಟೆಯಲ್ಲಿ ಸಾಕಷ್ಟು ಹೂಗಳು ಸಿಗುತ್ತವೆ. ಚೌತಿ ಮಳೆಗಾಲದಲ್ಲಿ ಬರುವುದರಿಂದ ಹೂಗಳು ಸಿಗುತ್ತಿರಲಿಲ್ಲ. ಅಂತಹಾ ಸಂದರ್ಭದಲ್ಲಿ `ಪೂ-ಬಿತ್ತ್' ಎಂಬ ವಿಶೇಷವಾದ ಹೂ ಅಂದರೆ ಧಾನ್ಯದ ಮೊಳಕೆಯನ್ನು ಚೌತಿ ಸಂದರ್ಭದಲ್ಲಿ ಬಳಸಲಾಗುತ್ತಿತ್ತು. ವಿಧವಿಧವಾದ ಧಾನ್ಯಗಳನ್ನು ಚೌತಿಗಿಂತ ಒಂದು ವಾರಗಳ ಮುಂಚಿತವಾಗಿ ಬಿತ್ತಿ ಮೊಳಕೆ ಬರಿಸಲಾಗುತ್ತಿತ್ತು. ಇವು ಚೌತಿಯ ದಿನ ಉದ್ದುದ್ದ ಮೊಳಕೆಗಳು ಬಂದಾಗ ಅದನ್ನು ಕಿತ್ತು ತೆಗೆದು ಸೂಡಿ ಕಟ್ಟಿ ಕಬ್ಬಿನ ಗಣಪತಿಯ ಅಲಂಕಾರವನ್ನು ಮಾಡಲಾಗುತ್ತಿತ್ತು. ಈಗಲೂ ಹಳ್ಳಿಯ ಮನೆಗಳಲ್ಲಿ ಕಬ್ಬಿನ ಗಣಪತಿ ಇಡುವವರು ಪೂಬಿತ್ತನ್ನು ಹಾಕುತ್ತಾರೆ. ಪೂಬಿತ್ತ್ನಿಂದ ಕಬ್ಬಿನ ಗಣಪತಿಯನ್ನು ಅಲಂಕಾರ ಮಾಡಲಾಗುತ್ತದೆ. ಇದನ್ನೇ ಹೆಂಗಳೆಯರು ಪ್ರಸಾದವಾಗಿ ಮುಡಿಗೇರಿಸುತ್ತಾರೆ.
ಹೆಚ್ಚಿನ ಕಡೆಗಳಲ್ಲಿ ಮನೆಯ ಚಾವಡಿಯಲ್ಲಿ ಎರಡು ಕಬ್ಬಿನ ಗಣಪತಿಯನ್ನು ಇಡಲಾಗುತ್ತದೆ. ಒಂದು ಗೌರಿ. ಇನ್ನೊಂದು ಗಣಪ. ಮಧ್ಯಾಹ್ನದ ಹೊತ್ತಿಗೆ ಗಣಪನನ್ನು ಅಂಗಳದ ತುಳಸಿ ಕಟ್ಟೆಯ ಬಳಿ ತಂದು ಧೂಪದಿಂದ ಪೂಜಿಸಿ ಪ್ರಾಥರ್ಿಸಲಾಗುತ್ತದೆ. ಆನಂತರ ಗಣಪನನ್ನು ಚಾವಡಿಗೆ ಕೊಂಡೊಯ್ದು ಗೌರಿ-ಗಣಪನಿಗೆ
ಧೂಪದಿಂದ ಪೂಜಿಸಿ ಕೈಮುಗಿದು ಗಣಪನನ್ನು ವಿಸಜರ್ಿಸಿ ಅದರ ಕಬ್ಬನ್ನು ಪ್ರಸಾದರೂಪವಾಗಿ ಸ್ವೀಕರಿಸಲಾಗುತ್ತದೆ. ಗೌರಿಯನ್ನು ಸಂಜೆಯ ಹೊತ್ತಿಗೆ ವಿಸಜರ್ಿಸಲಾಗುತ್ತದೆ.
ಉತ್ತರ ಭಾರತದಲ್ಲಿ ಬ್ರಿಟಿಷರ ವಿರುದ್ಧ ಕ್ರಾಂತಿ ಎಬ್ಬಿಸಲು ತಿಲಕರು ಆರಂಭಿಸಿದ ಗಣೇಶೋತ್ಸವವು ಪ್ರಖ್ಯಾತಿಯನ್ನು ಪಡೆದು ಸ್ವಾತಂತ್ರ್ಯಾ ನಂತರ ನಮ್ಮ ತುಳುನಾಡನ್ನೂ ನಿಧಾನವಾಗಿ ಪ್ರವೇಶಿಸಿತು. ಈಗ ಅಲ್ಲಲ್ಲಿ ಸಾರ್ವಜನಿಕ ಗಣೇಶೋತ್ಸವಗಳು, ವೈಭವದ ಮೆರವಣಿಗೆ, ಗಣೇಶ ವಿಸರ್ಜನೆ ನಡೆಸಲಾಗುತ್ತದೆ. ತುಳುನಾಡಿನಲ್ಲಿ ಇದಕ್ಕೆ ಹೆಚ್ಚು ಕಮ್ಮಿ ಐವತ್ತು ವರ್ಷಗಳ ಇತಿಹಾಸವಿದೆ. ಐವತ್ತನೇ ವರ್ಷದ ಗಣೇಶೋತ್ಸವ, ಇಪ್ಪತ್ತೈದನೇ ವರ್ಷದ ಗಣೇಶೋತ್ಸವಗಳು ವಿಜೃಂಭಣೆಯಿಂದ ನಡೆಯುತ್ತಿದೆ. ಕೆಲವು ಊರುಗಳಲ್ಲಿ ಶಾಂತಿ ಕದಡುವ ಪ್ರಸಂಗಗಳೂ ನಡೆಯುತ್ತಿವೆ.
ಈಗ ಗಣಪ ತುಳುನಾಡಿನ ಮನೆಮನೆಗಳಲ್ಲಿ ಖಾಸಗಿ ಕಬ್ಬಿನ ಗಣಪನಾಗಿ, ಸಾರ್ವಜನಿಕವಾಗಿ ಬೀದಿ ಬೀದಿಗಳಲ್ಲಿ ಬೃಹದಾಕಾರದ ಮೂತರ್ಿಗಳ ರೂಪದಲ್ಲೂ ವಿಜೃಂಭಣೆಯ ಪೂಜೆ ಪಡೆಯುತ್ತಿದ್ದಾನೆ.

ಬಳ್ಳಿಗೂ ಬಯಕೆ!


ಕೃಷಿಕರು ಬೆಳೆ ಬೆಳೆಸಿ ಉಣ್ಣುವವರು. ತಾವು ಬೆಳೆಸುವ ಬೆಳೆ, ಸಾಕುವ ದನ, ಎತ್ತು, ಕೋಣ, ನಾಯಿ, ಬೆಕ್ಕು, ಕೋಳಿ ಮುಂತಾದ ಪ್ರಾಣಿಗಳಿಗೂ ತಮ್ಮಂತೆಯೇ ಆಸೆ ಆಕಾಂಕ್ಷೆಗಳು ಇರುತ್ತವೆ ಎಂದು ಭಾವಿಸುತ್ತಾರೆ. ಬೆಳೆಗಳಿಗೆ ರೋಗ ರುಜಿನಗಳು ಬಂದರೆ ಅವುಗಳೊಂದಿಗೆ ತಾವೂ ಕೊರಗುತ್ತಾರೆ. ಸಾಕು ಪ್ರಾಣಿಗಳು ಸತ್ತು ಹೋದರೆ ಮನೆಯ ಸದಸ್ಯರನ್ನು ಕಳೆದುಕೊಂಡಂತೆ ಕಣ್ಣೀರು ಹಾಕುತ್ತಾರೆ.
ಮಳೆಗಾಲದಲ್ಲಿ ಬೇಸಾಯದ ಜತೆ ತರಕಾರಿ ಕೃಷಿ ಮಾಡುವುದು ರೈತರ ಹವ್ಯಾಸ. ಬೆಂಡೆ, ಅಲಸಂಡೆ, ಹರಿವೆ ಮುಂತಾದವುಗಳನ್ನು ಬೆಳೆಸುತ್ತಾರೆ. ಸೌತೆ, ಕಾಯಿ, ಕುಂಬಳಕಾಯಿ ಚೀನೀ ಕಾಯಿ (ಕೆಂಬುಡೆ) ಸೋರೆಕಾಯಿ, ಹೀರೇಕಾಯಿ ಮುಂತಾದ ಬಳ್ಳಿಗಳು ರೈತರ ಅಂಗಳದಲ್ಲಿ ವಿಶಾಲವಾಗಿ ಹರಡಿ ಸುಂದರವಾಗಿ ಕಾಣುತ್ತವೆ. ಮಳೆಗಾಲದಲ್ಲಿ ಬೆಳೆಸಿದ ಬಳ್ಳಿಗಳು ತುಳುವರ ಸೋನ ಅಥವಾ ಶ್ರಾವಣ ತಿಂಗಳಲ್ಲಿ ಹೂ ಬಿಡುತ್ತವೆ. ಕುಂಬಳ, ಚೀನಿಕಾಯಿ, ಸೋರೆಕಾಯಿಗಳ ಬಳ್ಳಿ ತುಂಬಾ ಹೂವುಗಳು ನಳನಳಿಸಿದರೂ, ಎಲ್ಲವೂ ಮುದುಡಿ, ಉದುರಿ ಹೋಗಿ ಒಂದೇ ಒಂದು ಹೂ ಫಲವಾಗುವ ಲಕ್ಷಣ ಕಂಡು ಬರದೇ ಇದ್ದಾಗ ಮನೆಯ ಯಜಮಾನಿಗೆ ತಕ್ಷಣ ನೆನೆನಪಾಗುವುದು ತುಳುವರ `ಬಯಕೆ' ಅಥವಾ ಸೀಮಂತ ಎಂಬ ಸಂಪ್ರದಾಯ. ಆಕೆ ಬಳ್ಳಿಗೂ ಬಯಕೆ ಹಾಕುವ ತಯಾರಿ ನಡೆಸುತ್ತಾಳೆ.
ಮುಸ್ಸಂಜೆಯ ಹೊತ್ತು ಈ ಬಯಕೆ ಸಂಪ್ರದಾಯವು ನೆರವೇರುತ್ತದೆ. ಬೆಲ್ಲ ಮತ್ತು ಅನ್ನವನ್ನು ಬೆರೆಸಿ ಅದನ್ನು ಚೀನೀ ಕಾಯಿಯ ಎಲೆಯಲ್ಲಿ ಸುರಿದು ಅದನ್ನು ಹುಲ್ಲಿನಿಂದ ಕಟ್ಟಿ ಕೈ ಮುಗಿಯುತ್ತಾರೆ. ಕುಂಬಳ, ಸೋರೆಕಾಯಿಯ ಬಳ್ಳಿಯ ಎಲೆಗೆ ಅನ್ನ ಮತ್ತು ಬೂದಿಯನ್ನು ಹಾಕಿ ಕಟ್ಟಿದರೆ ಬಳ್ಳಿಯ ಬಯಕೆ ಸಂಪ್ರದಾಯ ಮುಗಿಯುತ್ತದೆ.
ಕಾಕತಾಳೀಯವಾಗಿಯೋ ಅಥವಾ ಬಯಕೆಯಿಂದ ತೃಪ್ತಿಗೊಂಡೋ ಬಳ್ಳಿಯಲ್ಲಿ ಮುಂದಿನ ದಿನಗಳಲ್ಲಿ ಹೂವಿನ ಬುಡದಲ್ಲಿ ಪೀಚು ಕಾಯಿಗಳು ಕಾಣಿಸಿಕೊಳ್ಳತೊಡಗುತ್ತಾ ದಿನ ಕಳೆದಂತೆ ಬಳ್ಳಿ ಎಲ್ಲೆಲ್ಲಾ ಹರಡಿದೆಯೋ ಅಲ್ಲಲ್ಲಿ ಕಾಯಿಗಳು ಕಾಣಿಸಿಕೊಂಡು ಅದು ಬೆಳೆಯತೊಡಗುತ್ತವೆ.
ಆಧುನಿಕ ಕೃಷಿ ಪದ್ಧತಿಗಳಲ್ಲಿ ಗಿಡ ನೆಡುವುದಕ್ಕೆ ಮೊದಲು ಮಣ್ಣಿಗೆ ರಾಸಾಯನಿಕ ಗೊಬ್ಬರ, ಹೂ ಬಿಡಲು, ಕಾಯಿ ಭದ್ರವಾಗಲು, ಬೆಳೆಯಲು ಬೇಕಾದ ರಾಸಾಯನಿಕಗಳನ್ನು ಹಾಕಲಾಗುತ್ತದೆ. ಕೊನೆಗೆ ಗಿಡದಿಂದ ಕಾಯಿಯನ್ನು ಕೊಯ್ದಾದ ನಂತರವೂ ಅದು ಕೆಡದಂತೆ ಬಹುಕಾಲ ಇಡಲು ಅಥವಾ ಬೇಗ ಹಣ್ಣಾಗಲು ರಾಸಾಯನಿಕವನ್ನು ಸೂಜಿಯ ಮೂಲಕ ಚುಚ್ಚಲಾಗುತ್ತದೆ. ಈ ಮೂಲಕ ಮನುಷ್ಯನ ದೇಹ ರಾಸಾಯನಿಕಗಳ ಕೂಪವಾಗುತ್ತಿದೆ.
ತರಕಾರಿ ಬಳ್ಳಿಗೂ ತಮ್ಮ ಭಾವನೆಗಳನ್ನು ಧಾರೆ ಎರೆದು ಬೆಳೆ ಬೆಳೆಸಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡು ಬಂದ ನಮ್ಮ ಪೂರ್ವಜರು ನಿಜವಾಗಿಯೂ ಧನ್ಯರು.

ಅಷ್ಟಮಿಗೆ ಹಿರಿಮಗನ ಅಡವು !


ಅಷ್ಟಮಿಯನ್ನು ತುಳುನಾಡಿನ ಹಳ್ಳಿ ಹಳ್ಳಿಗಳಲ್ಲೂ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಖಾಸಗಿಯಾಗಿ ಮನೆ ಮನೆಗಳಲ್ಲಿ ಮತ್ತು ಸಾರ್ವಜನಿಕವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಮಳೆಗಾಲದ ಅಂತಿಮ ಹಂತದಲ್ಲಿ ಈ ಹಬ್ಬವು ಬರುತ್ತದೆ. ಕೆಲವು ಬಾರಿ ಅಷ್ಟಮಿಯ ದಿನಗಳಲ್ಲಿ ಧಾರಾಕಾರ ಮಳೆ ಸುರಿಯುವುದೂ ಇದೆ. ಅಷ್ಟಮಿಯ ದಿನಗಳು ತೀರಾ ಮುಗ್ಗಟ್ಟಿನ ದಿನಗಳು. ಮಳೆಗಾಲಕ್ಕೆ ಸಂಗ್ರಹಿಸಿಟ್ಟ ಅಕ್ಕಿ ಮತ್ತಿತರ ಸೊತ್ತುಗಳು ಮುಗಿದಿರುತ್ತವೆ. ಮಳೆಗಾಲ ಬಿರುಸಾದರೆ ಅಷ್ಟಮಿಯ ದಿನಗಳಲ್ಲಿ ತಿಂಡಿ ಮಾಡುವ ಸಲುವಾಗಿ ಒಲೆ ಉರಿಸಲೂ ಕಟ್ಟಿಗೆ ಇಲ್ಲದ ಪರಿಸ್ಥಿತಿ ಎದುರಾಗುವುದುಂಟು. ಅದೇನಿದ್ದರೂ ಅಷ್ಟಮಿಯ ದಿನ ಮೂಡೆ ಮಾಡಲೇ ಬೇಕು ಎಂಬ ಹಟ ಮನೆಯೊಡತಿಯರಲ್ಲಿ ಇರುತ್ತದೆ. ಅಷ್ಟಮಿ ಹಬ್ಬ ಆಚರಿಸಲು ಹಿರಿಮಗನನ್ನು ಊರಿನ ಗುತ್ತಿನವರ, ಶ್ರೀಮಂತರ ಮನೆಯಲ್ಲಿ ಅಡವು ಇಟ್ಟಾದರೂ ಅಕ್ಕಿ ತರುತ್ತಿದ್ದರಂತೆ. ಹೀಗೆ ಅಡವಿಟ್ಟ ಮಗನನ್ನು ಮುಂದಿನ ಶಿವರಾತ್ರಿಯ ದಿನ ಬಿಡಿಸಿಕೊಳ್ಳಲಾಗುತ್ತಿತ್ತಂತೆ!. ಇದು ಹಳೆಯಕಾಲದ ಮಾತು.

ಸಾಮಾನ್ಯವಾಗಿ ಇಲ್ಲಿ ಅಷ್ಟಮಿಯನ್ನು ಮೂರು ದಿವಸಗಳ ಹಬ್ಬವಾಗಿ ಆಚರಿಸುತ್ತಾರೆ. ಅಷ್ಟಮಿಯ ಮುಂಚಿನ ದಿವಸ ರಾತ್ರಿ ಉಪವಾಸ ಆರಂಭಿಸುವ ಕ್ರಮಕ್ಕೆ `ಬೊಲಂಕ್ ಅಥವಾ `ಬಲೊಟ್ಟು ಕುಲ್ಲುನಿ' ಎಂದು ಕರೆಯುತ್ತಾರೆ. ಪ್ರಾದೇಶಿಕವಾಗಿ ಇದನ್ನು ಬೇರೆ ಬೇರೆ ರೀತಿಯಲ್ಲಿ ಕರೆಯುತ್ತಾರೆ. ಆಚರಣೆಯೂ ಭಿನ್ನ ಭಿನ್ನವಾಗಿರುತ್ತದೆ. ಇದನ್ನು ವ್ರತದಲ್ಲಿ ಕುಳಿತುಕೊಳ್ಳುವುದು ಎನ್ನುತ್ತಾರೆ. ಹೆಚ್ಚಿನ ಕಡೆಗಳಲ್ಲಿ ಈ ದಿನ ತುಳುನಾಡಿನ ವಿಶೇಷ ತಿಂಡಿಯಾದ ಪತ್ರೊಡೆಯನ್ನು ಮಾಡುತ್ತಾರೆ. ತಡರಾತ್ರಿ ಹೊಟ್ಟೆತುಂಬಾ ತಿಂಡಿ ತಿಂದು ಉಪವಾಸದ ವೃತವನ್ನು ಆರಂಭಿಸುತ್ತಾರೆ.
`ಅಷ್ಟಮಿ ಪಾಸ' ಅಂದರೆ ಅಷ್ಟಮಿಯ ಉಪವಾಸ ಹಿಡಿಯುವವರಿಗೆ ಅಷ್ಟಮಿ ದಿವಸದ ಚಂದ್ರೋದಯದವರೆಗೆ ಕಠಿಣವಾದ ವ್ರತವಿರುತ್ತದೆ. ಮಧ್ಯಾಹ್ನ ಸೀಯಾಳ ಕುಡಿಯುವ ಕ್ರಮವಿದೆ.
