Tuesday, January 26, 2010

ಗ್ರಹಣದೋಷ ತಡೆಗೆ ಕದಿಕೆ



ಗ್ರಹಣದ ದಿನ ಆಸ್ತಿಕರು ಉಪವಾಸ ಮಾಡುತ್ತಾರೆ. ಗ್ರಹಣ ಸಂಭವಿಸುವ ಹೊತ್ತಿನಲ್ಲಿ ಮನೆಯಲ್ಲಿ ಯಾವ ಆಹಾರವನ್ನೂ ತಯಾರಿಸಬಾರದು, ಅನ್ನ, ಪದಾರ್ಥದ ಪಾತ್ರೆಗಳು ಖಾಲಿಯಾಗಿ ಕವಚಿ ಹಾಕಿರಬೇಕು ಎಂಬ ಅಭಿಪ್ರಾಯವಿದ್ದು ಕೆಲವು ಮನೆಗಲ್ಲಿ ಚಾಚೂ ತಪ್ಪದೆ ಈ ಪದ್ಧತಿಯನ್ನು ಪಾಲಿಸುತ್ತಾರೆ. ಆಹಾರ ಪದಾರ್ಥಗಳೇನಾದರೂ ಇದ್ದರೆ ಅದಕ್ಕೆ ಗ್ರಹಣ ದೋಷ ಉಂಟಾಗಿ, ಅದನ್ನು ಉಪಯೋಗಿಸಿದರೆ ಆರೋಗ್ಯಕ್ಕೆ ಹಾನಿಯುಂಟಾಗುತ್ತದೆ ಎಂಬ ಭಾವನೆ ಇದೆ.
ದಿನನಿತ್ಯ ತಯಾರಿಸುವ ಅಹಾರ ಪದಾರ್ಥಗಳನ್ನೇನೂ ಖಾಲಿ ಮಾಡಬಹುದು ಆದರೆ ಹಾಲು, ಮೊಸರು, ನೀರು ಮುಂತಾದ ಅತೀ ಅವಶ್ಯ ವಸ್ತುಗಳಿಗೆ ಗ್ರಹಣ ದೋಷ ಉಂಟಾಗದಂತೆ ಮಾಡುವ ಉಪಾಯವೇನು? ತುಳು ನಾಡಿನ ಹಳ್ಳಿ ಹಳ್ಳಿಯ ಮನೆಯೊಡತಿಯರಿಗೂ ಈ ಉಪಾಯ ಚೆನ್ನಾಗಿ ಗೊತ್ತಿದೆ. ಅಂಗಳದಲ್ಲಿ, ಗದ್ದೆಯ ಹುಣಿಯಲ್ಲಿ, ತೋಟದಲ್ಲಿ ಬೆಳೆದ ಕದಿಕೆಯನ್ನು ಹರಿದು ತಂದು ಸಣ್ಣ, ಸಣ್ಣ ಕಟ್ಟುಗಳನ್ನಾಗಿ ಮಾಡಿ ಹಾಲು, ಮೊಸರು, ನೀರು ಮತ್ತು ಮಿಕ್ಕುಳಿದ ಆಹಾರ ಪದಾರ್ಥಗಳಲ್ಲಿ ಹಾಕುತ್ತಾರೆ. ಕೈತುಂಬಾ ಗರಿಕೆಯನ್ನು ಹಿಡಿದು ಕೊಂಡರೆ ಗ್ರಹಣ ಕಾಲದಲ್ಲಿ ಗಭರ್ಿಣಿ ಮಹಿಳೆಯರಿಗೆ ಗ್ರಹಣ ದೋಷವಾಗುವುದಿಲ್ಲ ಎಂಬ ಭಾವನೆಯೂ ಇದೆ.
ತುಳು ನಾಡಿನ ಹಳ್ಳಿಗಳಲ್ಲಿ ಕದಿಕೆ ಧಾರಾಳವಾಗಿ ಸಿಗುತ್ತದೆ. ಗಣಪತಿಗೂ ಇದು ಬಲು ಪ್ರಿಯ. ಕದಿಕೆ ಆಯುವರ್ೇದ ಔಷಧಿಯಾಗಿಯೂ ಉಪಯೋಗಿಸಲ್ಪಡುತ್ತದೆ. ಗರಿಕೆಯ ಜ್ಯೂಸ್ ನಿದರ್ಿಷ್ಟವಾದ ರೋಗಗಳಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ. ಪೂಜೆ ಪುನಸ್ಕಾರಗಳಲ್ಲಿ ಕದಿಕೆಗೆ ಪ್ರಮುಖ ಸ್ಥಾನವಿದೆ.