ಈ ನಡುವೆ ಅಷ್ಟಮಿಯ ರಾತ್ರಿ ಊಟಕ್ಕೆ ಬಗೆ ಬಗೆಯ ತಿಂಡಿ ತಿನಸುಗಳು ತಯಾರಾಗುತ್ತವೆ. `ಮೂಡೆ' ಇದರಲ್ಲಿ ಪ್ರಮುಖವಾದದ್ದು, ಹಿಂದಿನ ಕಾಲದಲ್ಲಿ ಹಳ್ಳಿಯ ಮನೆಗಳಲ್ಲಿ ಮೂಡೆಯನ್ನು ಹೆಣೆಯುತ್ತಿದ್ದರು. ಈಗ ಇದು ವಾಣಿಜ್ಯೀಕರಣವಾಗಿದೆ. ಮೂಡೆ ಕಟ್ಟಿ ಮಾರಾಟ ಮಾಡುವುದು ಕೆಲವರ ಕಾಯಕವಾಗಿದೆ. ಮಾರುಕಟ್ಟೆಗಳಲ್ಲಿ ಹತ್ತು ರೂಪಾಯಿಗೆ ಎರಡು ಅಥವಾ ಮೂರು ಮೂಡೆಗಳು ಸಿಗುತ್ತವೆ. ಹಲಸಿನ ಎಲೆಯಿಂದ ಮಾಡಿದ `ಗುಂಡ' ಅಥವಾ `ಕೊಟ್ಟಿಗೆ'ಯಲ್ಲಿ ಅಕ್ಕಿಯ ಹಿಟ್ಟು ಹಾಕಿ ಬೇಯಿಸಿದ ತಿಂಡಿಯನ್ನು ಈ ದಿನ ಮಾಡುತ್ತಾರೆ. `ಸೇಮೆದಡ್ಡೆ', ಹಾಲು ಅಥವಾ ಪಾಯಸವನ್ನು ಸಿಹಿತಿನಿಸಾಗಿ ಮಾಡಲಾಗುತ್ತದೆ. ಹೆಚ್ಚಿನ ಬ್ರಾಹ್ಮಣರ ಮನೆಯಲ್ಲಿ ಉಂಡೆ, ಚಕ್ಕುಲಿ, ಕೋಡು ಬಳೆ ಮುಂತಾದವುಗಳನ್ನು ಮಾಡುತ್ತಾರೆ. ಇದೆಲ್ಲವನ್ನೂ ಮಾಡಿಟ್ಟುಕೊಂಡು ವ್ರತ ಮುಕ್ತಾಯದ ಅವಧಿಯಾದ ಚಂದ್ರೋದಯವನ್ನು ಕಾದು ಕುಳಿತುಕೊಳ್ಳುತ್ತಾರೆ.
ಇತ್ತೀಚಿಗಿನ ದಿನಗಳಲ್ಲಿ ಟಿ.ವಿ ಮುಂತಾದ ಆಧುನಿಕ ಉಪಕರಣಗಳಿಂದಾಗಿ ಜನರು ಮಲಗುವುದೇ ತಡವಾಗಿ. ಟಿ.ವಿಯಲ್ಲಿ ಪ್ರಸಾರವಾಗುವ ಅಷ್ಟಮಿ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳನ್ನು ನೋಡುತ್ತಾ ಕುಳಿತರೆ ಚಂದ್ರೋದಯವಾಗುವುದೇ ಗೊತ್ತಾಗುವುದಿಲ್ಲ. ಹಿಂದಿನ ಕಾಲದ ತುಳುನಾಡಿನಲ್ಲಿ ರಾತ್ರಿ ಕಾಲದಲ್ಲಿ ಬೇಗನೆ ಮಲಗಿ ಬೆಳಗ್ಗೆ ಬೇಗ ಏಳುವುದು ರೂಢಿಯಾಗಿತ್ತು. ಆ ಸಂದರ್ಭದಲ್ಲಿ ಚಂದ್ರೋದಯದವರೆಗೆ ಕಾಯುವುದು ಎಂದರೆ ತುಸು ಕಷ್ಟದ ಕೆಲಸವಾಗಿತ್ತು, ಹಸಿವು ಮತ್ತು ನಿದ್ದೆ ಕಾಡುತ್ತಿತ್ತು. ಇವುಗಳನ್ನು ಹೊಡೆದೋಡಿಸಲು ಭಜನೆ ನಡೆಸುತ್ತಿದ್ದರು. ಇಲ್ಲವಾದಲ್ಲಿ ಮನೆಯ ಹಿರಿಯರು ಸೇರಿ ಚೆನ್ನೆಮಣೆ ಆಟಕ್ಕೆ ರಂಗೇರಿಸುತ್ತಿದ್ದರು. ಕೆಲವರು ಇಸ್ಪೀಟು ಆಟಕ್ಕೂ ಮೊರೆಹೋಗುತ್ತಿದ್ದುದುಂಟು. ರಾತ್ರಿ ಚಂದ್ರ ಕಾಣಿಸಿಕೊಂಡಾಗ ಮನೆಯ ತುಳಸಿಕಟ್ಟೆಯ ಮುಂದೆ ಅಘ್ರ್ಯ ಸಮಪರ್ಿಸಿ ದೈವ-ದೇವರುಗಳಿಗೆ ಬಡಿಸಿ ಉಪವಾಸವನ್ನು ಕೊನೆಗೊಳಿಸಲಾಗುತ್ತಿತ್ತು.
ಮರುದಿನ `ದ್ವಾದಶಿ'(?). ಯಾವಾಗಲೂ ಏಕಾದಶಿಯ ದಿನ ಮರುದಿನ ದ್ವಾದಶಿ ಬಂದರೆ. ಶ್ರೀಕೃಷ್ಣ ಜನ್ಮಾಷ್ಟಮಿಯ ಮರುದಿನವನ್ನು ತುಳುನಾಡಿನಲ್ಲಿ `ದ್ವಾದೇಸಿ' ಎಂದೇ ಕರೆಯುತ್ತಾರೆ. ಅಷ್ಟಮಿಯ ದಿನ ಉಪವಾಸ ಆದುದರಿಂದ ಆ ದಿನ ಏಕಾದಶಿ ಹಾಗಿರುವಾಗ ಅದರ ಮರುದಿನ ದ್ವಾದಶಿ ಆಗಬೇಕಲ್ಲವೇ?. ಈ ದಿನ ಮಧ್ಯಾನ್ನ ಭೂರಿ ಭೋಜನ. ಕೆಲವು ಕಡೆ ಮಾಂಸದ ಊಟವನ್ನೂ ಮಾಡುತ್ತಾರೆ. ಮನೆಯಲ್ಲಿ ಮಾಡಿದ ತಿಂಡಿ ತಿನಸುಗಳನ್ನು ಇತರ ಧರ್ಮದ ಮನೆಗಳಿಗೂ ಹಂಚಿ ಸೌಹಾರ್ದ ಮೆರೆಯುತ್ತಾರೆ.
ಊಟವಾದ ನಂತರ ಊರಿನ ಪ್ರಮುಖ ಕೇಂದ್ರದಲ್ಲಿ ನಡೆಯುವ `ಮೊಸರು ಕುಡಿಕೆ' ಉತ್ಸವಕ್ಕೆ ಹೋಗಲೇ ಬೇಕು. ಅಲ್ಲಿ ನಡೆಯುವ ಮನರಂಜನೆಯಲ್ಲಿ ಪಾಲ್ಗೊಳ್ಳು ಉತ್ಸಾಹ ಪ್ರತಿಯೊಬ್ಬರಲ್ಲಿಯೂ ಇರುತ್ತದೆ. ಮಳೆಗಾಲದಲ್ಲಿ ಯಾವುದೇ ಸಾರ್ವಜನಿಕ ಮನರಂಜನೆ ಕಾರ್ಯಕ್ರಮಗಳು ಇರದೇ ಇದ್ದ ಕಾರಣ ಮೊಸರು ಕುಡಿಕೆ ಉತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಾರೆ.
ಹಿಂದಿನ ಕಾಲದಲ್ಲಿ ಮಧ್ಯಾಹ್ನ ಊಟವಾದ ನಂತರ ಊರಿನ ಯುವಕರು ಸೇರಿಕೊಂಡು `ಮಸುಲುಡಿಕೆ' (ಮೊಸರು ಕುಡಿಕೆ) ಆಚರಿಸುತ್ತಿದ್ದರು. ಸಾಹಸದ ಆಟಗಳನ್ನು ಆಡುತ್ತಿದ್ದರು, ತಪ್ಪಂಗಾಯಿ, ಹಗ್ಗ ಎಳೆಯುವುದು ಮುಂತಾದ ಕ್ರೀಡೆಗಳನ್ನು ಆಡುತ್ತಿದ್ದರು. ಗೆದ್ದವರಿಗೆ ಬಾಳೆ ಹಣ್ಣು, ಸೀಯಾಳದ ಬಹುಮಾನ ಸಿಗುತ್ತಿತ್ತು. ಎತ್ತರ ಪ್ರದೇಶದಲ್ಲಿ ನೇತಾಡಿಸಿದ ಮೊಸರಿನ ಗಡಿಗೆಯನ್ನು ಕಣ್ಣಿಗೆ ಬಟ್ಟೆ ಕಟ್ಟಿ ಒಡೆಯುವುದು. ಎತ್ತರವಾದ ಅಡಿಕೆ ಮರದ ತುದಿಯಲ್ಲಿ ಕಟ್ಟಿದ ನಿಧಿಯನ್ನು ತೆಗೆಯುವುದು ಮುಂತಾದ ಸಾಹಸ ಪ್ರದರ್ಶನವಾಗುತ್ತಿತ್ತು, ಕೆಲವು ಪ್ರದೇಶಗಳಲ್ಲಿ ನಡೆಯುತ್ತಿದ್ದ ಇಂತಹಾ ಕಾರ್ಯಕ್ರಮಗಳ ತಾಜಾತನದ ಸಂಭ್ರಮವನ್ನು ಈಗಲೂ ಹಿರಿಯರು ಮೆಲುಕು ಹಾಕುತ್ತಾರೆ. ಈಗೀಗ ಗ್ರೀಸ್ ಸವರಿದ ಕಂಬ ಹತ್ತುವ ಅಪಾಯಕಾರಿ ಆಟದಿಂದ ಕೆಲವರು ಸೊಂಟ ಮುರಿದುಕೊಳ್ಳುತ್ತಿದ್ದಾರೆ. ಹಿಂದಿನ ಕಾಲದಲ್ಲಿ ಊರಿನ ಯುವಕರೇ ಸೇರಿಕೊಂಡು ಮಾದಿರ ಕುಣಿತ, ಹುಲಿ, ಕರಡಿ ಕುಣಿತ, ನಾಟಕ ಮುಂತಾದ ಮನರಂಜನಾ ಕಾರ್ಯಕ್ರಮಗಳನ್ನು ಮಾಡುತ್ತಿದ್ದರೆ ಈಗ ನಾಟಕ ತಂಡಗಳನ್ನು ಕರೆಸಿ ನಾಟಕ, ರಸಮಂಜರಿ ಮುಂತಾದ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಶ್ರೀಕೃಷ್ಣ ವೇಷ ಸ್ಪಧರ್ೆ ಎಲ್ಲೆಡೆ ನಡೆಯುತ್ತಿದೆ.