ಗ್ರಹಣ ಸಂದರ್ಭದಲ್ಲಿ ಆಹಾರ ಸೇವಿಸಬಾರದು ಎಂಬುದಕ್ಕೆ ವೈಜ್ಞಾನಿಕ ಕಾರಣಗಳಿಲ್ಲ ಎಂದು ಹೇಳಲಾಗುತ್ತದೆ. ಗ್ರಹಣ ಎಂಬುದು ಖಗೋಳ ಕೌತುಕ ಅದನ್ನು ಮೂಢನಂಬಿಕೆಯಿಂದ ನೋಡಬಾರದು. ಆ ದಿನ ಗ್ರಹಣವನ್ನು ನೋಡುತ್ತಾ `ಎಂಜಾಯ್' ಮಾಡಬೇಕು ಎಂದು ಕೆಲವರು ಅಭಿಪ್ರಾಯಪಡುತ್ತಾರೆ. ಗ್ರಹಣ ಸಂದರ್ಭದಲ್ಲಿ ಸಾಮೂಹಿಕ ಭೋಜನ ಏರ್ಪಡಿಸಿ ಆ ಸಂಧರ್ಭದಲ್ಲಿ ಆಹಾರ ಸೇವಿಸಬಾರದು ಎಂದು ಹೇಳುವುದು ಮೂಢನಂಬಿಕೆ ಊಟ ಮಾಡಿದರೆ ಏನೂ ಆಗುವುದಿಲ್ಲ ಎಂದು ಕೆಲವರು ಸಾಬೀತುಪಡಿಸಲು ಪ್ರಯತ್ನಸುತ್ತಾರೆ.
ಗ್ರಹಣ ಸಂದರ್ಭ ಎಂಬುವುದು ಪವಿತ್ರವಾದ ಪರ್ವಕಾಲ ಈ ಕಾಲದಲ್ಲಿ ನಾವು ಒಳ್ಳೆಯ ಕಾರ್ಯಗಳನ್ನು ಮಾಡಬೇಕು. ಉಪವಾಸವಿದ್ದು ದೇವರ ಸ್ತುತಿಯಲ್ಲಿ ಕಾಲ ಕಳೆಯಬೇಕು. ಇಲ್ಲ ಸಲ್ಲದ ಮೋಜಿನಲ್ಲಿ ಕಳೆಯಬಾರದು ಎಂಬ ಅಭಿಪ್ರಾಯವನ್ನೂ ಆಸ್ತಿಕ ಬಾಂಧವರು ಹೊಂದಿದ್ದಾರೆ. ಗ್ರಹಣ ಎಂಬುದು ಕೆಟ್ಟದ್ದು, ಅಂದು ಅನಿಷ್ಠ ಸಂಭವಿಸುತ್ತದೆ ಎಂದು ಭೀತಿಯಿಂದ ಮನೆಯೊಳಗೇ ಕಾಲ ಕಳೆಯುವವರೂ ಇದ್ದಾರೆ. ಮಾಟ, ಮಂತ್ರ, ಸಾಧನೆ, ಸಿದ್ದಿಗಾಗಿ ಈ ದಿನವನ್ನೂ ಕೆಲವರು ಆರಿಸಿಕೊಳ್ಳುತ್ತಾರೆ.
ಇದೆಲ್ಲಾ ಅವರವರ ಭಾವ, ಭಕ್ತಿಗಳಿಗಾಯಿತು. ತುಳುನಾಡಿನ ಹೆಂಗಳೆಯರು ಕದಿಕೆಯಿಂದ ಗ್ರಹಣ ದೋಷವಾಗದಂತೆ ರಕ್ಷಣೆ ಪಡೆಯುವುದರಲ್ಲಿ ಏನಾದರೂ ವೈಜ್ಞಾನಿಕ ಕಾರಣಗಳಿವೆಯೇ? ಈ ಸಂದರ್ಭದಲ್ಲಿ ಒಂದು ಘಟನೆ ಓದಿದ ನೆನಪು ಬರುತ್ತಿದೆ. ಭಾರತ ಸರಕಾರವು 1998 ರಲ್ಲಿ ಪೋಖ್ರಾನ್ನಲ್ಲಿ ಅಣುಬಾಂಬು ಪರೀಕ್ಷೆ ನಡೆಸಿತು. ನೂರಾರು ಮೀಟರ್ ಆಳದ ಹೊಂಡ ತೋಡುವ ಕೆಲಸ, ಮಿಲಿಟರಿ ವಾಹನಗಳ ಹರಿದಾಟ, ವಿಜ್ಞಾನಿಗಳ ಓಡಾಟ ಎಲ್ಲವನ್ನೂ ಅಮೆರಿಕದ ಗೂಢಾಚಾರ ಉಪಗ್ರಹದ ಹದ್ದುಗಣ್ಣಿನಿಂದ ಯಾವುದೇ ಸಂಶಯ ಬಾರದ ರೀತಿಯಲ್ಲಿ ತಪ್ಪಿಸಿಕೊಂಡು ಪ್ರಯೋಗ ಯಶಸ್ಸು ಪಡೆಯಿತು. ಹಾಗಾದರೆ ಉಪಗ್ರಹದ ಕಣ್ಣಿಗೆ ಮಣ್ಣೆರೆಚಿದ, ಚಟುವಟಿಕೆಗಳನ್ನು ಮರೆಮಾಚಿದ ಅಂಶವಾದರೂ ಯಾವುದು ಎಂದರೆ... ಹುಲ್ಲು!.