ತೆಂಗಿನ ಕಾಯಿಗಳನ್ನು ಪರಸ್ಪರ ಘರ್ಷಣೆ ಮಾಡುವ `ತಾರಾಯಿದ ಕಟ್ಟ' ಎಂಬ ತುಳು ಜಾನಪದ ಕ್ರೀಡೆ ಅಷ್ಟಮಿಯ ದಿನಗಳಲ್ಲಿ ನಡೆಯುತ್ತದೆ. ಇದೊಂದು ಜಾನಪದ ಕ್ರೀಡೆಯಾದರೂ ಈ ಆಟದ ಮೇಲೆ ಜೂಜು ಕಟ್ಟಿ ಅಷ್ಟಮಿಯಂತಹಾ ಶುಭ ಸಂದರ್ಭದಲ್ಲಿ ಕಿಸೆ ಖಾಲಿ ಮಾಡಿಕೊಳ್ಳುವ ಪ್ರವೃತ್ತಿಯೂ ಕೆಲವರಿಗೆ ಇರುತ್ತದೆ. ಜೂಜಾಡುವವರಿಗೆ ಸುಖ-ದುಃಖಗಳ ಪರಿವೆಯೇ ಇರುವುದಿಲ್ಲ.

ಬಾಯಲ್ಲಿ ನೀರೂರಿಸುವ ಕಳೆಗಿಡ


`ಪತ್ರೊಡೆ' ಎಂದು ಅಂತಜರ್ಾಲದಲ್ಲಿ ಶೋಧಿಸಿದರೆ ಸಾವಿರಾರು ಸೈಟ್ಗಳು, ಚಿತ್ರಗಳು ತೆರೆದುಕೊಳ್ಳುತ್ತವೆ. ತುಳುನಾಡಿನಲ್ಲಿ ಪ್ರಖ್ಯಾತವಾದ, ಇಲ್ಲಿನ ಪ್ರತಿಯೊಂದು ಮನೆಯವರೂ ವರ್ಷಕ್ಕೊಂದು ಬಾರಿ ಮನೆಯಲ್ಲಿ ತಪ್ಪದೆ ಮಾಡುವ `ತುಳುನಾಡಿನ ತಿಂಡಿ' ಅಷ್ಟೂ ಪ್ರಸಿದ್ಧವಾಗಿದೆ.
ಈ ಪತ್ರೊಡೆಗೆ ಪ್ರಮುಖವಾಗಿ ಬಳಸಲಾಗುವ `ತೇವು' ಅಂದರೆ ಕೆಸು ಮಳೆ ಬಿದ್ದಾಗ ನೀರು, ಕೆಸರು ನಿಲ್ಲುವ ಜಾಗದಲ್ಲಿ ಸೊಕ್ಕಿ ಬೆಳೆಯುವ ಕಳೆಗಿಡ ಎಂದು ಹೇಳಿದರೆ ನಾವು ಮನಸ್ಸಿನಲ್ಲಿ `ಹೌದು' ಎಂದು ಅಂದುಕೊಂಡರೂ, ಪತ್ರೊಡೆಯ ರುಚಿಯ ಅರಿವಿರುವವರು ಬಹಿರಂಗವಾಗಿ ಕೆಸುವಿನ ಘನತೆಗೆ ಕುಂದುಂಟು ಮಾಡಲು ಬಯಸುವುದಿಲ್ಲ.
ಪತ್ರೊಡೆಗೆ ಬಳಸುವ ಕೆಸುವನ್ನು ಸಾಮಾನ್ಯವಾಗಿ ತೋಟದಿಂದ, ಗದ್ದೆಯ ಬದಿಯಿಂದ, ನೀರು ಹರಿದು ಹೋಗುವ ತೋಡಿನ ಎಡೆಯಿಂದ, ಕೆಲವೊಮ್ಮೆ ಕೊಳಚೆ ಗುಂಡಿಯಿಂದಲೂ ಆಯ್ದು ತೆಗೆಯುತ್ತೇವೆ. ಮನೆಯ ಅಕ್ಕಪಕ್ಕದಿಂದ ನಾವೇ ಕೆಸುವನ್ನು ಆರಿಸಲು ಪ್ರಯತ್ನಿಸಿದರೆ ಸಾಮಾನ್ಯವಾಗಿ `ಉತ್ತಮ' ಜಾಗ ಎಂದು ಮನಸ್ಸಿಗನಿಸಿದ ಕಡೆಯಿಂದ ಕೆಸು ಎಲೆಗಳನ್ನು ಕಿತ್ತು ತರುತ್ತೇವೆ. ಆದರೆ ಮಾರುಕಟ್ಟೆಯಲ್ಲಿ ಮಾರಾಟವಾಗುವ ಕೆಸು ಎಲ್ಲಿ ಬೆಳೆದಿರುವಂತದ್ದು ಎಂಬ ಮೂಲವನ್ನು ಹುಡುಕಲು ಖಂಡಿತವಾಗಿಯೂ ಹೋಗುವುದಿಲ್ಲ. ಪೇಟೆ ಪಟ್ಟಣಗಳಲ್ಲಿ ಹೂ ಕುಂಡಗಳಲ್ಲಿ ಇತ್ತೀಚೆಗೆ ಕೆಸುವನ್ನು ಬೆಳೆಸುವ ಪರಿಪಾಠ ಆರಂಭವಾಗಿದ್ದರೂ ಅದರಿಂದ ಮಾಡಿದ ಪತ್ರೊಡೆ ಅಷ್ಟು ರುಚಿ ಎನಿಸದು. ಚೆನ್ನಾಗಿ ಬಲಿತ ತಾಜಾ ಕೆಸುವಿನ ಪತ್ರೊಡೆಯ ರುಚಿಯೇ ಬೇರೆ ರೀತಿಯದ್ದಾಗಿರುತ್ತದೆ. ಈ ರೀತಿಯ ಕೆಸು ಸಿಗಬೇಕಾದರೆ ಕೈಕಾಲುಗಳಿಗೆ ಕೆಸರು ಮೆತ್ತಿಸಿಕೊಳ್ಳಲೇ ಬೇಕು.
ಆಹಾರಕ್ಕಾಗಿ ಬಳಸುವ ಇತರ ಎಲ್ಲಾ ತರಕಾರಿ ಸೊಪ್ಪು ಸದೆಗಳ ಕೃಷಿಗಳ ಬಗ್ಗೆ ವಿವಿಧ ಮೂಲಗಳಿಂದ ನಮಗೆ ಮಾಹಿತಿ ಸಿಕ್ಕಿದರೂ `ಕೆಸುವಿನ ಕೃಷಿ' ಎಂಬ ಮಾತು ನಮ್ಮಲ್ಲಿ ಇನ್ನೂ ಬಳಕೆಗೆ ಬಂದಿಲ್ಲ. ಮನೆಯ ಮುಂದೆ ಸೌಂದರ್ಯಕ್ಕಾಗಿ ಬಣ್ಣ ಬಣ್ಣದ ಕೆಸುವಿನ ಗಿಡಗಳನ್ನು ನೆಟ್ಟು ಮನೆಯ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವುದು ಕಂಡು ಬರುತ್ತದೆ. ಆದರೆ ಹಸಿರು ಬಿಟ್ಟು ಅದರ ಮೇಲೆ ಒಂದೇ ಒಂದು ಬಣ್ಣದ ಚುಕ್ಕೆ ಇದ್ದರೂ ಅಂತಹಾ ಕೆಸು ಪತ್ರೊಡೆಗೆ ಯೋಗ್ಯವೆನಿಸುವುದಿಲ್ಲ.