ಪೋಖ್ರಾನ್ನ ಪ್ರತಿಯೊಂದು ಚಟುವಟಿಕೆಯೂ `ಥ್ಯಾಚ್ಡ್ರೂಫ್' ಅಂದರೆ ಹುಲ್ಲಿನ ಮರೆಯಲ್ಲಿ ನಡೆಯಿತು. ಅಣುಪರೀಕ್ಷೆಯ ಹೊಂಡಕ್ಕೆ ಹುಲ್ಲಿನ ಚಪ್ಪರ, ಓಡಾಡುವ ಮಿಲಿಟರಿ ವಾಹನಗಳ ಮೇಲೆ ಹುಲ್ಲಿನ ಛಾವಣಿ! ಹುಲ್ಲಿನ ಮರೆಯಲ್ಲಿ ನಡೆಯುವ ಚಟುವಟಿಕೆಗಳನ್ನು ಉಪಗ್ರಹದ ಕಣ್ಣು ಪತ್ತೆಹಚ್ಚದು ಎಂಬುದನ್ನು ಭಾರತೀಯರ ಕಂಡು ಕೊಂಡಿದ್ದರು!.
ಈಗ ಹೇಳಿ ಹುಲ್ಲು ಉಪಗ್ರಹದ ಕಣ್ಣು ತಪ್ಪಿಸಿದಂತೆ ಕದಿಕೆ ಎಂಬ ಪವಿತ್ರ ಹುಲ್ಲು ಗ್ರಹಣದೋಷವನ್ನು ತಪ್ಪಿಸದೇ? ನಾವು ಮೂಢನಂಬಿಕೆ ಎಂದು ಹೀಯಾಳಿಸುವ ಅಂಶಗಳಲ್ಲಿ ಸಂಶೋಧನೆಗೆ ಅರ್ಹವಾದ ವಿಚಾರಗಳು ಸಾಕಷ್ಟಿದೆ.

ಕಲ್ಲು, ಮುಳ್ಳು ಕಾಲಲಿ ಮೆಟ್ಟಿ... ಸ್ವಾಮಿಯೇ ಅಯ್ಯಪ್ಪಾ



ಎರಡು ಮೂರು ದಶಕಗಳ ಹಿಂದೆ ತುಳುನಾಡಿನ ಪ್ರಮುಖ ಪೇಟೆಗಳಲ್ಲಿ `ಕಲ್ಲುಂ, ಮುಳ್ಳುಂ ಕಾಲಿಗೆ ಮೆಟ್ಟಿ.... ಸ್ವಾಮಿಯೇ ಅಯ್ಯಪ್ಪ...' ಎಂಬ ಪಿ. ಕುಪ್ಪುಸ್ವಾಮಿ, ವೀರಮಣಿ ರಾಜು ಮತ್ತಿತರು ಸೇರಿ ಹಾಡಿದ ಕಂಚಿನ ಕಂಠದ ಹಾಡು ಲೌಡ್ ಸ್ಪೀಕರ್ಗಳಲ್ಲಿ ಕೇಳಿ ಬರುತ್ತಿದ್ದವು. ಇದು ಸುತ್ತಮುತ್ತಲಿನ ಹಲವಾರು ಹಳ್ಳಿಗಳಲ್ಲಿ ಪ್ರತಿಧ್ವನಿಸುತ್ತಿತ್ತು. ಮಧ್ಯಭಾಗದಲ್ಲಿ ಎತ್ತರವಾದ `ಕಂಗ್'ವೊಂದನ್ನು ನೆಟ್ಟು , ಸುತ್ತಲೂ ಕಾಣುವಂತೆ ಗೋಪುರಾಕೃತಿಯಲ್ಲಿ ಭದ್ರಾಸನ ಅಥವಾ ಹುಲಿಯನೇರಿ ಕುಳಿತ ಮೂರು ಅಯ್ಯಪ್ಪ ಸ್ವಾಮಿಯ ದೊಡ್ಡದಾದ ಭಾವಚಿತ್ರಗಳನ್ನು ಆಳೆತ್ತರದಲ್ಲಿ ಕಟ್ಟಿ, ಧೂಪ, ದೀಪ ಹಚ್ಚಿ, ಹೂಗಳಿಂದ ಅಲಂಕಾರ ಮಾಡಲಾಗುತ್ತಿತ್ತು. ಅದರ ಸುತ್ತಲೂ ಈಗಿನ 16ಗಜಗಳ ಕ್ರಿಕೆಟ್ ಟೂರ್ನಮೆಂಟಿನ ವೃತ್ತಾಕಾರದ ಮೈದಾನದ ಸುತ್ತಳತೆಯಷ್ಟು ಜಾಗದಲ್ಲಿ ಸುಡು ಬಿಸಿಲನ್ನೂ ಲೆಕ್ಕಿಸದೆ ವ್ಯಕ್ತಿಯೊಬ್ಬ ಸೈಕಲ್ ಸವಾರಿ ಮಾಡುತ್ತಾ ನಡುವಿನ ಕಂಬಕ್ಕೆ ಸತತವಾಗಿ ಸುತ್ತು ಬರುತ್ತಿದ್ದ. ಕಂಬಕ್ಕೆ ಕಟ್ಟಿದ್ದ ಮೈಕ್ಗಳು ಅಯ್ಯಪ್ಪ ಸ್ವಾಮಿಯ, ಸ್ಥಳೀಯರಿಗೆ ಅರ್ಥವಾಗದ ಆದರೆ ಅಂದಾಜು ಆಗುವ ತಮಿಳು - ಮಲೆಯಾಳಿ ಭಕ್ತಿ ಗೀತೆಗಳನ್ನು ಹಾಡುತ್ತಿದ್ದವು. ತುಳುನಾಡಿನ ಮಂದಿ ಅಯ್ಯಪ್ಪ ಸ್ವಾಮಿಯ ಬಗ್ಗೆ ಕುತೂಹಲಗೊಂಡು ವಿಚಾರಿಸುತ್ತಿದ್ದರು. ಶಬರಿಮಲೆ ಸನ್ನಿಧಾನಕ್ಕೆ ಹೋಗಿ ಬರುವ ಕಷ್ಟ ಕಾರ್ಪಣ್ಯ, ವೃತ ನಿಯಮಾಧಿಗಳ ಬಗ್ಗೆ ಅಚ್ಚರಿ ವ್ಯಕ್ತಪಡಿಸುತ್ತಿದ್ದರು. ಕರಿಬಟ್ಟೆ ಉಟ್ಟ ಅಯ್ಯಪ್ಪ ವೃತಧಾರಿ ಸೈಕಲ್ ಬ್ಯಾಲೆನ್ಸ್ ಮಾಡುವ ವ್ಯಕ್ತಿ ನಿಗದಿಪಡಿಸಿದ ದಿನಗಳ ವರೆಗೆ ನೆಲವನ್ನು ಮುಟ್ಟಬಾರದು, ರಾತ್ರಿ ಹಗಲು ಸೈಕಲ್ ಬಿಟ್ಟು ಇಳಿಯಬಾರದು ಎಂಬ ನಿಯಮಗಳಿದ್ದವು. ಕೆಲವರು ಮಧ್ಯರಾತ್ರಿಯ ಹೊತ್ತಿಗೆ ಸೈಕಲಿಂದ ಇಳಿದಿದ್ದಾನೋ ಇಲ್ಲವೋ ಎಂದು ಇಣುಕಿ ನೋಡಿದಾಗಲೂ ಆತ ಸೈಕಲ್ ಮೆಟ್ಟುತ್ತಾ ಗಾಣದೆತ್ತಿನಂತೆ ಸುತ್ತುತ್ತಲೇ ಇರುತ್ತಿದ್ದ.
ಅಯ್ಯಪ್ಪ ವ್ರತಧಾರಿಯು ಸಣ್ಣ ಪುಟ್ಟ ಸರ್ಕಸ್ಗಳೊಂದಿಗೆ, ಟ್ಯೂಬ್ಲೈಟ್ ಒಡೆಯುವುದು, ತಿನ್ನುವುದು, ಹಲ್ಲಿನಿಂದ ಕಾರು ಬಸ್ಸುಗಳನ್ನು ಎಳೆಯುವುದು, ಹೊಂಡದೊಳಗೆ ಗಂಟೆಗಟ್ಟಲೆ ಉಸಿರುಕಟ್ಟಿ ಕುಳಿತುಕೊಳ್ಳುವುದು ಮುಂತಾದ ಕಠಿಣವಾದ ಸಾಹಸಗಳನ್ನೂ ಮಾಡುತ್ತಿದ್ದ. ಅಯ್ಯಪ್ಪಸ್ವಾಮಿಯ ದಯೆಯಿಂದ ಎಲ್ಲವೂ ಸುಸೂತ್ರವಾಗುತ್ತಿತ್ತು.
ತುಳುನಾಡಿನಲ್ಲಿ ಈಗ ವ್ಯಾಪಕವಾಗಿ ಸಂಭ್ರಮಪೂರ್ವಕವಾಗಿ ನಡೆಯುವ ಮತ್ತು ತುಳುವರು ಉದ್ಯೋಗ ನಿಮಿತ್ತ ಹೋಗಿ ವಾಸಿಸುವ ಮುಂಬೈ, ದೆಹಲಿ, ಸಿಂಗಾಪುರ, ಗಲ್ಫ್ ರಾಜ್ಯಗಳಲ್ಲಿ ನಡೆಸುವ ಅಯ್ಯಪ್ಪ ಸ್ವಾಮಿಯ ಪೂಜೆಗಳಿಗೆ ಈ ಸೈಕಲ್ ಬ್ಯಾಲೆನ್ಸ್ ಮಂದಿಯೇ ಮೂಲ ಪುರುಷರು. ಇದಕ್ಕೆ ಅಂದು ಕೇಳುತ್ತಿದ್ದ, ಇಂದು ಇಲ್ಲದೆ ಪೂತರ್ಿಯಾಗದ `ಕಲ್ಲುಂ ಮುಲ್ಲುಂ ಕಾಲಿಗೆ ಮೆಟ್ಟ್ - ಸ್ವಾಮಿಯೇ ಅಯ್ಯಪ್ಪಾ' ಹಾಡೇ ಸಾಕ್ಷಿಯಾಗಿದೆ.
ಕಲ್ಲುಂ ಮುಳ್ಳುಂ ಹಾಡು ಇಲ್ಲಿನ ಜನರಿಗೆ ಸಾಧಾರಣವಾಗಿ ಅರ್ಥವಾಗುತ್ತಿದ್ದರೂ ಇಂದು ನಡೆಯುವ ಅಯ್ಯಪ್ಪ ಪೂಜೆಗಳಲ್ಲಿ ಹಾಕಲಾಗುವ ಹೊಸ ಹೊಸ ತಮಿಳು - ಮಲೆಯಾಳೆ ಭಾಷೆಯ ಹಾಡುಗಳು ಇಲ್ಲಿನ ಜನರಿಗೆ ಎಷ್ಟು ಅರ್ಥವಾಗುತ್ತದೆ ಎಂಬುದು ಪ್ರಮುಖವಾದ ಪ್ರಶ್ನೆ. ತಮಿಳಿನ `ಕಲ್ಲುಂ ಮುಳ್ಳುಂ ಕಾಲಿಗೆ ಮೆಟ್ಟ್' ಬದಲಿಗೆ ಕನ್ನಡ ಭಾಷೆಯಲ್ಲಿ `ಕಲ್ಲನು ಮುಳ್ಳನು ಕಾಲಲಿ ತುಳಿದು - ಸ್ವಾಮಿಯೇ ಅಯ್ಯಪ್ಪಾ' ಎಂಬ ಹಾಡು ಕೆಲವು ಕಡೆ ಕೇಳಿಬರುತ್ತಿದೆ. ಅಯ್ಯಪ್ಪ ಸ್ವಾಮಿಯ ಪೂಜೆ ತಮಿಳು - ಮಲೆಯಾಳಿ ಹಾಡಿನಿಂದಲೇ ಸಾರ್ಥಕತೆಯನ್ನು ಪಡೆಯುತ್ತದೆ ಎಂದು ಕೆಲವು ಭಕ್ತರು ಭಾವಿಸುವುದು ಕಂಡು ಬರುತ್ತಿದೆ. ಏಸುದಾಸ್, ರಾಜ್ ಕುಮಾರ್, ಎಸ್ಪಿ ಬಾಲಸುಬ್ರಹ್ಮಣ್ಯಂ ಮೊದಲಾದವರ ಸ್ವರದಲ್ಲಿ ಸುಶ್ರಾವ್ಯವಾದ ಅಯ್ಯಪ್ಪಸ್ವಾಮಿಯ ಕನ್ನಡ ಗೀತೆಗಳು ಬಂದಿದ್ದರೂ ತಮಿಳು - ಮಲೆಯಾಳಿ ಭಾಷೆಯ ಹಾಡುಗಳನ್ನು ಕೇಳದೇ ಇದ್ದರೆ ಕೆಲವು ಭಕ್ತರಿಗೆ ಸಮಾಧಾನವೇ ಇರುವುದಿಲ್ಲ.