ಪತ್ರೊಡೆಯಲ್ಲಿ ಕೆಸುವಿನ ಎಲೆಯನ್ನು ಮಾತ್ರ ಬಳಸಲಾಗುತ್ತದೆ. ಅದರ ದಂಡನ್ನು ಬಳಸಲಾಗುವುದಿಲ್ಲ. ಹಾಗಿರುವಾಗ ಕೆಸುವಿನ ಎಲೆಯಲ್ಲಿ ಯಾವುದೇ ದೋಷ ಇಲ್ಲ, ಯಾವ ಪ್ರದೇಶದಲ್ಲೂ ಬೆಳೆದ ಕೆಸುವಿನ ಎಲೆಯನ್ನು ಮಾತ್ರ ಉಪಯೋಗಿಸಬಹುದು ಎಂದು ಕೆಲವರು ಸುಮ್ಮನೆ ಸಬೂಬು ಹೇಳುವುದುಂಟು. ಇದು ಮಾನಸಿಕ ಸಮಾಧಾನಕ್ಕಾದರೂ ಎಲೆಗೆ ಯಾಕೆ ದೋಷ ಇಲ್ಲ ಎಂದು ಪ್ರಶ್ನಿಸಿದರೆ ಬರುವ ಉತ್ತರ ತುಂಬಾ ಸ್ವಾರಸ್ಯಕರ. `ಸಂಸಾರದಲ್ಲಿ ಕಮಲದೆಲೆಯಂತೆ ಇರಬೇಕು' ಎಂಬ ಸಾಹಿತ್ಯಿಕ ಮಾತು ಕೂಡಾ ಇಲ್ಲಿ ನೆನಪಿಗೆ ಬರುತ್ತದೆ. ಕಮಲದ ಎಲೆ ಸದಾ ನೀರಿನ ಮೇಲೆ ಇದ್ದರೂ ಒಂದೇ ಒಂದು ನೀರ ಹನಿಯೂ ಅದಕ್ಕೆ ಅಂಟಿರುವುದಿಲ್ಲ. ಎಲೆಯ ಮೇಲೆ ಬಿದ್ದ ನೀರು ಹಾಗೇ ಬಿಂದು ಬಿಂದುಗಳಾಗಿ ಜಾರಿ ಹೋಗುತ್ತದೆ. ಹಾಗೆ ಸಂಸಾರದಲ್ಲಿ ನಾವು ಇದ್ದರೂ ಇಲ್ಲದಂತಿರಬೇಕು ಎಂದು ಹೇಳಲಾಗುತ್ತಿದೆ. ಹಾಗೆಯೇ ಕೆಸುವಿನ ಎಲೆಯ ಮೇಲೂ ನೀರು ನಿಲ್ಲುವುದಿಲ್ಲ. ಹರಿದು ಹೋಗುತ್ತದೆ. ಹಾಗಿರುವಾಗ ಅದರ ಬುಡದಲ್ಲಿರುವ ಕೊಳಚೆ, ಕೊಚ್ಚೆಯ ಸಂಪರ್ಕ ಎಲೆಗೆ ಇರುವುದಿಲ್ಲ ಎಂದು ಹೇಳುತ್ತಾರೆ. ಆದರೆ ಕೆಲವು ಭಾಗದಲ್ಲಿ ಬೆಳೆದ ಕೆಸುವಿಗೆ ಕೈ ಹಾಕಿದರೆ ದಿನವಿಡೀ ಕೈ ತುರಿಸಿಕೊಳ್ಳಬೇಕಾಗುತ್ತದೆ.
ತುಳುನಾಡಿನಲ್ಲಿ ಕೆಸುವಿನ ಜತೆ `ತೊಜಂಕ್ ಮತ್ತು ಇತರ ಕೆಲವು ಗಿಡಗಳ ಎಲೆಗಳನ್ನೂ ಪತ್ರೊಡೆ ಮಾಡುವಾಗ ಬಳಸುತ್ತಾರೆ. ಆದರೆ ಇದು ಯಾವುದೂ ನೆಟ್ಟು ಬೆಳೆಸಿದ ಗಿಡಗಳಲ್ಲ. ಕಳೆಗಿಡಗಳೇ. ತೋಟದ ಕಳೆ ಕೀಳುವಾಗ, ಅಂಗಳ ರಿಪೇರಿ ಮಾಡುವಾಗ, ಕಾಲುದಾರಿಯ ಬದಿಯನ್ನು ಸವರುವಾಗ ತೇವು - ತೊಜಂಕಿಗೆ ಎಳ್ಳಷ್ಟೂ ಮರ್ಯಾದೆ ಇರುವುದಿಲ್ಲ. ಇತರ ಕಳೆಗಿಡಗಳೊಂದಿಗೆ ಸೇರಿಕೊಂಡು ತಿಪ್ಪೆ ಸೇರುತ್ತವೆ.

Tuesday, January 26, 2010

ಗ್ರಹಣದೋಷ ತಡೆಗೆ ಕದಿಕೆ



ಗ್ರಹಣದ ದಿನ ಆಸ್ತಿಕರು ಉಪವಾಸ ಮಾಡುತ್ತಾರೆ. ಗ್ರಹಣ ಸಂಭವಿಸುವ ಹೊತ್ತಿನಲ್ಲಿ ಮನೆಯಲ್ಲಿ ಯಾವ ಆಹಾರವನ್ನೂ ತಯಾರಿಸಬಾರದು, ಅನ್ನ, ಪದಾರ್ಥದ ಪಾತ್ರೆಗಳು ಖಾಲಿಯಾಗಿ ಕವಚಿ ಹಾಕಿರಬೇಕು ಎಂಬ ಅಭಿಪ್ರಾಯವಿದ್ದು ಕೆಲವು ಮನೆಗಲ್ಲಿ ಚಾಚೂ ತಪ್ಪದೆ ಈ ಪದ್ಧತಿಯನ್ನು ಪಾಲಿಸುತ್ತಾರೆ. ಆಹಾರ ಪದಾರ್ಥಗಳೇನಾದರೂ ಇದ್ದರೆ ಅದಕ್ಕೆ ಗ್ರಹಣ ದೋಷ ಉಂಟಾಗಿ, ಅದನ್ನು ಉಪಯೋಗಿಸಿದರೆ ಆರೋಗ್ಯಕ್ಕೆ ಹಾನಿಯುಂಟಾಗುತ್ತದೆ ಎಂಬ ಭಾವನೆ ಇದೆ.
ದಿನನಿತ್ಯ ತಯಾರಿಸುವ ಅಹಾರ ಪದಾರ್ಥಗಳನ್ನೇನೂ ಖಾಲಿ ಮಾಡಬಹುದು ಆದರೆ ಹಾಲು, ಮೊಸರು, ನೀರು ಮುಂತಾದ ಅತೀ ಅವಶ್ಯ ವಸ್ತುಗಳಿಗೆ ಗ್ರಹಣ ದೋಷ ಉಂಟಾಗದಂತೆ ಮಾಡುವ ಉಪಾಯವೇನು? ತುಳು ನಾಡಿನ ಹಳ್ಳಿ ಹಳ್ಳಿಯ ಮನೆಯೊಡತಿಯರಿಗೂ ಈ ಉಪಾಯ ಚೆನ್ನಾಗಿ ಗೊತ್ತಿದೆ. ಅಂಗಳದಲ್ಲಿ, ಗದ್ದೆಯ ಹುಣಿಯಲ್ಲಿ, ತೋಟದಲ್ಲಿ ಬೆಳೆದ ಕದಿಕೆಯನ್ನು ಹರಿದು ತಂದು ಸಣ್ಣ, ಸಣ್ಣ ಕಟ್ಟುಗಳನ್ನಾಗಿ ಮಾಡಿ ಹಾಲು, ಮೊಸರು, ನೀರು ಮತ್ತು ಮಿಕ್ಕುಳಿದ ಆಹಾರ ಪದಾರ್ಥಗಳಲ್ಲಿ ಹಾಕುತ್ತಾರೆ. ಕೈತುಂಬಾ ಗರಿಕೆಯನ್ನು ಹಿಡಿದು ಕೊಂಡರೆ ಗ್ರಹಣ ಕಾಲದಲ್ಲಿ ಗಭರ್ಿಣಿ ಮಹಿಳೆಯರಿಗೆ ಗ್ರಹಣ ದೋಷವಾಗುವುದಿಲ್ಲ ಎಂಬ ಭಾವನೆಯೂ ಇದೆ.
ತುಳು ನಾಡಿನ ಹಳ್ಳಿಗಳಲ್ಲಿ ಕದಿಕೆ ಧಾರಾಳವಾಗಿ ಸಿಗುತ್ತದೆ. ಗಣಪತಿಗೂ ಇದು ಬಲು ಪ್ರಿಯ. ಕದಿಕೆ ಆಯುವರ್ೇದ ಔಷಧಿಯಾಗಿಯೂ ಉಪಯೋಗಿಸಲ್ಪಡುತ್ತದೆ. ಗರಿಕೆಯ ಜ್ಯೂಸ್ ನಿದರ್ಿಷ್ಟವಾದ ರೋಗಗಳಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ. ಪೂಜೆ ಪುನಸ್ಕಾರಗಳಲ್ಲಿ ಕದಿಕೆಗೆ ಪ್ರಮುಖ ಸ್ಥಾನವಿದೆ.
ಗ್ರಹಣ ಸಂದರ್ಭದಲ್ಲಿ ಆಹಾರ ಸೇವಿಸಬಾರದು ಎಂಬುದಕ್ಕೆ ವೈಜ್ಞಾನಿಕ ಕಾರಣಗಳಿಲ್ಲ ಎಂದು ಹೇಳಲಾಗುತ್ತದೆ. ಗ್ರಹಣ ಎಂಬುದು ಖಗೋಳ ಕೌತುಕ ಅದನ್ನು ಮೂಢನಂಬಿಕೆಯಿಂದ ನೋಡಬಾರದು. ಆ ದಿನ ಗ್ರಹಣವನ್ನು ನೋಡುತ್ತಾ `ಎಂಜಾಯ್' ಮಾಡಬೇಕು ಎಂದು ಕೆಲವರು ಅಭಿಪ್ರಾಯಪಡುತ್ತಾರೆ. ಗ್ರಹಣ ಸಂದರ್ಭದಲ್ಲಿ ಸಾಮೂಹಿಕ ಭೋಜನ ಏರ್ಪಡಿಸಿ ಆ ಸಂಧರ್ಭದಲ್ಲಿ ಆಹಾರ ಸೇವಿಸಬಾರದು ಎಂದು ಹೇಳುವುದು ಮೂಢನಂಬಿಕೆ ಊಟ ಮಾಡಿದರೆ ಏನೂ ಆಗುವುದಿಲ್ಲ ಎಂದು ಕೆಲವರು ಸಾಬೀತುಪಡಿಸಲು ಪ್ರಯತ್ನಸುತ್ತಾರೆ.