ಈ ಬರೆಹ ಭಾಷಾವೈಷಮ್ಯ, ಅಸಹನೆಯನ್ನು ಬಿಂಬಿಸುತ್ತದೆ ಎಂದು ಕೆಲವರು ಭಾವಿಸಬಹುದು. ಆದರೆ ಅಯ್ಯಪ್ಪ ಸ್ವಾಮಿಗಳು ದಿನಂಪ್ರತಿ ಹೇಳಲೇ ಬೇಕಾದ 108 ಶರಣು ಹೇಳುವವುದರಲ್ಲಿ `ಜಾತಿ ಮತ ಬೇದ ಇಲ್ಲತವನೇ..' ಎಂಬಂತಹಾ ಶರಣುಗಳು ಮತ್ತು ಕೆಲವು ಕನ್ನಡ ಭಾಷೆಗೆ ಸಾಮ್ಯವಿರುವ ಶರಣುಗಳು ಸುಲಭವಾಗಿ ಅರ್ಥವಾಗಬಹುದಾದರೂ ಸ್ವತಃ ಕರೆಯುವವರಿಗೇ ಅರ್ಥವಾಗದೇ ಇರುವ ಶರಣುಗಳನ್ನು ಹೇಳುವುದರಿಂದ ಆಗುವ ಪ್ರಯೋಜನಗಳಾದರೂ ಏನು? ಭಜನೆಯಿಂದ ಭಕ್ತಿ ಉಕ್ಕುತ್ತದೆ ಎನ್ನುದರಲ್ಲಿ ಎರಡು ಮಾತಿಲ್ಲ. ಆದರೆ ಭಜನೆ ಹೇಳುವವರಿಗೂ, ಕೇಳುವವರಿಗೂ ಅದರಲ್ಲಿ ಏನು ಅಡಗಿದೆ, ನಾವು ದೇವರನ್ನು ಏನೆಂದು ಅಚರ್ಿಸುತ್ತಿದ್ದೇವೆ, ಯಾವ ದೇವರನ್ನು ಹೆಸರಿನಿಂದ ಕರೆಯುತ್ತಿದ್ದೇವೆ. ಎಂದು ಅರ್ಥವಾದರೆ ತಾನೇ ಮುಕ್ತಿ ದೊರಕುವುದು?

ಇದು ಜಗತ್ತಿನಲ್ಲಿ ಎಲ್ಲೂ ಇಲ್ಲದ ಆಚರಣೆ!

ತುಳುನಾಡಿನಲ್ಲೂ ಹೊಸ ವರ್ಷವನ್ನು ಆಚರಿಸಲಾಗುತ್ತದೆ. ಜನವರಿ ಒಂದು ಕ್ಯಾಲೆಂಡರಿನ ಹೊಸ ವರ್ಷವಾದರೆ, ತುಳುನಾಡಿನಾದ್ಯಂತ ತುಳು ಹೊಸ ವರ್ಷ ಆರಂಭವಾಗುವುದು ಯುಗಾದಿಗೆ. ಸುಗ್ಗಿ, ಪಗ್ಗು, ಬೇಷ ಎಂಬಿತ್ಯಾದಿಯಾಗಿ ಯುಗಾದಿಯ ನಂತರ ತುಳು ತಿಂಗಳನ್ನು ಲೆಕ್ಕ ಹಾಕಲಾಗುತ್ತದೆ.
ಜನವರಿ ಒಂದರಂದು ಜಗತ್ತಿನ ಯಾವ ಮೂಲೆಯಲ್ಲಿಯೂ ಇಲ್ಲದ ಹೊಸವರ್ಷದ ಅಚರಣೆಯೊಂದು ತುಳುನಾಡಿನಲ್ಲಿ ಇರುವುದು ವಿಚಿತ್ರ. ತುಳು ಭಾಷೆಯಲ್ಲಿ `ಪೊಸ ವೊಸರ್ೊಗು ಅಜ್ಜೆರೆನ್ ಪೊತ್ತಾವುನು' ಎಂದು ಯುವಕರು ಸಂಭ್ರಮದಿಂದ ಹೇಳುತ್ತಾರೆ. ಇತ್ತೀಚೆಗಿನ ವರ್ಷಗಳಲ್ಲಿ ಸತತವಾಗಿ ನಡೆದ ಕೋಮು ಗಲಭೆಯ ಕಾರಣದಿಂದ ಈ ಅಜ್ಜೆರೆನ್ ಪೊತ್ತಾವುನ ಕಾರ್ಯಕ್ರಮಕ್ಕೆ ಪೊಲೀಸರು ಕಡಿವಾಣ ಹಾಕಿ, ರಾತ್ರಿ ಹನ್ನೆರಡು ಗಂಟೆಯ ಒಳಗೆ ಹೊಸವರ್ಷದ ಆಚರಣೆ ಏನಿದ್ದರೂ ಮಾಡಿ ಮುಗಿಸಬೇಕೆಂಬ ಕಟ್ಟಪ್ಪಣೆಯನ್ನು ಹೊರಡಿಸಿ ಸರ್ಪಗಾವಲು ಹಾಕಿದ್ದರು. ಕೆಲವು ಎಸ್ಸೈಗಳು ಸಂದಿ ಗೊಂದಿಗಳಲ್ಲಿ, ಬಸ್ ನಿಲ್ದಾಣಗಳ ಬಳಿ, ಸಾರ್ವಜನಿಕ ಸ್ಥಳಗಳಲ್ಲಿ ವಿರಾಜಮಾನವಾದ `ಅಜ್ಜೆರ್' ಗಳನ್ನು ಅನಾಮತ್ತಾಗಿ ಎತ್ತಿ ಜೀಪಿಗೆ ಹಾಕಿ ಕೊಂಡೊಯ್ದಿದ್ದರು. ಅಜ್ಜೆರೇ ಎದ್ದು ಹೋದ ಮೇಲೆ ಕುಣಿಯುವುದಾದರೂ ಯಾರ ಸುತ್ತ? ಮಾದಕ ಪದಾರ್ಥಗಳನ್ನು ಸೇವಿಸಿ ಯುವಕರು ಮಧ್ಯರಾತ್ರಿಯವರೆಗೆ ಸೂಕ್ಷ್ಮ ಪ್ರದೇಶದ ಸಾರ್ವಜನಿಕ ಸ್ಥಳದಲ್ಲಿ ಕುಣಿದಾಡುವುದು ಅಪಾಯಕ್ಕೆ ಆಹ್ವಾನವಿತ್ತಂತೆ ಎಂಬುದೂ ಸುಳ್ಳಲ್ಲ.
ಹೊಸ ವರ್ಷಕ್ಕೆ ಮುದುಕನನ್ನು ಸುಡುವ ಒಂದು ಕಾರ್ಯಕ್ರಮ ಹೇಗೆ ಉಂಟಾಯಿತು ಎಂದೇ ತಿಳಿಯುತ್ತಿಲ್ಲ. ಡಿಸೆಂಬರ್ 31ರ ಮುಂಜಾನೆ ಹೊತ್ತಿಗೆ ಸಾಂತಾಕ್ಲಾಸ್ನನ್ನು ಹೋಲುವ ಮುಖವಾಡವನ್ನು ಬೈಹುಲ್ಲು ಇತ್ಯಾದಿ ಸುಲಭವಾಗಿ ದಹನವಾಗುವ ವಸ್ತುಗಳಿಂದ ನಿಮರ್ಿಸಲಾದ ಮುದುಕನ ಪ್ರತಿಕೃತಿಗೆ ಹಾಕಿ ಹಳೇ ಸೂಟು, ಬೂಟು ತೊಡಿಸಿ, ಕೈಗೆ ಒಂದು ಕೋಲು ಕೊಟ್ಟು, ತೂತಾದ ಕನ್ನಡಕ ಹಾಕಿ. ಕೆಲವು ಕಡೆ ಇನ್ನೇನೋ ವಿಕೃತವಾಗಿ ಅಲಂಕಾರ ಮಾಡಿ ಬಸ್ಸ್ಟ್ಯಾಂಡ್ ಮುಂತಾದ ಜನ ಸೇರುವ ಸ್ಥಳಗಳಲ್ಲಿ ಇಡುತ್ತಾರೆ. ಕೆಲವು ಕಡೆ ಈಚಲು ಮರದ ಸೋಗೆಯಿಂದ ಚಪ್ಪರ ಹಾಕಿ ಬಣ್ಣದ ಕಾಗದ, ಬಲೂನ್ಗಳಿಂದ ಅಲಂಕರಿಸುತ್ತಾರೆ. ದೊಡ್ಡ ದೊಡ್ಡ ಸೌಂಡ್ ಬಾಕ್ಸ್ಗಳು ದಿನವಿಡೀ ಕಿವಿಗಡಚಿಕ್ಕುವಂತೆ ಡಿಸ್ಕೋ ಸಂಗೀತಗಳನ್ನು ಹೊರಹೊಮ್ಮಿಸುತ್ತಿರುತ್ತವೆ.