ಗ್ರಹಣ ಸಂದರ್ಭ ಎಂಬುವುದು ಪವಿತ್ರವಾದ ಪರ್ವಕಾಲ ಈ ಕಾಲದಲ್ಲಿ ನಾವು ಒಳ್ಳೆಯ ಕಾರ್ಯಗಳನ್ನು ಮಾಡಬೇಕು. ಉಪವಾಸವಿದ್ದು ದೇವರ ಸ್ತುತಿಯಲ್ಲಿ ಕಾಲ ಕಳೆಯಬೇಕು. ಇಲ್ಲ ಸಲ್ಲದ ಮೋಜಿನಲ್ಲಿ ಕಳೆಯಬಾರದು ಎಂಬ ಅಭಿಪ್ರಾಯವನ್ನೂ ಆಸ್ತಿಕ ಬಾಂಧವರು ಹೊಂದಿದ್ದಾರೆ. ಗ್ರಹಣ ಎಂಬುದು ಕೆಟ್ಟದ್ದು, ಅಂದು ಅನಿಷ್ಠ ಸಂಭವಿಸುತ್ತದೆ ಎಂದು ಭೀತಿಯಿಂದ ಮನೆಯೊಳಗೇ ಕಾಲ ಕಳೆಯುವವರೂ ಇದ್ದಾರೆ. ಮಾಟ, ಮಂತ್ರ, ಸಾಧನೆ, ಸಿದ್ದಿಗಾಗಿ ಈ ದಿನವನ್ನೂ ಕೆಲವರು ಆರಿಸಿಕೊಳ್ಳುತ್ತಾರೆ.
ಇದೆಲ್ಲಾ ಅವರವರ ಭಾವ, ಭಕ್ತಿಗಳಿಗಾಯಿತು. ತುಳುನಾಡಿನ ಹೆಂಗಳೆಯರು ಕದಿಕೆಯಿಂದ ಗ್ರಹಣ ದೋಷವಾಗದಂತೆ ರಕ್ಷಣೆ ಪಡೆಯುವುದರಲ್ಲಿ ಏನಾದರೂ ವೈಜ್ಞಾನಿಕ ಕಾರಣಗಳಿವೆಯೇ? ಈ ಸಂದರ್ಭದಲ್ಲಿ ಒಂದು ಘಟನೆ ಓದಿದ ನೆನಪು ಬರುತ್ತಿದೆ. ಭಾರತ ಸರಕಾರವು 1998 ರಲ್ಲಿ ಪೋಖ್ರಾನ್ನಲ್ಲಿ ಅಣುಬಾಂಬು ಪರೀಕ್ಷೆ ನಡೆಸಿತು. ನೂರಾರು ಮೀಟರ್ ಆಳದ ಹೊಂಡ ತೋಡುವ ಕೆಲಸ, ಮಿಲಿಟರಿ ವಾಹನಗಳ ಹರಿದಾಟ, ವಿಜ್ಞಾನಿಗಳ ಓಡಾಟ ಎಲ್ಲವನ್ನೂ ಅಮೆರಿಕದ ಗೂಢಾಚಾರ ಉಪಗ್ರಹದ ಹದ್ದುಗಣ್ಣಿನಿಂದ ಯಾವುದೇ ಸಂಶಯ ಬಾರದ ರೀತಿಯಲ್ಲಿ ತಪ್ಪಿಸಿಕೊಂಡು ಪ್ರಯೋಗ ಯಶಸ್ಸು ಪಡೆಯಿತು. ಹಾಗಾದರೆ ಉಪಗ್ರಹದ ಕಣ್ಣಿಗೆ ಮಣ್ಣೆರೆಚಿದ, ಚಟುವಟಿಕೆಗಳನ್ನು ಮರೆಮಾಚಿದ ಅಂಶವಾದರೂ ಯಾವುದು ಎಂದರೆ... ಹುಲ್ಲು!.
ಪೋಖ್ರಾನ್ನ ಪ್ರತಿಯೊಂದು ಚಟುವಟಿಕೆಯೂ `ಥ್ಯಾಚ್ಡ್ರೂಫ್' ಅಂದರೆ ಹುಲ್ಲಿನ ಮರೆಯಲ್ಲಿ ನಡೆಯಿತು. ಅಣುಪರೀಕ್ಷೆಯ ಹೊಂಡಕ್ಕೆ ಹುಲ್ಲಿನ ಚಪ್ಪರ, ಓಡಾಡುವ ಮಿಲಿಟರಿ ವಾಹನಗಳ ಮೇಲೆ ಹುಲ್ಲಿನ ಛಾವಣಿ! ಹುಲ್ಲಿನ ಮರೆಯಲ್ಲಿ ನಡೆಯುವ ಚಟುವಟಿಕೆಗಳನ್ನು ಉಪಗ್ರಹದ ಕಣ್ಣು ಪತ್ತೆಹಚ್ಚದು ಎಂಬುದನ್ನು ಭಾರತೀಯರ ಕಂಡು ಕೊಂಡಿದ್ದರು!.
ಈಗ ಹೇಳಿ ಹುಲ್ಲು ಉಪಗ್ರಹದ ಕಣ್ಣು ತಪ್ಪಿಸಿದಂತೆ ಕದಿಕೆ ಎಂಬ ಪವಿತ್ರ ಹುಲ್ಲು ಗ್ರಹಣದೋಷವನ್ನು ತಪ್ಪಿಸದೇ? ನಾವು ಮೂಢನಂಬಿಕೆ ಎಂದು ಹೀಯಾಳಿಸುವ ಅಂಶಗಳಲ್ಲಿ ಸಂಶೋಧನೆಗೆ ಅರ್ಹವಾದ ವಿಚಾರಗಳು ಸಾಕಷ್ಟಿದೆ.

ಕಲ್ಲು, ಮುಳ್ಳು ಕಾಲಲಿ ಮೆಟ್ಟಿ... ಸ್ವಾಮಿಯೇ ಅಯ್ಯಪ್ಪಾ



ಎರಡು ಮೂರು ದಶಕಗಳ ಹಿಂದೆ ತುಳುನಾಡಿನ ಪ್ರಮುಖ ಪೇಟೆಗಳಲ್ಲಿ `ಕಲ್ಲುಂ, ಮುಳ್ಳುಂ ಕಾಲಿಗೆ ಮೆಟ್ಟಿ.... ಸ್ವಾಮಿಯೇ ಅಯ್ಯಪ್ಪ...' ಎಂಬ ಪಿ. ಕುಪ್ಪುಸ್ವಾಮಿ, ವೀರಮಣಿ ರಾಜು ಮತ್ತಿತರು ಸೇರಿ ಹಾಡಿದ ಕಂಚಿನ ಕಂಠದ ಹಾಡು ಲೌಡ್ ಸ್ಪೀಕರ್ಗಳಲ್ಲಿ ಕೇಳಿ ಬರುತ್ತಿದ್ದವು. ಇದು ಸುತ್ತಮುತ್ತಲಿನ ಹಲವಾರು ಹಳ್ಳಿಗಳಲ್ಲಿ ಪ್ರತಿಧ್ವನಿಸುತ್ತಿತ್ತು. ಮಧ್ಯಭಾಗದಲ್ಲಿ ಎತ್ತರವಾದ `ಕಂಗ್'ವೊಂದನ್ನು ನೆಟ್ಟು , ಸುತ್ತಲೂ ಕಾಣುವಂತೆ ಗೋಪುರಾಕೃತಿಯಲ್ಲಿ ಭದ್ರಾಸನ ಅಥವಾ ಹುಲಿಯನೇರಿ ಕುಳಿತ ಮೂರು ಅಯ್ಯಪ್ಪ ಸ್ವಾಮಿಯ ದೊಡ್ಡದಾದ ಭಾವಚಿತ್ರಗಳನ್ನು ಆಳೆತ್ತರದಲ್ಲಿ ಕಟ್ಟಿ, ಧೂಪ, ದೀಪ ಹಚ್ಚಿ, ಹೂಗಳಿಂದ ಅಲಂಕಾರ ಮಾಡಲಾಗುತ್ತಿತ್ತು. ಅದರ ಸುತ್ತಲೂ ಈಗಿನ 16ಗಜಗಳ ಕ್ರಿಕೆಟ್ ಟೂರ್ನಮೆಂಟಿನ ವೃತ್ತಾಕಾರದ ಮೈದಾನದ ಸುತ್ತಳತೆಯಷ್ಟು ಜಾಗದಲ್ಲಿ ಸುಡು ಬಿಸಿಲನ್ನೂ ಲೆಕ್ಕಿಸದೆ ವ್ಯಕ್ತಿಯೊಬ್ಬ ಸೈಕಲ್ ಸವಾರಿ ಮಾಡುತ್ತಾ ನಡುವಿನ ಕಂಬಕ್ಕೆ ಸತತವಾಗಿ ಸುತ್ತು ಬರುತ್ತಿದ್ದ. ಕಂಬಕ್ಕೆ ಕಟ್ಟಿದ್ದ ಮೈಕ್ಗಳು ಅಯ್ಯಪ್ಪ ಸ್ವಾಮಿಯ, ಸ್ಥಳೀಯರಿಗೆ ಅರ್ಥವಾಗದ ಆದರೆ ಅಂದಾಜು ಆಗುವ ತಮಿಳು - ಮಲೆಯಾಳಿ ಭಕ್ತಿ ಗೀತೆಗಳನ್ನು ಹಾಡುತ್ತಿದ್ದವು. ತುಳುನಾಡಿನ ಮಂದಿ ಅಯ್ಯಪ್ಪ ಸ್ವಾಮಿಯ ಬಗ್ಗೆ ಕುತೂಹಲಗೊಂಡು ವಿಚಾರಿಸುತ್ತಿದ್ದರು. ಶಬರಿಮಲೆ ಸನ್ನಿಧಾನಕ್ಕೆ ಹೋಗಿ ಬರುವ ಕಷ್ಟ ಕಾರ್ಪಣ್ಯ, ವೃತ ನಿಯಮಾಧಿಗಳ ಬಗ್ಗೆ ಅಚ್ಚರಿ ವ್ಯಕ್ತಪಡಿಸುತ್ತಿದ್ದರು. ಕರಿಬಟ್ಟೆ ಉಟ್ಟ ಅಯ್ಯಪ್ಪ ವೃತಧಾರಿ ಸೈಕಲ್ ಬ್ಯಾಲೆನ್ಸ್ ಮಾಡುವ ವ್ಯಕ್ತಿ ನಿಗದಿಪಡಿಸಿದ ದಿನಗಳ ವರೆಗೆ ನೆಲವನ್ನು ಮುಟ್ಟಬಾರದು, ರಾತ್ರಿ ಹಗಲು ಸೈಕಲ್ ಬಿಟ್ಟು ಇಳಿಯಬಾರದು ಎಂಬ ನಿಯಮಗಳಿದ್ದವು. ಕೆಲವರು ಮಧ್ಯರಾತ್ರಿಯ ಹೊತ್ತಿಗೆ ಸೈಕಲಿಂದ ಇಳಿದಿದ್ದಾನೋ ಇಲ್ಲವೋ ಎಂದು ಇಣುಕಿ ನೋಡಿದಾಗಲೂ ಆತ ಸೈಕಲ್ ಮೆಟ್ಟುತ್ತಾ ಗಾಣದೆತ್ತಿನಂತೆ ಸುತ್ತುತ್ತಲೇ ಇರುತ್ತಿದ್ದ.
ಅಯ್ಯಪ್ಪ ವ್ರತಧಾರಿಯು ಸಣ್ಣ ಪುಟ್ಟ ಸರ್ಕಸ್ಗಳೊಂದಿಗೆ, ಟ್ಯೂಬ್ಲೈಟ್ ಒಡೆಯುವುದು, ತಿನ್ನುವುದು, ಹಲ್ಲಿನಿಂದ ಕಾರು ಬಸ್ಸುಗಳನ್ನು ಎಳೆಯುವುದು, ಹೊಂಡದೊಳಗೆ ಗಂಟೆಗಟ್ಟಲೆ ಉಸಿರುಕಟ್ಟಿ ಕುಳಿತುಕೊಳ್ಳುವುದು ಮುಂತಾದ ಕಠಿಣವಾದ ಸಾಹಸಗಳನ್ನೂ ಮಾಡುತ್ತಿದ್ದ. ಅಯ್ಯಪ್ಪಸ್ವಾಮಿಯ ದಯೆಯಿಂದ ಎಲ್ಲವೂ ಸುಸೂತ್ರವಾಗುತ್ತಿತ್ತು.
ತುಳುನಾಡಿನಲ್ಲಿ ಈಗ ವ್ಯಾಪಕವಾಗಿ ಸಂಭ್ರಮಪೂರ್ವಕವಾಗಿ ನಡೆಯುವ ಮತ್ತು ತುಳುವರು ಉದ್ಯೋಗ ನಿಮಿತ್ತ ಹೋಗಿ ವಾಸಿಸುವ ಮುಂಬೈ, ದೆಹಲಿ, ಸಿಂಗಾಪುರ, ಗಲ್ಫ್ ರಾಜ್ಯಗಳಲ್ಲಿ ನಡೆಸುವ ಅಯ್ಯಪ್ಪ ಸ್ವಾಮಿಯ ಪೂಜೆಗಳಿಗೆ ಈ ಸೈಕಲ್ ಬ್ಯಾಲೆನ್ಸ್ ಮಂದಿಯೇ ಮೂಲ ಪುರುಷರು. ಇದಕ್ಕೆ ಅಂದು ಕೇಳುತ್ತಿದ್ದ, ಇಂದು ಇಲ್ಲದೆ ಪೂತರ್ಿಯಾಗದ `ಕಲ್ಲುಂ ಮುಲ್ಲುಂ ಕಾಲಿಗೆ ಮೆಟ್ಟ್ - ಸ್ವಾಮಿಯೇ ಅಯ್ಯಪ್ಪಾ' ಹಾಡೇ ಸಾಕ್ಷಿಯಾಗಿದೆ.
ಕಲ್ಲುಂ ಮುಳ್ಳುಂ ಹಾಡು ಇಲ್ಲಿನ ಜನರಿಗೆ ಸಾಧಾರಣವಾಗಿ ಅರ್ಥವಾಗುತ್ತಿದ್ದರೂ ಇಂದು ನಡೆಯುವ ಅಯ್ಯಪ್ಪ ಪೂಜೆಗಳಲ್ಲಿ ಹಾಕಲಾಗುವ ಹೊಸ ಹೊಸ ತಮಿಳು - ಮಲೆಯಾಳೆ ಭಾಷೆಯ ಹಾಡುಗಳು ಇಲ್ಲಿನ ಜನರಿಗೆ ಎಷ್ಟು ಅರ್ಥವಾಗುತ್ತದೆ ಎಂಬುದು ಪ್ರಮುಖವಾದ ಪ್ರಶ್ನೆ. ತಮಿಳಿನ `ಕಲ್ಲುಂ ಮುಳ್ಳುಂ ಕಾಲಿಗೆ ಮೆಟ್ಟ್' ಬದಲಿಗೆ ಕನ್ನಡ ಭಾಷೆಯಲ್ಲಿ `ಕಲ್ಲನು ಮುಳ್ಳನು ಕಾಲಲಿ ತುಳಿದು - ಸ್ವಾಮಿಯೇ ಅಯ್ಯಪ್ಪಾ' ಎಂಬ ಹಾಡು ಕೆಲವು ಕಡೆ ಕೇಳಿಬರುತ್ತಿದೆ. ಅಯ್ಯಪ್ಪ ಸ್ವಾಮಿಯ ಪೂಜೆ ತಮಿಳು - ಮಲೆಯಾಳಿ ಹಾಡಿನಿಂದಲೇ ಸಾರ್ಥಕತೆಯನ್ನು ಪಡೆಯುತ್ತದೆ ಎಂದು ಕೆಲವು ಭಕ್ತರು ಭಾವಿಸುವುದು ಕಂಡು ಬರುತ್ತಿದೆ. ಏಸುದಾಸ್, ರಾಜ್ ಕುಮಾರ್, ಎಸ್ಪಿ ಬಾಲಸುಬ್ರಹ್ಮಣ್ಯಂ ಮೊದಲಾದವರ ಸ್ವರದಲ್ಲಿ ಸುಶ್ರಾವ್ಯವಾದ ಅಯ್ಯಪ್ಪಸ್ವಾಮಿಯ ಕನ್ನಡ ಗೀತೆಗಳು ಬಂದಿದ್ದರೂ ತಮಿಳು - ಮಲೆಯಾಳಿ ಭಾಷೆಯ ಹಾಡುಗಳನ್ನು ಕೇಳದೇ ಇದ್ದರೆ ಕೆಲವು ಭಕ್ತರಿಗೆ ಸಮಾಧಾನವೇ ಇರುವುದಿಲ್ಲ.
ಈ ಬರೆಹ ಭಾಷಾವೈಷಮ್ಯ, ಅಸಹನೆಯನ್ನು ಬಿಂಬಿಸುತ್ತದೆ ಎಂದು ಕೆಲವರು ಭಾವಿಸಬಹುದು. ಆದರೆ ಅಯ್ಯಪ್ಪ ಸ್ವಾಮಿಗಳು ದಿನಂಪ್ರತಿ ಹೇಳಲೇ ಬೇಕಾದ 108 ಶರಣು ಹೇಳುವವುದರಲ್ಲಿ `ಜಾತಿ ಮತ ಬೇದ ಇಲ್ಲತವನೇ..' ಎಂಬಂತಹಾ ಶರಣುಗಳು ಮತ್ತು ಕೆಲವು ಕನ್ನಡ ಭಾಷೆಗೆ ಸಾಮ್ಯವಿರುವ ಶರಣುಗಳು ಸುಲಭವಾಗಿ ಅರ್ಥವಾಗಬಹುದಾದರೂ ಸ್ವತಃ ಕರೆಯುವವರಿಗೇ ಅರ್ಥವಾಗದೇ ಇರುವ ಶರಣುಗಳನ್ನು ಹೇಳುವುದರಿಂದ ಆಗುವ ಪ್ರಯೋಜನಗಳಾದರೂ ಏನು? ಭಜನೆಯಿಂದ ಭಕ್ತಿ ಉಕ್ಕುತ್ತದೆ ಎನ್ನುದರಲ್ಲಿ ಎರಡು ಮಾತಿಲ್ಲ. ಆದರೆ ಭಜನೆ ಹೇಳುವವರಿಗೂ, ಕೇಳುವವರಿಗೂ ಅದರಲ್ಲಿ ಏನು ಅಡಗಿದೆ, ನಾವು ದೇವರನ್ನು ಏನೆಂದು ಅಚರ್ಿಸುತ್ತಿದ್ದೇವೆ, ಯಾವ ದೇವರನ್ನು ಹೆಸರಿನಿಂದ ಕರೆಯುತ್ತಿದ್ದೇವೆ. ಎಂದು ಅರ್ಥವಾದರೆ ತಾನೇ ಮುಕ್ತಿ ದೊರಕುವುದು?

ಇದು ಜಗತ್ತಿನಲ್ಲಿ ಎಲ್ಲೂ ಇಲ್ಲದ ಆಚರಣೆ!

ತುಳುನಾಡಿನಲ್ಲೂ ಹೊಸ ವರ್ಷವನ್ನು ಆಚರಿಸಲಾಗುತ್ತದೆ. ಜನವರಿ ಒಂದು ಕ್ಯಾಲೆಂಡರಿನ ಹೊಸ ವರ್ಷವಾದರೆ, ತುಳುನಾಡಿನಾದ್ಯಂತ ತುಳು ಹೊಸ ವರ್ಷ ಆರಂಭವಾಗುವುದು ಯುಗಾದಿಗೆ. ಸುಗ್ಗಿ, ಪಗ್ಗು, ಬೇಷ ಎಂಬಿತ್ಯಾದಿಯಾಗಿ ಯುಗಾದಿಯ ನಂತರ ತುಳು ತಿಂಗಳನ್ನು ಲೆಕ್ಕ ಹಾಕಲಾಗುತ್ತದೆ.