ಸಂಜೆಯಾಗುತ್ತಿದ್ದಂತೆ ಈ ಮುದುಕ ಪ್ರತಿಕೃತಿಯ ಸುತ್ತ ಸೇರಿದ ಯುವಕರು ನೃತ್ಯಗಳಲ್ಲಿ ತೊಡಗುತ್ತಾರೆ. ಹೊಸ ವರ್ಷದ ಪ್ರಯುಕ್ತ ಲಕ್ಕಿಡಿಪ್ ಡ್ರಾ ಮುಂತಾದ ಕಾರ್ಯಕ್ರಮಗಳು ನಡೆಯುತ್ತವೆ. ಮಧ್ಯರಾತ್ರಿಯವರೆಗೆ ಕುಣಿದು ಕುಪ್ಪಳಿಸಿದ ಯುವಕರು ರಾತ್ರಿ ಹನ್ನೆರಡು ಗಂಟೆಗೆ ಸರಿಯಾಗಿ ಮುದುಕನ ಪ್ರತಿಕೃತಿಗೆ ಬೆಂಕಿಯನ್ನು ಹಚ್ಚುತ್ತಾರೆ. ಪ್ರತಿಕೃತಿಯ ಒಳಗೆ ಮೊದಲೇ ಸಿಡಿಮದ್ದುಗಳನ್ನು ಇಟ್ಟಿದ್ದರಿಂದ ಅದಕ್ಕೆ ಬೆಂಕಿ ಹತ್ತಿ ಸ್ಪೋಟದ ಸದ್ದಿನೊಂದಿಗೆ ಧಗ ಧಗನೆ ಉರಿಯುತ್ತದೆ. ಯುವಕರ ಕೇಕೆ ನರ್ತನ ಮುಗಿಲು ಮುಟ್ಟುತ್ತದೆ. ಇಲ್ಲಿಗೆ ಹಳೆ ವರ್ಷ ಎಂಬ ಮುದುಕನನ್ನು ಸುಟ್ಟ ಸಂತೃಪ್ತಿ ಉಂಟಾಗುತ್ತದೆ. ಕೆಲವು ಕಡೆ ಮುಂಜಾನೆಯವರೆಗೂ ಡ್ಯಾನ್ಸ್ ಕಾರ್ಯಕ್ರಮ ಮುಂದುರಿಯುವುದುಂಟು.
ಹಳೆಯದನ್ನು ಮರೆತು ಅದರ ಅನುಭವದಿಂದ ಹೊಸತನ್ನು ಸ್ವಾಗತಿಸಬೇಕು ಎಂಬ ಆಶಯವೇನೋ ಸರಿಯಾದುದೇ. ಆದರೆ ಹಳೆಯದನ್ನ ಮುದುಕನಿಗೆ ಹೋಲಿಸಿ, ವಿಕೃತ ಅಲಂಕಾರಗಳನ್ನು ಮಾಡಿ ಮಾದಕ ಪದಾರ್ಥಗಳನ್ನು ಸೇವಿಸಿ ಕೇಕೆ ಹಾಕಿ ಕುಣಿದು ಹೊಸವರ್ಷಕ್ಕೆ ಕಾಲಿಡುವುದು ಎಷ್ಟು ಸರಿ ಎಂಬುದನ್ನು ಆಲೋಚಿಸಬೇಕಾದ ಅವಶ್ಯಕತೆ ಇದೆ. ಇದು ಪ್ರಾಯಸಂದ ವ್ಯಕ್ತಿಗಳಿಗೆ ಮಾಡುವ ಅವಮಾನವಲ್ಲವೇ? ಹಳೆಯದೆಲ್ಲವನ್ನೂ ಅಜ್ಜನಿಗೆ ಹೋಲಿಸಿ, ಸುಟ್ಟು ಹಿರಿಯನಾಗರಿಕರಿಗೆ ಅಪಮಾನ ಮಾಡುವವರು ತಾವು ಯುವಕರಾಗಿಯೇ ಇರುತ್ತೇವೆ ಎಂದು ಯೋಚಿಸುವುದು ಒಂದು ವಿಪರ್ಯಾಸ.