ಜನವರಿ ಒಂದರಂದು ಜಗತ್ತಿನ ಯಾವ ಮೂಲೆಯಲ್ಲಿಯೂ ಇಲ್ಲದ ಹೊಸವರ್ಷದ ಅಚರಣೆಯೊಂದು ತುಳುನಾಡಿನಲ್ಲಿ ಇರುವುದು ವಿಚಿತ್ರ. ತುಳು ಭಾಷೆಯಲ್ಲಿ `ಪೊಸ ವೊಸರ್ೊಗು ಅಜ್ಜೆರೆನ್ ಪೊತ್ತಾವುನು' ಎಂದು ಯುವಕರು ಸಂಭ್ರಮದಿಂದ ಹೇಳುತ್ತಾರೆ. ಇತ್ತೀಚೆಗಿನ ವರ್ಷಗಳಲ್ಲಿ ಸತತವಾಗಿ ನಡೆದ ಕೋಮು ಗಲಭೆಯ ಕಾರಣದಿಂದ ಈ ಅಜ್ಜೆರೆನ್ ಪೊತ್ತಾವುನ ಕಾರ್ಯಕ್ರಮಕ್ಕೆ ಪೊಲೀಸರು ಕಡಿವಾಣ ಹಾಕಿ, ರಾತ್ರಿ ಹನ್ನೆರಡು ಗಂಟೆಯ ಒಳಗೆ ಹೊಸವರ್ಷದ ಆಚರಣೆ ಏನಿದ್ದರೂ ಮಾಡಿ ಮುಗಿಸಬೇಕೆಂಬ ಕಟ್ಟಪ್ಪಣೆಯನ್ನು ಹೊರಡಿಸಿ ಸರ್ಪಗಾವಲು ಹಾಕಿದ್ದರು. ಕೆಲವು ಎಸ್ಸೈಗಳು ಸಂದಿ ಗೊಂದಿಗಳಲ್ಲಿ, ಬಸ್ ನಿಲ್ದಾಣಗಳ ಬಳಿ, ಸಾರ್ವಜನಿಕ ಸ್ಥಳಗಳಲ್ಲಿ ವಿರಾಜಮಾನವಾದ `ಅಜ್ಜೆರ್' ಗಳನ್ನು ಅನಾಮತ್ತಾಗಿ ಎತ್ತಿ ಜೀಪಿಗೆ ಹಾಕಿ ಕೊಂಡೊಯ್ದಿದ್ದರು. ಅಜ್ಜೆರೇ ಎದ್ದು ಹೋದ ಮೇಲೆ ಕುಣಿಯುವುದಾದರೂ ಯಾರ ಸುತ್ತ? ಮಾದಕ ಪದಾರ್ಥಗಳನ್ನು ಸೇವಿಸಿ ಯುವಕರು ಮಧ್ಯರಾತ್ರಿಯವರೆಗೆ ಸೂಕ್ಷ್ಮ ಪ್ರದೇಶದ ಸಾರ್ವಜನಿಕ ಸ್ಥಳದಲ್ಲಿ ಕುಣಿದಾಡುವುದು ಅಪಾಯಕ್ಕೆ ಆಹ್ವಾನವಿತ್ತಂತೆ ಎಂಬುದೂ ಸುಳ್ಳಲ್ಲ.
ಹೊಸ ವರ್ಷಕ್ಕೆ ಮುದುಕನನ್ನು ಸುಡುವ ಒಂದು ಕಾರ್ಯಕ್ರಮ ಹೇಗೆ ಉಂಟಾಯಿತು ಎಂದೇ ತಿಳಿಯುತ್ತಿಲ್ಲ. ಡಿಸೆಂಬರ್ 31ರ ಮುಂಜಾನೆ ಹೊತ್ತಿಗೆ ಸಾಂತಾಕ್ಲಾಸ್ನನ್ನು ಹೋಲುವ ಮುಖವಾಡವನ್ನು ಬೈಹುಲ್ಲು ಇತ್ಯಾದಿ ಸುಲಭವಾಗಿ ದಹನವಾಗುವ ವಸ್ತುಗಳಿಂದ ನಿಮರ್ಿಸಲಾದ ಮುದುಕನ ಪ್ರತಿಕೃತಿಗೆ ಹಾಕಿ ಹಳೇ ಸೂಟು, ಬೂಟು ತೊಡಿಸಿ, ಕೈಗೆ ಒಂದು ಕೋಲು ಕೊಟ್ಟು, ತೂತಾದ ಕನ್ನಡಕ ಹಾಕಿ. ಕೆಲವು ಕಡೆ ಇನ್ನೇನೋ ವಿಕೃತವಾಗಿ ಅಲಂಕಾರ ಮಾಡಿ ಬಸ್ಸ್ಟ್ಯಾಂಡ್ ಮುಂತಾದ ಜನ ಸೇರುವ ಸ್ಥಳಗಳಲ್ಲಿ ಇಡುತ್ತಾರೆ. ಕೆಲವು ಕಡೆ ಈಚಲು ಮರದ ಸೋಗೆಯಿಂದ ಚಪ್ಪರ ಹಾಕಿ ಬಣ್ಣದ ಕಾಗದ, ಬಲೂನ್ಗಳಿಂದ ಅಲಂಕರಿಸುತ್ತಾರೆ. ದೊಡ್ಡ ದೊಡ್ಡ ಸೌಂಡ್ ಬಾಕ್ಸ್ಗಳು ದಿನವಿಡೀ ಕಿವಿಗಡಚಿಕ್ಕುವಂತೆ ಡಿಸ್ಕೋ ಸಂಗೀತಗಳನ್ನು ಹೊರಹೊಮ್ಮಿಸುತ್ತಿರುತ್ತವೆ.
ಸಂಜೆಯಾಗುತ್ತಿದ್ದಂತೆ ಈ ಮುದುಕ ಪ್ರತಿಕೃತಿಯ ಸುತ್ತ ಸೇರಿದ ಯುವಕರು ನೃತ್ಯಗಳಲ್ಲಿ ತೊಡಗುತ್ತಾರೆ. ಹೊಸ ವರ್ಷದ ಪ್ರಯುಕ್ತ ಲಕ್ಕಿಡಿಪ್ ಡ್ರಾ ಮುಂತಾದ ಕಾರ್ಯಕ್ರಮಗಳು ನಡೆಯುತ್ತವೆ. ಮಧ್ಯರಾತ್ರಿಯವರೆಗೆ ಕುಣಿದು ಕುಪ್ಪಳಿಸಿದ ಯುವಕರು ರಾತ್ರಿ ಹನ್ನೆರಡು ಗಂಟೆಗೆ ಸರಿಯಾಗಿ ಮುದುಕನ ಪ್ರತಿಕೃತಿಗೆ ಬೆಂಕಿಯನ್ನು ಹಚ್ಚುತ್ತಾರೆ. ಪ್ರತಿಕೃತಿಯ ಒಳಗೆ ಮೊದಲೇ ಸಿಡಿಮದ್ದುಗಳನ್ನು ಇಟ್ಟಿದ್ದರಿಂದ ಅದಕ್ಕೆ ಬೆಂಕಿ ಹತ್ತಿ ಸ್ಪೋಟದ ಸದ್ದಿನೊಂದಿಗೆ ಧಗ ಧಗನೆ ಉರಿಯುತ್ತದೆ. ಯುವಕರ ಕೇಕೆ ನರ್ತನ ಮುಗಿಲು ಮುಟ್ಟುತ್ತದೆ. ಇಲ್ಲಿಗೆ ಹಳೆ ವರ್ಷ ಎಂಬ ಮುದುಕನನ್ನು ಸುಟ್ಟ ಸಂತೃಪ್ತಿ ಉಂಟಾಗುತ್ತದೆ. ಕೆಲವು ಕಡೆ ಮುಂಜಾನೆಯವರೆಗೂ ಡ್ಯಾನ್ಸ್ ಕಾರ್ಯಕ್ರಮ ಮುಂದುರಿಯುವುದುಂಟು.
ಹಳೆಯದನ್ನು ಮರೆತು ಅದರ ಅನುಭವದಿಂದ ಹೊಸತನ್ನು ಸ್ವಾಗತಿಸಬೇಕು ಎಂಬ ಆಶಯವೇನೋ ಸರಿಯಾದುದೇ. ಆದರೆ ಹಳೆಯದನ್ನ ಮುದುಕನಿಗೆ ಹೋಲಿಸಿ, ವಿಕೃತ ಅಲಂಕಾರಗಳನ್ನು ಮಾಡಿ ಮಾದಕ ಪದಾರ್ಥಗಳನ್ನು ಸೇವಿಸಿ ಕೇಕೆ ಹಾಕಿ ಕುಣಿದು ಹೊಸವರ್ಷಕ್ಕೆ ಕಾಲಿಡುವುದು ಎಷ್ಟು ಸರಿ ಎಂಬುದನ್ನು ಆಲೋಚಿಸಬೇಕಾದ ಅವಶ್ಯಕತೆ ಇದೆ. ಇದು ಪ್ರಾಯಸಂದ ವ್ಯಕ್ತಿಗಳಿಗೆ ಮಾಡುವ ಅವಮಾನವಲ್ಲವೇ? ಹಳೆಯದೆಲ್ಲವನ್ನೂ ಅಜ್ಜನಿಗೆ ಹೋಲಿಸಿ, ಸುಟ್ಟು ಹಿರಿಯನಾಗರಿಕರಿಗೆ ಅಪಮಾನ ಮಾಡುವವರು ತಾವು ಯುವಕರಾಗಿಯೇ ಇರುತ್ತೇವೆ ಎಂದು ಯೋಚಿಸುವುದು ಒಂದು ವಿಪರ್ಯಾಸ.